“ನಾನು ನಡೆಯುವುದು ಕಲಿಸಿದೆ, ಆತ ನನ್ನನ್ನೇ ತುಳಿದ” ಅಖಿಲೇಶ್ ವಿರುದ್ದ ಚಿಕ್ಕಪ್ಪ ಶಿವಪಾಲ್ ಆಕ್ರೋಶ!

akhilesh yadav

ಸಮಾಜವಾದಿ ಪಕ್ಷದಲ್ಲಿ(Samajwadi Party) ಮತ್ತೇ ಯಾದವಿ ಕಲಹ ಏರ್ಪಟ್ಟಿದೆ. ಉತ್ತರಪ್ರದೇಶದ(Uttarpradesh) ವಿಧಾನಸಭಾ ಚುನಾವಣೆಗಾಗಿ ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಂದಾಗಿದ್ದ ಅಖಿಲೇಶ್ ಯಾದವ್(Akhilesh Yadav) ಮತ್ತು ಶಿವಪಾಲ್ ಯಾದವ್(Shivapal Yadav) ನಡುವೆ ಇದೀಗ ಮತ್ತೊಮ್ಮೆ ಅಸಮಾಧಾನ ಭುಗಿಲೆದ್ದಿದೆ. ಈ ಕುರಿತು ಟ್ವೀಟ್ ಮಾಡಿರುವ ಶಿವಪಾಲ್ ಯಾದವ್ ಪರೋಕ್ಷವಾಗಿ ಅಖಿಲೇಶ್ ಯಾದವ್‍ಗೆ ಟಾಂಗ್ ಕೊಟ್ಟಿದ್ದಾರೆ.

“ನಾನು ಇನ್ನೂ ಆತನ ಮೇಲೆ ಕೋಪಗೊಂಡಿದ್ದೇನೆ. ಅಂದಮೇಲೆ ಆತ ನನ್ನನ್ನು ಎಷ್ಟು ನೋಯಿಸಿದ್ದಾನೆ ಎಂದು ನೀವೇ ಅರ್ಥಮಾಡಿಕೊಳ್ಳಿ. ನಾನು ಆತನನ್ನು ತೃಪ್ತಿಪಡಿಸಲು ನನ್ನ ಆತ್ಮಗೌರವ ಬಿಟ್ಟು ಅತ್ಯಂತ ಕೆಳಮಟ್ಟಕ್ಕೆ ಇಳಿದೆ. ನಾನು ಆತನಿಗೆ ನಡೆಯಲು ಕಲಿಸಿದೆ. ಆದರೆ ಇಂದು ಆತ ನನ್ನನ್ನೇ ತುಳಿಯುತ್ತಿದ್ದಾನೆ. ಮರುಸಂಘಟನೆಯ ವಿಶ್ವಾಸದೊಂದಿಗೆ, ಎಲ್ಲರ ಸಹಕಾರಕ್ಕಾಗಿ ಆಶಿಸುತ್ತಾ, ಈದ್ ಮುಬಾರಕ್” ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು ಮುಲಾಯಂ ಸಿಂಗ್ ಯಾದವ್ ಅವರ ತಮ್ಮ ಶಿವಪಾಲ್ ಯಾದವ ಅನೇಕ ವರ್ಷಗಳಿಂದ ಅಣ್ಣನೊಂದಿಗೆ ಸಮಾಜವಾದಿ ಪಕ್ಷದಲ್ಲಿ ಸಕ್ರಿಯರಾಗಿದ್ದರು. ಆದರೆ ಅಖಿಲೇಶ್ ಯಾದವ್ ರಾಜಕೀಯ ಪ್ರವೇಶದ ನಂತರ ಸಮಾಜವಾದಿ ಪಕ್ಷದಲ್ಲಿ ಕಲಹ ಏರ್ಪಟ್ಟು ಶಿವಪಾಲ್ ಯಾದವ ಪಕ್ಷದಿಂದ ದೂರಸರಿದಿದ್ದಾರೆ. ಕಳೆದ ಅನೇಕ ವರ್ಷಗಳಿಂದ ಶಿವಪಾಲ್ ಯಾದವ ಮತ್ತು ಅಖಿಲೇಶ್ ಯಾದವ ನಡುವೆ ರಾಜಕೀಯ ಕಲಹ ಏರ್ಪಟ್ಟಿದೆ. ಮುಲಾಯಂ ಸಿಂಗ್ ಯಾದವ ಇಬ್ಬರ ನಡುವಿನ ಸಮಸ್ಯೆ ಬಗೆ ಹರಿಸಲು ನಡೆಸಿದ ಪ್ರಯತ್ನಗಳು ಫಲ ನೀಡಿಲ್ಲ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸಾಕಷ್ಟು ಮಾತುಕತೆಯ ನಂತರ ಇಬ್ಬರು ಒಂದಾಗಿದ್ದರು.

ಆದರೆ ಇದೀಗ ಮತ್ತೆ ಅಸಮಾಧಾನ ಭುಗಿಲೆದ್ದಿದೆ. ಇನ್ನು ಶಿವಪಾಲ್ ಯಾದವ ಮಾಡಿರುವ ಈ ಟ್ವೀಟ್ ಇದೀಗ ಸಮಾಜವಾದಿ ಪಕ್ಷದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಮುಸ್ಲಿಂ ಸಮುದಾಯ ಅಖಿಲೇಶ್ ಯಾದವರಿಂದ ದೂರ ಸರಿದಿದೆ. ಹೀಗಾಗಿ ಶಿವಪಾಲ್ ಯಾದವ ಹೊಸ ಪಕ್ಷ ಸ್ಥಾಪಿಸುವತ್ತ ದೃಷ್ಟಿ ನೆಟ್ಟಿದ್ದಾರೆ. ಸಮಾಜವಾದಿ ಪಕ್ಷ ಇಬ್ಬಾಗವಾಗುವ ಸಾಧ್ಯತೆ ಕಾಣುತ್ತಿದೆ ಎಂದು ಸಮಾಜವಾದಿ ಪಕ್ಷದ ಹಿರಿಯ ನಾಯಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

Exit mobile version