ಬೆಂಗಳೂರು, ಜ. 31: ಕೋವಿಡ್ ಪಾಸಿಟಿವ್ ಇದ್ದ ಕಾರಣ ಶಶಿಕಲಾ ಅವರನ್ನು ಜನವರಿ 21 ರಂದು ಬೆಂಗಳೂರಿನ ವಿಕ್ಟೋರಿಯಾ ಅಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಶಿಕ್ಷೆ ಅವಧಿ ಮುಗಿದ ಕಾರಣ ಜನವರಿ 27 ರಂದು ಜೈಲು ಅಧಿಕಾರಿಗಳು ಶಶಿಕಲಾ ಅವರಿಗೆ ಬಿಡುಗಡೆ ಭಾಗ್ಯ ನೀಡಿದ್ದರು. ಆಸ್ಪತ್ರೆಯಲ್ಲೆ ಶಶಿಕಲಾ ಅವರ ಸಹಿ ಪಡೆದು ಕಾನೂನಾತ್ಮಕ ಪ್ರಕ್ರಿಯೆ ತರುವಾಯ ಜೈಲಿನಿಂದ ಬಿಡುಗಡೆ ಆಗಿದ್ದೀರಾ ಎಂದು ಜೈಲು ಅಧಿಕಾರಿಗಳು ಘೋಷಿಸಿದ್ದರು.
ಕೊರೊನಾ ಪಾಸಿಟಿವ್ ಇದ್ದ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ ಕಾರಣ ಇಂದು ಶಶಿಕಲಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರು. ಶಶಿಕಲಾ ಅವರು ಈಗ ತಮಿಳುನಾಡಿಗೆ ಹೋಗದೆ ಬೆಂಗಳೂರಿನ ಹೊರ ವಲಯದ ಸ್ನೇಹಿತರ ಐಷರಾಮಿ ಮನೆಯಲ್ಲಿ ಇದ್ದಾರೆ.
ಫೆಬ್ರವರಿ 11ರ ಅಮಾವಾಸ್ಯೆ ನಂತರ ಅದ್ದೂರಿ ಮೆರವಣಿಗೆಯ ಮೂಲಕ ಶಶಿಕಲಾ ತಮಿಳುನಾಡಿಗೆ ಎಂಟ್ರಿ ಕೊಡಲಿದ್ದಾರೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದಂತೆ ಖಾಸಗಿ 11 ಅಂಗರಕ್ಷಕರು ಶಶಿಕಲಾ ಅವರ ಸೆಕ್ಯರಿಟಿಗಾಗಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ. ನಾಳೆ ಅಥವಾ ನಾಡಿದ್ದು ಟಿಟಿವಿ ದಿನಕರನ್ ಶಶಿಕಲಾ ಅವರನ್ನು ಭೇಟಿ ಮಾಡಿ ತಮಿಳುನಾಡಿನ ಸದ್ಯದ ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಜಯಲಲಿತಾ ಆಪ್ತೆ ಶಶಿಕಲಾ ಚುನಾವಣೆಯ ಅಖಾಡಕ್ಕೆ ಇಳಿಯುವ ಕಾರಣ ತಮಿಳುನಾಡಿನ ರಾಜಕಾರಣ ಮತ್ತಷ್ಟು ರಂಗು ಪಡೆಯಲಿದೆ.