ಸಾಹಿತಿ ಭಗವಾನ್ ಅವರಿಗೆ ಮಸಿ ಬಳಿದ ಪ್ರಕರಣ: ಹಿಂದೂ ಧರ್ಮವನ್ನು ಟಾರ್ಗೆಟ್ ಮಾಡೋರಿಗೆ ಇದೆ ಶಾಸ್ತಿ: ಮುತಾಲಿಕ್

ಬೆಂಗಳೂರು, ಫೆ. 05: ಸಾಹಿತಿ ಭಗವಾನ್‌ ಅವರಿಗೆ ಮಸಿ ಬಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಹಿಂದೂ ಧರ್ಮವನ್ನು ಟಾರ್ಗೆಟ್ ಮಾಡೋರಿಗೆ ಇದೇ ಶಾಸ್ತಿ ಎಂದಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಾಹಿತಿ ಪ್ರೊ. ಕೆ.ಎಸ್.ಭಗವಾನ್‌ ಅವರಿಗೆ ಮಸಿ ಬಳಿದಿರುವ ವಕೀಲೆ ಮೀರಾ ರಾಘವೇಂದ್ರ ಅವರನ್ನು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರು ಬೆಂಬಲಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮುತಾಲಿಕ್‌, ʻಹಿಂದೂ ಧರ್ಮವನ್ನು ಯಾರ‍್ಯಾರು ಟಾರ್ಗೆಟ್ ಮಾಡುತ್ತಾರೊ ಅವರಿಗೆಲ್ಲಾ ಇದೇ ಶಾಸ್ತಿ ಆಗಬೇಕುʼ ಎಂದು ಸಮರ್ಥಿಸಿಕೊಂಡಿದ್ದಾರೆ.
ʻಲಂಗು ಲಗಾಮಿಲ್ಲದೇ ಮಿತಿ ಮೀರಿ ಮಾತನಾಡಿದರೆ, ಹಿಂದೂ ಧರ್ಮದ ಧಾರ್ಮಿಕತೆಗೆ ಧಕ್ಕೆ ತಂದರೆ ಹೀಗೆ ಮಾಡಬೇಕು ಎಂದು ಮೀರಾ ರಾಘವೇಂದ್ರ ಹೇಳಿಕೆ ನೀಡಿದ್ದರು.

ಆದರೆ, ಮೀರಾ ಅವರ ನಡೆಯನ್ನು ಪ್ರೊ.ಭಗವಾನ್ ಅವರ ವಕೀಲ ಸೂರ್ಯ ಮುಕುಂದ ರಾಜ್ ವಿರೋಧಿಸಿದ್ದಾರೆ. ʻಯಾರೂ ಆದರೂ ಕಾನೂನು ಕೈಗೆತ್ತಿಕೊಳ್ಳಬಾರದು. ಏನೇ ಕೋಪ ಇದ್ದರೂ ಕಾನೂನಾತ್ಮಕ ಹೋರಾಟ ಮಾಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

Exit mobile version