ಬೆಂಗಳೂರು, ಮಾ. 24: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸ್ಪೋಟಗೊಂಡ ಬೆನ್ನಲ್ಲೇ ರಾಜಕೀಯ ನಾಯಕರ ಕೆಸರೆರಚಾಟ ಜೋರಾಗಿದೆ. ಪ್ರಮುಖವಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವಿನ ವಾಕ್ ಸಮರ ದಿನಕ್ಕೊಂದು ತಿರುವು ಪಡೆಯುವ ಜತೆಗೆ, ಉಭಯ ನಾಯಕರ ನಡುವಿನ ರಾಜಕೀಯ ದ್ವೇಷಕ್ಕೆ ನಾಂದಿ ಹಾಡುತ್ತಿದೆ.
ರಮೇಶ್ ಜಾರಕಿಹೊಳಿ ವಿರುದ್ಧ ಕಾಂಗ್ರೆಸ್ ನಾಯಕರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದರು. ಇದರ ಬೆನ್ನಲ್ಲೇ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿರುವ ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ರಾಜ್ಯದ 224 ಶಾಸಕರ ಬಗ್ಗೆಯೂ ತನಿಖೆ ನಡೆಯಲಿ, ಯಾರೆಲ್ಲ ಅನೈತಿಕ ಸಂಬಂಧ ಹೊಂದಿದ್ದಾರೆ ಎಂಬುದು ತನಿಖೆಯಿಂದ ಬಯಲಾಗಲಿ ಎಂದು ಆಗ್ರಹಿಸಿದರು.
ನಗರದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನ್ನನ್ನು ಸೇರಿದಂತೆ ಎಲ್ಲರ ಬಗ್ಗೆಯೂ ತನಿಖೆ ನಡೆಯಲಿ. ತನಿಖೆ ಮಾಡಿದರೆ ಎಲ್ಲರ ಬಂಡವಾಳ ಬಯಲಿಗೆ ಬರುತ್ತದೆ. ಸಮಾಜದಲ್ಲಿ ಇವರೆಲ್ಲ ಮಾದರಿಯಾಗಿದ್ದಾರೆ. ತನಿಖೆಯಿಂದ ಯಾರಿಗೆಲ್ಲ ಅನೈತಿಕ ಸಂಬಂಧವಿದೆ ಎಂಬುದು ತಿಳಿಯಲಿ ಎಂದು ಒತ್ತಾಯಿಸಿದರು.
ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಶಾಸಕ ರಮೇಶ್ ಕುಮಾರ್ ಸತ್ಯಹರಿಶ್ಚಂದ್ರರಾ? ಇವರೆಲ್ಲ ಏಕಪತ್ನಿ ವ್ರತಸ್ಥರಾ? ಎಂದು ಕಿಡಿಕಾರಿದರು.