ನವದೆಹಲಿ, ಡಿ. 07: ಕೇಂದ್ರ ಸರ್ಕಾರ ನೂತನ ಕೃಷಿ ಕಾನೂನುಗಳನ್ನು ರದ್ದುಪಡಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ಒಗ್ಗಟ್ಟಿನ ಪ್ರದರ್ಶನದೊಂದಿಗೆ ಪಂಜಾಬಿನ ಕೆಲ ಕ್ರೀಡಾಪಟುಗಳು ಸೇರಿದಂತೆ ಎರಡು ಬಾರಿ ಏಷ್ಯನ್ ಗೇಮ್ಸ್ ಗೋಲ್ಡ್ ವಿನ್ನರ್ ಮಾಜಿ ಕುಸ್ತಿಪಟು ಕರ್ತಾರ್ ಸಿಂಗ್ ನೇತೃತ್ವದಲ್ಲಿ 35 ರಾಷ್ಟ್ರೀಯ ಪ್ರಶಸ್ತಿಗಳನ್ನು ಹಿಂತಿರುಗಿಸಲು ರಾಷ್ಟ್ರಪತಿ ಭವನದತ್ತ ಹೊರಟ ಕ್ರೀಡಾಪಟುಗಳನ್ನು ಮಾರ್ಗ ಮಧ್ಯದಲ್ಲಿಯೇ ಪೊಲೀಸರು ತಡೆದಿದ್ದಾರೆ.
1982ರಲ್ಲಿ ಅರ್ಜನ ಪ್ರಶಸ್ತಿ ಹಾಗೂ 1987ರಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದ ಮಾಜಿ ಹಾಕಿ ಆಟಗಾರ ಗುಮ್ರಾಲಿ ಸಿಂಗ್ ಮತ್ತು ಮಾಜಿ ಮಹಿಳಾ ಹಾಕಿ ಕ್ಯಾಪ್ಟನ್ ರಾಜ್ಬೀರ್ ಕೌರ್ ಮತ್ತಿತರರು ಇದ್ದರು. ಗುಮ್ರಾಲಿಗೆ 2014ರಲ್ಲಿ ದ್ರೋಣಾಚಾರ್ಯ, ರಾಜ್ಬೀರ್ ಗೆ 1984ರಲ್ಲಿ ಅರ್ಜುನ ಪ್ರಶಸ್ತಿಯನ್ನು ನೀಡಲಾಗಿತ್ತು.
ರೈತರು ಯಾವಾಗಲೂ ನಮ್ಮನ್ನು ಬೆಂಬಲಿಸಿದ್ದು, ಮುಚ್ಚಿದ ರಸ್ತೆಗಳಲ್ಲಿ ಅವರ ಮೇಲಿನ ಲಾಠಿಚಾರ್ಜ್ ಕಂಡು ದು:ಖವಾಯಿತು. ತಮ್ಮ ಹಕ್ಕುಗಳಿಗಾಗಿ ರೈತರು ಕೊರೆಯುವ ಚಳಿಯಲ್ಲಿ ಬೀದಿಯಲ್ಲಿ ಕುಳಿತು ಹೋರಾಟ ಮಾಡುತ್ತಿರುವುದಾಗಿ 1978 ಮತ್ತು 1986ರ ಚಿನ್ನದ ಪದಕ ವಿಜೇತೆ ಕರ್ತಾರ್ ತಿಳಿಸಿದರು.
ಭಾನುವಾರ ದೆಹಲಿ ತಲುಪಿದ ಕ್ರೀಡಾಪಟುಗಳು, ಪ್ರೆಸ್ ಕ್ಲಬ್ ಆಫ್ ಇಂಡಿಯಾದಿಂದ ಮೆರವಣಿಗೆ ಆರಂಭಿಸಿದರು. ಆದರೆ, ಅವರನ್ನು ಕೃಷಿ ಭವನದ ಬಳಿ ತಡೆದ ಪೊಲೀಸರು ವಾಪಸ್ ಕಳುಹಿಸಿದರು.