ಬೆಂಗಳೂರಿನಲ್ಲಿ ಹಾಡುಹಗಲೇ ರೌಡಿಶೀಟರ್‌ ಬರ್ಬರ ಹತ್ಯೆ

ಬೆಂಗಳೂರು, ಜು. 19: ಪತ್ನಿಯ ಜೊತೆ ಬ್ಯಾಂಕ್‌ಗೆ ಬಂದಿದ್ದ ರೌಡಿಶೀಟರ್​ನನ್ನು ಕೋರಮಂಗಲದಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಬೆಂಗಳೂರಿನ ಕೋರಮಂಗಲದಲ್ಲಿರುವ ಯೂನಿಯನ್ ಬ್ಯಾಂಕ್‌ ಶಾಖೆಗೆ ನುಗ್ಗಿ ರೌಡಿಶೀಟರ್​ನನ್ನು ಹತ್ಯೆ ಮಾಡಲಾಗಿದೆ. ಮಧ್ಯಾಹ್ನ 1.30ರ ಸುಮಾರಿಗೆ ಹತ್ಯೆ ನಡೆದಿದೆ. 

ಹತ್ಯೆಗೀಡಾದ ಆಡುಗೋಡಿ ರೌಡಿಶೀಟರ್ ಜೋಸೆಫ್​ ಅಲಿಯಾಸ್ ಬಬ್ಲಿ ತನ್ನ ಪತ್ನಿಯ ಜೊತೆ ಕೋರಮಂಗಲದ 8ನೇ ಬ್ಲಾಕ್‌ನಲ್ಲಿನ ಯೂನಿಯನ್  ಬ್ಯಾಂಕ್‌ಗೆ ಬಂದಿದ್ದ.  ದುಷ್ಕರ್ಮಿಗಳು ಆತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು  ಪರಾರಿಯಾಗಿದ್ದಾರೆ.  ಮುಖಕ್ಕೆ ಬಟ್ಟೆ ಸುತ್ತಿಕೊಂಡು ಬೈಕ್‌ಗಳಲ್ಲಿ ಬಂದಿದ್ದ 8 ಮಂದಿ ಹಂತಕರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದು ಪರಾರಿಯಾಗಿದ್ದಾರೆ.

ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್. ಸ್ಥಳಕ್ಕೆ ಆಗ್ನೇಯ ಡಿಸಿಪಿ ಜೋಶಿ ಶ್ರೀನಾಥ್‌ ಮಹದೇವ್‌ ಭೇಟಿ ನೀಡಿದ್ದಾರೆ. ಮಾಹಿತಿ ತಿಳಿದ ಕೂಡಲೇ ಮಡಿವಾಳ ಎಸಿಪಿ ಸುಧೀರ್ ಹೆಗ್ಗಡೆ  ಸಹ ದೌಡಾಯಿಸಿದ್ದಾರೆ. ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.  ಘಟನಾ ಸ್ಥಳಕ್ಕೆ ಡಾಗ್ ಸ್ಕ್ವಾಡ್ ತಂಡ ಮತ್ತು ಎಫ್ಎಸ್ಎಲ್ ತಂಡದವರು ಭೇಟಿ ನೀಡಿದ್ದಾರೆ.

ಕೊಲೆಯಾದ ವ್ಯಕ್ತಿ ಬಬ್ಲಿ ಕೊರಮಂಗಲದ ರಾಜೇಂದ್ರ ಮತ್ತು ವಿವೇಕ ನಗರದ ಜಾರ್ಜ್ ಎಂಬಾತನ ಜೊತೆ ಹಳೆ ದ್ವೇಷ ಹೊಂದಿದ್ದ ಎನ್ನಲಾಗಿದೆ. ಕಂಟ್ರ್ಯಾಕ್ಟರ್ ಕೆಲಸ ಮಾಡುತ್ತಿದ್ದ ಬಬ್ಲಿಯನ್ನು ಕೊಲೆಗೈದಿದ್ದಾರೆ. ಆತ ಹೆಂಡತಿ ಮತ್ತು ಮಗಳ ಜೊತೆ ದ್ವಿ ಚಕ್ರವಾಹನದಲ್ಲಿ ಬ್ಯಾಂಕ್​ಗೆ ಬಂದಿದ್ದ. ದುಷ್ಕರ್ಮಿಗಳು ಬಬ್ಲಿಯ ಬೆನ್ನು ಹತ್ತಿ ಬ್ಯಾಂಕ್ ಒಳಗೆ ನುಗ್ಗಿ, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ, ಹತ್ಯೆ ಮಾಡಿದ್ದಾರೆ. ಆರೋಪಿಗಳ ಬಗ್ಗೆ ಸುಳಿವು ಸಂಗ್ರಹಿಸಿ ತನಿಖೆ ನಡೆಯುತ್ತಿದೆ. 2011 ರವರೆಗೂ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಬಳಿಕ ಯಾವುದೇ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿರಲಿಲ್ಲ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ಹೇಳಿದ್ದಾರೆ.

Exit mobile version