ಸಾಂವಿಧಾನಿಕ ಚೌಕಟ್ಟಿನಲ್ಲಿ ಕರ್ತವ್ಯ ನಿರ್ವಹಣೆ: ಕಿರಣ್ ಬೇಡಿ

ಪುದುಚೇರಿ,ಫೆ.17: ಭಾರತೀಯ ಪೊಲೀಸ್ ಸೇವೆಗೆ ಸೇರಿದ ಕಿರಣ್ ಬೇಡಿಯವರು ಉತ್ತಮ ಸೇವೆ ಸಲ್ಲಿಸಿದವರು. ಪುದುಚೇರಿಯಂತಹ ಕೇಂದ್ರಾಡಳಿತ ಪ್ರದೇಶದಲ್ಲಿ ಲೆಫ್ಟಿನೆಂಟ್ ಗವರ್ನರ್ ಆಗಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದು ಜೀವನದಲ್ಲಿ ಒಂದು ವಿಶಿಷ್ಟ ಅನುಭವವಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುತ್ತಿದ್ದೇನೆ ಎಂದಿದ್ದಾರೆ.

‘ನಾನು ಸಾಂವಿಧಾನಿಕ ಮತ್ತು ನೈತಿಕ ಜವಾಬ್ದಾರಿಯಿಂದ ಕರ್ತವ್ಯಗಳನ್ನು ನಿರ್ವಹಿಸಿದ್ದೇನೆ. ನನಗೆ ಸಹಕಾರ ನೀಡಿ ಕೆಲಸ ಮಾಡಿದವರಿಗೂ ಈ ಸಂದರ್ಭದಲ್ಲಿ ಧನ್ಯವಾದ ಹೇಳುತ್ತೇನೆ’ ಎಂದು ಬೇಡಿ ತಿಳಿಸಿದ್ದಾರೆ.
ಕಿರಣ್ ಬೇಡಿ ಅವರು ತಮ್ಮ ಅಧಿಕಾರಾವಧಿಯಲ್ಲಿ ‘ಟೀಮ್ ರಾಜ್ ನಿವಾಸ್’ ಸಾರ್ವಜನಿಕ ಹಿತಾಸಕ್ತಿಗಾಗಿ ಹೆಚ್ಚಿನ ಶ್ರದ್ಧೆಯಿಂದ ಕೆಲಸ ಮಾಡಿದೆ ಎಂಬ ತೃಪ್ತಿ ಇದೆ ಎಂದು ಹೇಳಿದ್ದಾರೆ.

‘ಪುದುಚೇರಿ ಕೇಂದ್ರಾಡಳಿತ ಪ್ರದೇಶಕ್ಕೆ ಉಜ್ವಲ ಭವಿಷ್ಯವಿದೆ’ ಎಂದಿರುವ ಅವರು, ‘ಇಂಥ ಭವಿಷ್ಯವನ್ನು ರೂಪಿಸುವುದು ಜನರ ಕೈಯಲ್ಲಿದೆ’ ಎಂದಿದ್ದಾರೆ. ಜತೆಗೆ ‘ಪುದುಚೇರಿ ಸಮೃದ್ಧವಾಗಿ ಬೆಳೆಯಲಿ’ ಎಂದು ಹಾರೈಸಿದ್ದಾರೆ.

ಮಂಗಳವಾರ ನಡೆದ ಅಚ್ಚರಿಯ ಬೆಳವಣಿಗೆಯಲ್ಲಿ ಪುದುಚೇರಿಯ ಲೆಫ್ಟಿನೆಂಟ್ ಗರ್ವನರ್ ಹುದ್ದೆಯಿಂದ ಕಿರಣ್ ಬೇಡಿ ಅವರನ್ನು ವಜಾಗೊಳಿಸಲಾಯಿತು. ರಾಷ್ಟ್ರಪತಿ ಭವನದಿಂದಲೇ ಈ ಅಧಿಕೃತ ಅದೇಶ ಪ್ರಕಟಗೊಂಡಿತು. ಈ ಘಟನೆ ನಡೆಯುವ ವಾರದ ಹಿಂದೆ ಮುಖ್ಯಮಂತ್ರಿ ವಿ.ನಾರಾಯಣ ಸ್ವಾಮಿ ಅವರು ಕಿರಣ್ ಬೇಡಿ ಅವರನ್ನು ವಾಪಸ್ ಕರೆಸಿಕೊಳ್ಳುವಂತೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಒತ್ತಾಯಿಸಿದ್ದರು.

ಕಿರಣ್ ಬೇಡಿ ವಜಾಗೊಂಡಿದ್ದನ್ನು ‘ಇದು ಪ್ರಜೆಗಳ ಹಕ್ಕಿಗೆ ದೊರೆತ ಜಯ’ ಎಂದು ಮುಖ್ಯಮಂತ್ರಿ ವಿ. ನಾರಾಯಣ ಸ್ವಾಮಿ ಹೇಳಿದ್ದಾರೆ.
ಬೇಡಿಯವರಿಂದ ತೆರವಾಗಿರುವ ಜಾಗಕ್ಕೆ ಹೊಸಬರು ನೇಮಕವಾಗುವವರೆಗೂ ತೆಲಂಗಾಣದ ರಾಜ್ಯಪಾಲರಾದ ತಮಿಳ್‌ಸಾಯಿ ಸೌಂದರ್‌ರಾಜನ್ ಅವರಿಗೆ ಪುದುಚೇರಿಯ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

Exit mobile version