Bengaluru: ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ‘ಸೇವ್ ಬಂಡೀಪುರ ‘(Save Bandipura) ಅನ್ನೋ ಹ್ಯಾಷ್ ಟ್ಯಾಗ್ ಬಹಳ ಸದ್ದು ಮಾಡ್ತಿದೆ. ಇಷ್ಟಕ್ಕೂ ಏನಿದು ಸೇವ್ ಬಂಡೀಪುರ.? ಟ್ರೆಂಡಿಂಗ್ ಯಾಕೆ ಅಂತ ನೋಡುವುದಾದರೆ
ಮೈಸೂರು (Mysore) ಭಾಗಕ್ಕೆ ಬಂಡೀಪುರ ಮತ್ತು ನಾಗರಹೊಳೆ ಕಾಡುಗಳು ಎರಡು ಕಣ್ಣು ಇದ್ದಹಾಗೆ. ಅಭಿವೃದ್ಧಿ ಹೆಸರಿನಲ್ಲಿ ನಮ್ಮ ಕಾಡನ್ನು ನಾಶಪಡಿಸುವ ಎಲ್ಲಾ ಚಟುವಟಿಕೆಗಳು ನಿಲ್ಲಬೇಕು. ಕರ್ನಾಟಕ ಸರ್ಕಾರ ರೈಲು ಸಮೀಕ್ಷೆಗೆ ಅವಕಾಶ ನೀಡಬಾರದು ಮತ್ತು ಆ ಯೋಜನೆಗಳನ್ನು ತಿರಸ್ಕರಿಸಬೇಕು. ಹಾಗೂ ಬಂಡೀಪುರದಲ್ಲಿ (Bandipura) ರಾತ್ರಿ ಸಂಚಾರ ನಿಷೇಧವನ್ನು ಮುಂದುವರೆಸಬೇಕು, ಎನ್ನುವ ಹಲವು ಪೋಸ್ಟ್ ಗಳು ಈ ಸಂದರ್ಭದಲ್ಲಿ ವೈರಲ್ ಆಗ್ತಿದೆ.
ಮೈಸೂರು, ಚಾಮರಾಜನಗರ (Chamarajanagar) ಭಾಗದ ಪ್ರಮುಖ ಕಾಡುಗಳಾದ ಬಂಡೀಪುರ ಹಾಗೂ ನಾಗರಹೊಳೆ ಕಾಡುಗಳು ತನ್ನ ಪ್ರಕೃತಿ ಸೌಂದರ್ಯಕ್ಕೆ ತನ್ನದೇ ಆದ ಅಭಿಮಾನಿಗಳನ್ನು ಹೊಂದಿದೆ. ಆದರೆ, ಈ ಕಾಡುಗಳಿಗೆ ಈಗ ಅಭಿವೃದ್ಧಿ ಹೆಸರನಲ್ಲಿ ಕಂಟಕ ಶುರುವಾಗುತ್ತಿದೆ ಎನ್ನುವುದು ಪರಿಸರವಾದಿಗಳ ಅಕ್ರೋಶವಾಗಿದೆ.ಇತ್ತೀಚೆಗೆ ರಾಜ್ಯದ ಅರಣ್ಯ ಸಚಿವ ಈಶ್ವರ್ ಖಂಡ್ರೆ (Eshwar Khandre) ಅವರು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಿದಂತಹ ಸಮಯದಲ್ಲಿ ನೆರೆ ರಾಜ್ಯವಾದ ಕೇರಳ ಸರ್ಕಾರದ ಮನವಿಯಂತೆ, ಬಂಡೀಪುರ ಪ್ರದೇಶದಲ್ಲಿ ರಾತ್ರಿ ಸಂಚಾರ ನಿಷೇಧವನ್ನು ಸಡಿಲಿಕೆಗೊಳಿಸುವ ಸುಳಿವನ್ನು ನೀಡಿದ್ದರು.
ಅಷ್ಟೇ ಅಲ್ಲ, ಕೇರಳದ (Kerala) ನಿಲಂಬೂರು ಮತ್ತು ಕರ್ನಾಟಕದ ನಂಜನಗೂಡಿಗೆ ವಯನಾಡಿನ ಮೂಲಕ ರೈಲು ಸಂಪರ್ಕ ಕಲ್ಪಿಸುವ ನಿಲಂಬೂರು-ನಂಜನಗೂಡು ರೈಲ್ವೆ ಯೋಜನೆಗೆ ಅಂತಿಮ ವರದಿ ಸಿದ್ಧಪಡಿಸಲು ವೈಮಾನಿಕ ಸಮೀಕ್ಷೆ ಪೂರ್ಣಗೊಂಡ ಬೆನ್ನಲ್ಲೇ ‘ಸೇವ್ ಬಂಡೀಪುರ’ ಪೋಸ್ಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ (Trending) ಆಗಿವೆ.ಎಂದಿನಂತೆ ಕಾಡಿನಲ್ಲಿ ರಾತ್ರಿ ಸಮಯದಲ್ಲಿ ಸಂಚಾರ ನಿಷೇಧ ಯಥಾಸ್ಥಿತಿಯಲ್ಲಿಡುವಂತೆ ಒತ್ತಾಯ ಕೇಳಿ ಬರುತ್ತಿದೆ. ಹಾಗಾಗಿ ಪರಿಸರ ಪ್ರೇಮಿಗಳೆಲ್ಲ ಒಟ್ಟಾಗಿ ಸೇರಿಕೊಂಡು ಜಾಲತಾಣದಲ್ಲಿ’ ಸೇವ್ ಬಂಡೀಪುರ ‘ ಎಂಬ ಅಭಿಯಾನ ಆರಂಭಿಸಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನವನ್ನು ಮಾಡುತ್ತಿದ್ದಾರೆ.
ಅಕ್ಷತಾ ಹೆಗ್ಡೆ