ಮಕ್ಕಳನ್ನು ಹೊರಹೋಗಲು ಬಿಟ್ಟಿರುವ ಬಗ್ಗೆ ಮೊದಲು ಪೋಷಕರು ಆತ್ಮವಲೋಕನ ಮಾಡಿಕೊಳ್ಳಬೇಕು : ಪ್ರಮೋದ್ ಸಾವಂತ್

ಗೋವಾ, ಜು. 29: ಕಳೆದ ವಾರ ಗೋವಾದ ಬೆನೌಲಿಮ್​ ಕಡಲ ತೀರದ ಬಳಿ ಅಪ್ರಾಪ್ತ ಬಾಲಕಿಯರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಘಟನೆ ದೇಶದಲ್ಲಿ ಸುದ್ದಿಯಾಗಿತ್ತು. ಈ ಘಟನೆ ಕುರಿತು ಇಂದು ವಿಧಾನಸಭೆಯಲ್ಲಿ ಮಾತನಾಡಿರುವ ಮುಖ್ಯಮಂತ್ರಿ ಪ್ರಮೋದ್​ ಸಾವಂತ್​, ತಮ್ಮ ಮಕ್ಕಳನ್ನು ತಡರಾತ್ರಿವರೆಗೆ ಹೊರಗಲು ಬಿಟ್ಟಿರುವ ಬಗ್ಗೆ ಮೊದಲು ಪೋಷಕರು ಆತ್ಮವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿಕೆ ನೀಡಿದ್ದಾರೆ. 14 ವರ್ಷದ ಮಗಳೊಬ್ಬಳು ರಾತ್ರಿ ಪೂರ್ತಿ ಬೀಚ್​ ಬಳಿ ಸಮಯ ಕಳೆಯುತ್ತಾಳೆ. ಈ ಬಗ್ಗೆ ಪೋಷಕರು ಚಿಂತಿಸಬೇಕು. ಮಕ್ಕಳು ಹೇಳಿದ ಮಾತು ಕೇಳಲಿಲ್ಲ ಎಂದರೆ ಸರ್ಕಾರ ಮತ್ತು ಪೊಲೀಸರ ಮೇಲೆ ಜವಾಬ್ದಾರಿ ಹೊರಿಸಲು ಸಾಧ್ಯವಿಲ್ಲ ಎಂಬ ಬೇಜಾವಬ್ದಾರಿ ಹೇಳಿಕೆಯನ್ನು ನೀಡಿದ್ದಾರೆ.

ರಾಜ್ಯದ ಮುಖ್ಯಮಂತ್ರಿ ಜೊತೆಗೆ ಗೃಹ ಮಂತ್ರಿಯಾಗಿರುವ ಪ್ರಮೋದ್​ ಸಾವಂತ್​, ರಾಜ್ಯದಲ್ಲಿ ಹೆಣ್ಣು ಮಕ್ಕಳ ಸುರಕ್ಷತೆ ಬಗ್ಗೆ ನಿಷ್ಕಾಳಜಿಯಾಗಿ ಮಾತನಾಡಿದ್ದು, ಘಟನೆಗೆ ಪ್ರಮುಖ ಕಾರಣ ಅವರ ಪೋಷಕರೇ ಎಂಬ ರೀತಿ ಉತ್ತರ ನೀಡಿದ್ದಾರೆ.

ಪೋಷಕರು ತಮ್ಮ ಮಕ್ಕಳ ಬಗ್ಗೆ ಕಾಳಜಿವಹಿಸಬೇಕು. ಅದರಲ್ಲೂ ಅಪ್ರಾಪ್ತ ಮಕ್ಕಳ ಬಗ್ಗೆ ಹೆಚ್ಚಿನ ನಿಗಾ ಇಡಬೇಕು. ರಾತ್ರಿ ಸಮಯದಲ್ಲಿ ಈ ರೀತಿ ಏಕೆ ಬಿಡಬೇಕು ಎಂಬ ಅರ್ಧದಲ್ಲಿ ಅವರು ಸದನದಲ್ಲಿ ಉತ್ತರಿಸಿದ್ದಾರೆ.

