ಶ್ರೀನಗರದಲ್ಲಿ ಭದ್ರತಾ ಪಡೆಯ ಎನ್ ಕೌಂಟರ್: ಎಲ್‌ಇಟಿಯ ಇಬ್ಬರು ಉಗ್ರರ ಹತ್ಯೆ

ಶ್ರೀನಗರ, ಜು. 19: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭಾನುವಾರ ರಾತ್ರಿ ನಡೆದ ಎನ್‌ಕೌಂಟರ್‌ನಲ್ಲಿ ಲಷ್ಕರ್‌ ಎ ತಯಬಾ(ಎಲ್‌ಇಟಿ) ಸಂಘಟನೆಯ ಕಮಾಂಡರ್‌ ಸೇರಿದಂತೆ ಇಬ್ಬರು ಉಗ್ರರು ಹತರಾಗಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದರು.

ದಕ್ಷಿಣ ಕಾಶ್ಮೀರದ ಚೆಕ್‌ ಸಾದಿಕ್‌ ಖಾನ್‌ ಪ್ರದೇಶದಲ್ಲಿ ಉಗ್ರರು ಇರುವ ಮಾಹಿತಿ ಆಧರಿಸಿ ಭದ್ರತಾ ಪಡೆಗಳು ಭಾನುವಾರ ರಾತ್ರಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಈ ವೇಳೆ ಉಗ್ರರು ಮೊದಲು ಗುಂಡಿನ ದಾಳಿ ನಡೆಸಿದ್ದು, ಇದಕ್ಕೆ ಭದ್ರತಾ ಪಡೆಯೂ ಪ್ರತ್ಯುತ್ತರ ನೀಡಿದೆ. ಈ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಮೃತಪಟ್ಟಿದ್ದಾರೆ. ಮೃತ ಉಗ್ರರಲ್ಲಿ ಒಬ್ಬನನ್ನು ಎಲ್‌ಇಟಿಯ ಉನ್ನತ ಕಮಾಂಡರ್‌ ಇಶ್ಪಾಕ್‌ ದರ್‌ ಅಲಿಯಾಸ್‌ ಅಬು ಅಕ್ರಂ ಎಂದು ಗುರುತಿಸಲಾಗಿದೆ. ಈತ 2017ರಿಂದ ಸಕ್ರಿಯನಾಗಿದ್ದು, ಪೊಲೀಸ್‌, ಭದ್ರತಾ ಸಿಬ್ಬಂದಿ ಮತ್ತು ನಾಗರಿಕರ ಹತ್ಯೆ ಸೇರಿದಂತೆ ಹಲವು ಅಪರಾಧಗಳಲ್ಲಿ ಭಾಗಿಯಾಗಿದ್ದ. ಇನ್ನೊಬ್ಬ ಉಗ್ರನನ್ನು ಮಜೀದ್‌ ಇಕ್ಬಾಲ್‌ ಎಂದು ಗುರುತಿಸಲಾಗಿದೆ ಎಂದು ಡಿಜಿಪಿ ದಿಲ್ಬಾಗ್‌ ಸಿಂಗ್‌ ಅವರು ಹೇಳಿದರು.

Exit mobile version