Shivamogga: ಶಿವಮೊಗ್ಗ (Shivamogga) ಜಿಲ್ಲೆಯ ಕೆಲವೆಡೆ ಲೀಸ್ ಅವಧಿ ಮುಗಿದರೂ ಮರಳು ತೆಗೆಯುವ ಕಾರ್ಯ ನಡೆಯುತ್ತಿದ್ದು ಈಗಾಗಲೇ ಅಂತಹ ಕಡೆಗಳಲ್ಲಿ ದಾಳಿ ಸಹ ನಡೆದಿದೆ. 2022-23ನೇ ಸಾಲಿನಲ್ಲಿ 35.38 ಲಕ್ಷ ರೂ. ದಂಡ ವಿಧಿಸಲಾಗಿದ್ದು, ಒಟ್ಟು 620.5 ಮೆಟ್ರಿಕ್ ಟನ್ ಮರಳು ವಶಕ್ಕೆ ಪಡೆಯಲಾಗಿದೆ.
ಪ್ರಭಾವಿಗಳ ನೆರಳಿನಲ್ಲಿ ಮರಳು ದಂಧೆ ಎಗ್ಗಿಲ್ಲದೇ ನಡೆಯುತ್ತಿದ್ದು, ಇದು ಆಡಳಿತ ಯಂತ್ರದ ಕೈ ಕಟ್ಟಿಹಾಕಿದೆ ಮತ್ತು ಜಿಲ್ಲೆಯಲ್ಲಿ ಒಟ್ಟು 33 ಅಧಿಕೃತ ಮರಳು ಕ್ವಾರಿಗಳಿವೆ. ಆದರೆ ಅನಧಿಕೃತವಾಗಿ ಲೆಕ್ಕವೇ ಇಲ್ಲದಷ್ಟು ಕ್ವಾರಿಗಳು ನದಿಯ ಒಡಲು ಘಾಸಿಗೊಳಿಸುತ್ತಿವೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರಂತರ ದಾಳಿಗಳು ನಡೆಸಿದರೂ ದಂಧೆಗೆ ತಡೆಯೊಡ್ಡಲು ಸಾಧ್ಯವಾಗುತ್ತಿಲ್ಲ. ತಾಲೂಕು ಮರಳು ಉಸ್ತುವಾರಿ ಸಮಿತಿಗಳೂ ಕೈಕಟ್ಟಿ ಕುಳಿತಿವೆ.
ಅಧಿಕೃತ ಮರಳು ಕ್ವಾರಿಗಳನ್ನು ಪಡೆದವರೂ ನಿಗದಿಪಡಿಸಿ ಜಾಗಕ್ಕಿಂತ ಹೆಚ್ಚಿನ ಪ್ರದೇಶದಲ್ಲಿ ಮರಳು ಎತ್ತುವ ಮೂಲಕ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ ಅಧಿಕೃತ ಮೂಲಗಳ ಪ್ರಕಾರ, ಹೊಸನಗರದಲ್ಲಿ ಶೇಕಡಾ.80 ರಷ್ಟು ಕ್ವಾರಿಗಳು ಅಕ್ರಮವಾಗಿ ನಡೆಯುತ್ತಿದ್ದು, ಕದ್ದುಮುಚ್ಚಿ ಸ್ಥಳೀಯರ ಸಹಕಾರದಿಂದ ಮರಳು ದಂಧೆ ನಡೆಯುತ್ತಿರುವ ಆರೋಪಗಳಿರುವುದರಿಂದ ಇದರ ಕಡೆಗೆ ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಇಲಾಖೆಗಳು ಗಮನಹರಿಸಬೇಕಿದೆ.
ಮರಳಷ್ಟೇ ಅಲ್ಲ, ಮಣ್ಣೂ ಬಿಡುತ್ತಿಲ್ಲ
ಮರಳಿನೊಂದಿಗೆ ಮಣ್ಣಿನ ದಂಧೆಯೂ ಕೂಡ ತಲೆಎತ್ತಿದ್ದು, ಅಕ್ರಮವಾಗಿ ನದಿಯ ತಳಭಾಗದಲ್ಲಿ ಭೂಮಿಯನ್ನು ಅಗೆದು ಫಿಲ್ಟರ್ (Filter) ಮರಳನ್ನು ಮಾರಾಟ ಮಾಡಲಾಗುತ್ತಿದೆ. ಇತ್ತೀಚೆಗೆ ಹೊಳೆ ಹೊನ್ನೂರಿನಲ್ಲಿ (Honnur) ಇಂತಹದ್ದೇ ಪ್ರಕರಣ ಪತ್ತೆಯಾಗಿದ್ದು, ನದಿಯಿಂದಲೇ ಮೋಟರ್ ಮೂಲಕ ನೀರು ಕಾಲಿಗೊಳಿಸಿ ಮರಳನ್ನು ಜೆಸಿಬಿ (JCB), ಟ್ರ್ಯಾಕ್ಟರ್ ಮೋಟರ್ಗಳು, ಟಿಲ್ಲರ್ಗಳನ್ನು ಇದಕ್ಕಾಗಿ ಬಳಸಿ ಮಣ್ಣಿನ ಅಂಶ ಇಲ್ಲದ ಹಾಗೆ ಸ್ವಚ್ಛಗೊಳಿಸಿ ರಾಜಾರೋಷವಾಗಿ ಮಾರಾಟ ಮಾಡುವುದು ಕಂಡು ಬಂದಿದ್ದು, ಇದರಿಂದ ಸ್ಥಳೀಯ ಪರಿಸರ ಹಾಳಾಗುವುದಲ್ಲದೇ ನೀರು ಕಲುಷಿತಗೊಳ್ಳುತಿದೆ.