ಮುಖ್ಯಮಂತ್ರಿ ಪ್ರಮೋದ್​ ಸಾವಂತ್​ ಈ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ವಿರೋಧ ಪಕ್ಷ ಕಾಂಗ್ರೆಸ್​ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಅಪರಾಧಿಗಳು ಜೈಲಿನಲ್ಲಿದ್ದರೆ, ಜನರು ಯಾಕೆ ರಾತ್ರಿ ಸಮಯದಲ್ಲಿ ತಿರುಗಾಡಲು ಭಯಪಡಬೇಕು ಎಂದು ಪ್ರಶ್ನಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಗೋವಾ ಫಾರ್ವಡ್​ ಪಾರ್ಟಿ ಶಾಸಕ ವಿಜಯ್​ ಸರ್ದೇಸಾಯಿ, ರಾಜ್ಯದ ಮುಖ್ಯಮಂತ್ರಿಯಾಗಿ ಈ ರೀತಿ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಬಾರದು. ಜನರ ಸುರಕ್ಷತೆ ಕಾಪಾಡುವುದು ರಾಜ್ಯ ಸರ್ಕಾರ ಮತ್ತು ಪೊಲೀಸರ ಕರ್ತವ್ಯವಾಗಿದೆ. ಈ ರೀತಿ ನಿಷ್ಕಾಳಜಿಯಾಗಿ ಮಾತನಾಡುವ ಸಿಎಂಗೆ ಆ ಸ್ಥಾನದಲ್ಲಿ ಕುಳಿತುಕೊಳ್ಳುವ ಹಕ್ಕಿಲ್ಲ ಎಂದು ವಾಗ್ದಾಳಿ ನಡೆಸಿದರು.

ಈ ಹಿಂದೆ ಗೋವಾ ಮಹಿಳೆಯರಿಗೆ ಸುರಕ್ಷಿತ ಸ್ಥಳವಾಗಿತ್ತು. ಬಿಜೆಪಿ ಸರ್ಕಾರ ಬಂದ ಬಳಿಕ ಈ ಹಣೆ ಪಟ್ಟಿ ಕಳಚಿಕೊಂಡಿದೆ. ರಾಜ್ಯದ ಜನರಿಗೆ ಸುರಕ್ಷತೆ ಅಭಯ ನೀಡುವ ಬದಲು ಗೋವಾ ಸಿಎಂ ಘಟನೆಗೆ ಪೋಷಕರನ್ನೇ ಹೊಣೆ ಮಾಡುತ್ತಿದ್ದಾರೆ ಎಂದು ಶಾಸಕ ರೋಹನ್​ ಖವ್ಟೆ ಟ್ವೀಟರ್​ನಲ್ಲಿ ಹರಿಹಾಯ್ದಿದ್ದಾರೆ.

ಏನಿದು ಘಟನೆ:

ಪಣಜಿಯಿಂದ 30 ಕಿ.ಮೀ ದೂರದ ಬೆನೌಲಿಮ್​ ಕಡಲ ತೀರದ ಬಳಿ ಭಾನುವಾರ ಅಪ್ರಾಪ್ತ ಬಾಲಕಿಯರ ಮೇಲಿನ ಅತ್ಯಾಚಾರ ನಡೆಸಲಾಗಿತ್ತು. ಸ್ನೇಹಿತರೆಲ್ಲಾ ಸೇರಿ ಬೀಚ್​ ಬಳಿ ಪಾರ್ಟಿ ನಡೆಸಿದ್ದರು.  ರಾತ್ರಿ ಪಾರ್ಟಿಗೆ ಹೋದ 10 ಜನರಲ್ಲಿ ಆರು ಜನ ಮನೆಗೆ ತೆರಳಿದ್ದು, ಇನ್ನುಳಿದ ಇಬ್ಬರು ಯುವಕರು ಮತ್ತು ಇಬ್ಬರು ಯುವತಿಯರು ಅಲ್ಲಿಯೇ ರಾತ್ರಿ ಕಳೆದಿದ್ದರು. ಈ ವೇಳೆ ಇಬ್ಬರು ಯುವಕರ ಮೇಲೆ ಹಲ್ಲೆ ನಡೆಸಿದ ನಾಲ್ವರು ಯುವತಿಯರ ಮೇಲೆ ಅತ್ಯಾಚಾರ ಎಸಗಿದ್ದಾರೆ.

Exit mobile version