ಬೆಂಗಳೂರು, ಫೆ. 27: ಆರೋಪಿ ಸಿದ್ದಲಿಂಗಸ್ವಾಮಿಯನ್ನು ಫೆ. 25ರಂದು ಪೊಲೀಸರು ಬಂಧಿಸಿದ್ದರು. ಆತನ ಮನೆಯಲ್ಲಿ ಪರಿಶೀಲನೆ ಮಾಡಿಸುವ ಸಲುವಾಗಿ ನಿನ್ನೆ ಆತನ ಮನೆಗೆ ಕರೆದುಕೊಂಡು ಹೋಗಿದ್ದಾಗ ಪೊಲೀಸರನ್ನು ಹೊರಗೆ ತಳ್ಳಿ ಬಾಗಿಲು ಹಾಕಿಕೊಂಡು, ಬಾಲ್ಕನಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಆತ್ಮಹತ್ಯೆ ಸಂಬಂಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೇಸ್ ದಾಖಲಾಗಿದೆ.
ಸಾವಿಗೀಡಾದ ಸಿದ್ದಲಿಂಗಸ್ವಾಮಿ ಪತ್ನಿ ತನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರು ನೀಡಿದ್ದಳು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದ ಪೊಲೀಸರ ವಿರುದ್ಧ ಹಿರಿಯ ಪೊಲೀಸ್ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಸಬ್ ಇನ್ಸ್ಪೆಕ್ಟರ್ ಅನ್ನು ಅಮಾನತುಗೊಳಿಸಲಾಗಿದೆ. ನಿನ್ನೆ ಸ್ಥಳ ಪರಿಶೀಲನೆ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದ ಸಿದ್ದಲಿಂಗಸ್ವಾಮಿ ನಿವೇಶನ ಕೊಡಿಸುವುದಾಗಿ ಹೇಳಿ ಹಲವರಿಗೆ ಲಕ್ಷಾಂತರ ರೂ. ವಂಚಿಸಿದ್ದ. ಆರೋಪಿ ಮನೆಯಲ್ಲಿ ಕೆಲವು ದಾಖಲೆಗಳ ಪರಿಶೀಲನೆ ನಡೆಸಿದ ಪೊಲೀಸರು ಈ ವೇಳೆ ಕಿಚನ್ ನಲ್ಲಿ ಇನ್ನೂ ಕೆಲವು ದಾಖಲೆಗಳು ಇದೆ ಎಂದಿದ್ದ.
ದಾಖಲೆಗಳನ್ನ ತರುವ ನೆಪದಲ್ಲಿ ಹೋಗಿ ಬಾಗಿಲು ಹಾಕಿಕೊಂಡು ಬಾಲ್ಕನಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಪೊಲೀಸರ ವಶದಲ್ಲಿದ್ದ ಆರೋಪಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ. ಕರ್ತವ್ಯ ಲೋಪ ಹಿನ್ನಲೆ ಸಬ್ ಇನ್ಸ್ಪೆಕ್ಟರ್ ಮಂಜುನಾಥ್ ಅವರನ್ನು ಅಮಾನತು ಮಾಡಲಾಗಿದೆ. ಮೇಲ್ನೋಟಕ್ಕೆ ಪೊಲೀಸ್ ಕರ್ತವ್ಯಲೋಪ ಹಿನ್ನಲೆಯಲ್ಲಿ ಅಮಾನತುಗೊಳಿಸಿ ಕಮೀಷನರ್ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.
ಈ ಬಗ್ಗೆ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿಕೆ ನೀಡಿದ್ದು, ಈ ಘಟನೆ ನಡೆದ ಸಂದರ್ಭದಲ್ಲಿ ನಾಲ್ವರು ಪೊಲೀಸ್ ಸಿಬ್ಬಂದಿ ಜೊತೆಗಿದ್ದರು. ಆದರೂ ಸಹ ಇಂತಹ ಘಟನೆ ನಡೆದಿದೆ. ಈ ಪ್ರಕರಣದಲ್ಲಿ ಪೊಲೀಸ್ ವೈಫಲ್ಯ ಕಂಡು ಬಂದಿದೆ. ಓರ್ವ ಸಬ್ ಇನ್ಸ್ಪೆಕ್ಟರ್ನನ್ನು ಈಗಾಗಲೇ ಸಸ್ಪೆಂಡ್ ಮಾಡಲಾಗಿದೆ. ಈ ಪ್ರಕರಣ ಸಿಐಡಿಗೆ ವರ್ಗಾವಣೆ ಸಿದ್ದಲಿಂಗಸ್ವಾಮಿ ಬಿಡಿಎ ನೌಕರನೆಂದು ಹೇಳಿಕೊಂಡು ಸೈಟ್ ಕೊಡಿಸ್ತೀನಿ ಅಂತ ಲಕ್ಷಾಂತರ ರೂ ಹಣ ಪಡೆದು ವಂಚಿಸಿದ್ದ. ನಗರದ ವಿಶ್ವೇಶ್ವರಯ್ಯ ಲೇಔಟ್ ನಲ್ಲಿ ಸೈಟ್ ಕೊಡಿಸುವುದು ಹಾಗೂ ಹಾಲಿ ನಿವೇಶನಕ್ಕೆ ಬದಲಿ ನಿವೇಶನ ಕೊಡಿಸುತ್ತೇನೆ ಎಂದು ಹೇಳಿ ಪಾನಿಪುರಿ ವ್ಯಾಪಾರಿ ನಾಗರಾಜು ಎಂಬುವರಿಗೆ ವಂಚಿಸಿದ್ದ ಎನ್ನಲಾಗಿದೆ. ನಾಗರಾಜು ಮತ್ತು ಅವರ ಸಂಬಂಧಿಕರ ಬಳಿ ಸುಮಾರು 13 ಲಕ್ಷಕ್ಕೂ ಅಧಿಕ ಹಣ ಪಡೆದು ಬಳಿಕ ಸೈಟ್ ಅಗಲಿ ಅಥವಾ ಹಣವಾಗಲಿ ವಾಪಸ್ ಕೊಟ್ಟಿರಲಿಲ್ವಂತೆ. ಈ ಬಗ್ಗೆ ನಾಗರಾಜು 2020ರ ಡಿಸೆಂಬರ್ ನಲ್ಲಿ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲು ಮಾಡಿದ್ದರು.
ಪ್ರಕರಣ ದಾಖಲಾದ ಬಳಿಕ ಆರೋಪಿ ನಾಪತ್ತೆಯಾಗಿದ್ದ. ಪೊಲೀಸರು ಆರೋಪಿಗಾಗಿ ಶೋಧ ನಡೆಸಿದರು ಸಿಕ್ಕಿರಲಿಲ್ಲ. ಮಂಡ್ಯದ ಮಳವಳ್ಳಿ ಬಳಿ ಆತನನ್ನ ವಶಕ್ಕೆ ಪಡೆದು ಫೆಬ್ರವರಿ 25ರಂದು ಪೊಲೀಸರು ಬಂಧಿಸಿದ್ದರು.