ಕಾಂಗ್ರೆಸ್‍ನತ್ತ ಶಿವಲಿಂಗೇಗೌಡ ಚಿತ್ತ ; ಕಿಡಿಕಾರಿದ ದಳಪತಿಗಳು!

shivalingegowda

ಹಾಸನದಲ್ಲಿ ನಡೆದ ‘ಜನತಾ ಜಲಧಾರೆ’ ಸಮಾವೇಶಕ್ಕೆ ಅರಸೀಕೆರೆ(Arasikere) ಜೆಡಿಎಸ್ ಶಾಸಕ(JDS MLA) ಕೆ.ಎಂ ಶಿವಲಿಂಗೇಗೌಡ(KM Shivalingegowda) ಗೈರು ಹಾಜರಾಗಿದ್ದು, ಶಿವಲಿಂಗೇಗೌಡರ ವಿರುದ್ದ ಸಮಾವೇಶದಲ್ಲಿಯೇ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ ಕುಮಾರಸ್ವಾಮಿ(HD Kumarswamy) ಮತ್ತು ಜೆಡಿಎಸ್ ವರಿಷ್ಠ ದೇವೇಗೌಡರು(Devegowda) ಕಿಡಿಕಾರಿದ್ದಾರೆ.

ಎಚ್.ಡಿ ಕುಮಾರಸ್ವಾಮಿಯವರು ಮಾತನಾಡಿ, ನಮ್ಮ ಪಕ್ಷದಿಂದಲೇ ಬೆಳೆದು, ಪಕ್ಷದಲ್ಲೇ ಇದ್ದುಕೊಂಡು, ನಮ್ಮ ಕತ್ತು ಕೊಯ್ಯುವ ಕೆಲಸ ಮಾಡಬೇಡಿ. ಬೆನ್ನಿಗೆ ಚೂರಿ ಹಾಕುವ ರಾಜಕಾರಣ ಮಾಡಬಾರದು. ಈ ಹಿಂದೆ ಕುಡಿಯುವ ನೀರಿಗೆ ಮತ್ತು ತೆಂಗಿನ ನುಸಿ ರೋಗಕ್ಕೆ ಅನುದಾನ ನೀಡಿದ್ದು ನಾನು. ಆದರೆ ಚುನಾವಣೆಯಲ್ಲಿ ಗೆದ್ದ ಮೇಲೆ ನಾನು ಸಿದ್ದರಾಮಯ್ಯನವರ ಆರ್ಶೀವಾದದಿಂದ ಗೆದ್ದೆ ಎಂದರು. ನಿಮ್ಮ ತಪ್ಪನ್ನು ತಿದ್ದಿಕೊಳ್ಳಿ. ಇಂತಹ ವಿಚಾರಗಳಲ್ಲಿ ನಾನು ಯಾರಿಗೂ ರಾಜಿ ಆಗೋಲ್ಲ ಎಂದು ನೇರವಾಗಿ ಶಿವಲಿಂಗೇಗೌಡರ ವಿರುದ್ದ ಅಸಮಾಧಾನ ಹೊರಹಾಕಿದರು.

ಈ ನಡುವೆ ಮಾತನಾಡಿದ ದೇವೇಗೌಡರು, ಕುಮಾರಣ್ಣನಿಗೆ ಹೇಳಿ ತೆಂಗಿನ ನುಸಿಗೆ ಪರಿಹಾರ ಕೊಡಿಸಿ ಅಂದ್ರು, ಈಗ ಉಲ್ಟಾ ಹೊಡೆಯುತ್ತಿದ್ದಾರೆ. ಅಬ್ಬಾ.. ಎಂಥಾ ಡ್ರಾಮಾ.. ಹಾಸನ ಜಿಲ್ಲೆಯಲ್ಲಿ ಮತ್ತೊಬ್ಬ ನಾಟಕಕಾರ ಹುಟ್ಟಿದ್ದಾನೆ ಎಂದು ವ್ಯಂಗ್ಯವಾಡಿದರು. ದೇವೇಗೌಡರ ಮಾತಿಗೆ ಧ್ವನಿಗೂಡಿಸಿದ ಕುಮಾರಸ್ವಾಮಿಯವರು, ಅರಸೀಕೆರೆ ಕ್ಷೇತ್ರದ ಜನತೆ ನೋಡಲಿ ಎಂದು ಡ್ರಾಮಾ ಮಾಡ್ತಾರೆ. ವಿಧಾನಸಭೆಯಲ್ಲಿ ಮಾತನಾಡೋದು ಡ್ರಾಮಾನೇ ಎಂದು ಟೀಕಿಸಿದರು. ಇನ್ನು ಇತ್ತೀಚಿನ ದಿನಗಳಲ್ಲಿ ಕೆ.ಎಂ ಶಿವಲಿಂಗೇಗೌಡ ಅವರು ಜೆಡಿಎಸ್ ಪಕ್ಷದಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ.

ಸಿದ್ದರಾಮಯ್ಯ ಬಗೆಗೆ ಹೆಚ್ಚಿನ ಒಲವು ತೋರಿಸುತ್ತಿರುವುದರಿಂದ ಅವರು ಕಾಂಗ್ರೆಸ್ ಸೇರುತ್ತಾರೆ ಎಂಬ ಸುದ್ದಿ ಹರಡಿದೆ. ಈಗಾಗಲೇ ಕುಮಾರಸ್ವಾಮಿ ಮತ್ತು ರೇವಣ್ಣ ಅವರೊಂದಿಗೆ ಬಹಿರಂಗವಾಗಿಯೇ ಶಿವಲಿಂಗೇಗೌಡ ಸಮರ ಸಾರಿದ್ದಾರೆ. ಪಕ್ಷದ ಎಲ್ಲ ಚಟುವಟಿಕೆಗಳಿಂದ ದೂರ ಸರಿದಿದ್ದಾರೆ. ಇನ್ನು ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ ದೇವೇಗೌಡರ ನಂತರ ಮತ್ತೊಬ್ಬ ಪ್ರಭಾವಿ ಶಾಸಕ ಜೆಡಿಎಸ್ ತೊರೆಯುವ ಸಾಧ್ಯತೆಗಳು ದಟ್ಟವಾಗಿವೆ. ಮುಂಬರುವ ವಿಧಾನಸಭಾ ಚುನಾವಣೆ ವೇಳೆ ಶಿವಲಿಂಗೇಗೌಡರು ಕಾಂಗ್ರೆಸ್ ಸೇರಿದರೆ ಅಚ್ಚರಿ ಪಡಬೇಕಿಲ್ಲ.

Exit mobile version