ಬೆಂಗಳೂರು ಅ 31 : ಅಪ್ಪು ಇಲ್ಲ ಎಂಬುದನ್ನು ಅರಗಿಸಿಕೊಳ್ಳುವುದೇ ಕಷ್ಟವಾಗಿದೆ. ನನ್ನ ಮಗನನ್ನೇ ಕಳೆದುಕೊಂಡ ನೋವು ನನಗಾಗಿದೆ ಎಂದು ಹಿರಿಯ ನಟ ಶಿವರಾಜ್ಕುಮಾರ್ ಹೇಳಿದ್ದಾರೆ.
ತುಂಬಾ ಸಣ್ಣ ವಯಸ್ಸಿನಲ್ಲೇ ಅಪ್ಪು ನಮ್ಮನ್ನು ಅಗಲಿದ್ದಾನೆ. ದೇವರಿಗೂ ಅಪ್ಪು ಇಷ್ಟ ಆಗಿಬಿಟ್ಟ ಅನಿಸ್ತಿದೆ. ಚಿಕ್ಕ ವಯಸ್ಸಿನಲ್ಲೇ ಬಹಳ ಬೇಗನೆ ದೇವರು ಅವನನ್ನು ಕರೆದುಕೊಂಡುಬಿಟ್ಟ. ಅಪ್ಪು ಇಲ್ಲ ಎಂದು ಹೇಳುವುದೇ ಕಷ್ಟವಾಗಿದೆ. ಅವನಿಲ್ಲ ಎನ್ನುವುದನ್ನು ಕಲ್ಪಿಸಿಕೊಳ್ಳಲೂ ಆಗುತ್ತಿಲ್ಲ ಎಂದು ಶಿವರಾಜಕುಮಾರ್ ವೇದನೆ ತೋಡಿಕೊಂಡರು.
ಭಾನುವಾರ ಪುನೀತ್ ಅಂತ್ಯಕ್ರಿಯೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶಿವರಾಜಕುಮಾರ್, ರಾಜ್ಯ ಸರ್ಕಾರ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದೆ. ಇದಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಧನ್ಯವಾದ ಹೇಳುತ್ತೇನೆ ಎಂದರು.
ಮಂಗಳವಾರ(ನ.2) ಹಾಲು ತುಪ್ಪ ಕಾರ್ಯ ನಡೆಯಲಿದ್ದು, ಈ ಕಾರ್ಯದ ನಂತರ ಸಾರ್ವಜನಿಕರಿಗೆ ಪುನೀತ್ ಸಮಾಧಿ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗುವುದು. ಈ ಬಗ್ಗೆ ಸಿಎಂ ಜತೆ ಮಾತನಾಡುವುದಾಗಿ ಶಿವರಾಜಕುಮಾರ್ ಹೇಳಿದರು.