ನದಿ ಮಾತ್ರವಲ್ಲದೇ ಬಗರ್ ಹುಕುಂ ಭೂಮಿಗಳಲ್ಲೂ ಮಣ್ಣಿನ ದಂಧೆ ಜೋರಾಗಿ ನಡೆಯುತ್ತಿದೆ. ಇದರಿಂದ ದೊಡ್ಡ-ದೊಡ್ಡ ಹೊಂಡಗಳೇ ಉಂಟಾಗುತ್ತಿವೆ. ಇಷ್ಟಾದರೂ ಸ್ಥಳೀಯ ಆಡಳಿತ ಕಣ್ಮುಚ್ಚಿ ಕುಳಿತಿದೆ ಎಂಬ ಆಪಾದನೆಗಳು ಕೇಳಿಬರುತ್ತಿವೆ.
ನದಿ ಪಾತ್ರವೇ ವಿಕಾರ
ಎಲ್ಲ ನಿಯಮಗಳನ್ನು ಮೀರಿ ಅನಧಿಕೃತವಾಗಿ ಮರಳೆತ್ತುವ ಮೂಲಕ ನದಿ ಪಾತ್ರವನ್ನೇ ವಿಕಾರಗೊಳಿಸಲಾಗುತ್ತಿದೆ. ಈ ವರ್ಷ ಮಳೆ ಕೊರತೆಯಿಂದಾಗಿ ಬಹುತೇಕ ನದಿಗಳಲ್ಲಿ ನೀರಿನ ಹರಿವು ಕಡಿಮೆ ಇದೆ. ಹೀಗಾಗಿ, ಮನಸೋಇಚ್ಛೆ ಮರಳು ಲೂಟಿ ನಡೆಯುತ್ತಿದೆ. ಇದು ಇದೇ ರೀತಿ ಮುಂದುವರಿದು ಭಾರಿ ಮಳೆಯಾದರೆ ನದಿಯ ಅಕ್ಕಪಕ್ಕ ವಾಸಿಸುವವರಿಗೆ ತೊಂದರೆಯಾಗುವ ಸಾಧ್ಯತೆಯೂ ಇದೆ.ಅನಧಿಕೃತ ಮರಳಿನಿಂದ ಸಾರ್ವಜನಿಕರಿಗೆ ಮಾತ್ರವಲ್ಲದೇ ಸರಕಾರಕ್ಕೆ ಬರಬೇಕಾದ ರಾಜಸ್ವ ಖೋತಾ ಆಗುತ್ತಿದೆ.
ಅಪಾಯಗಳೇನು?
ಜಲಚರಗಳಿಗೆ ಜೀವವೈವಿಧ್ಯಗಳಿಗೆ ತೊಂದರೆ
ಅನಿಯಮಿತ ಮರಳೆತ್ತುವುದರಿಂದ ನದಿ ಪಾತ್ರ ಬೇರೆಡೆ ತಿರುಗುವ ಆತಂಕ
ನದಿಯಲ್ಲೇ ಯಂತ್ರ ಬಳಕೆಯಿಂದ ನೀರು ಕಲುಷಿತ
ಜಿಲ್ಲಾದ್ಯಂತ ದಾಳಿ ನಡೆಸಲಾಗಿದ್ದು, ಅನಧಿಕೃತವಾಗಿ ಮರಳು ತೆಗೆಯುತ್ತಿದ್ದ ಯಂತ್ರೋಪಕರಣಗಳನ್ನು ವಶಕ್ಕೆ ಪಡೆಯಲಾಗಿದೆ. ಮತ್ತು ನದಿಯಲ್ಲಿ ನೀರು ಕಡಿಮೆ ಇರುವುದರಿಂದ ಹಲವೆಡೆ ಮರಳು ದಂಧೆ ನಡೆಯುತ್ತಿರುವುದು ಗಮನಕ್ಕೆ ಬಂದಿದ್ದೇ ಅಂತಹ ಕಡೆ ದಾಳಿ ಮಾಡಲಾಗಿದೆ. 2022-23 ರಲ್ಲಿ 35.38 ಲಕ್ಷ ರೂ. ದಂಡ ವಿಧಿಸಲಾಗಿದೆ.
ಹಿರಿಯ ಅಧಿಕಾರಿ “ಪಿ.ಎಸ್.ನವೀನ್” (P S Naveen) ಗಣಿ ಮತ್ತು ಭೂವಿಜ್ಞಾನ ಇಲಾಖೆ, ಶಿವಮೊಗ್ಗ (Shivamogga)
–ಮೇಘಾ ಮನೋಹರ ಕಂಪು.