ಕಾರ್ಖಾನೆಗಳು ಸ್ಥಾಪನೆಯಾದ್ರೆ ಜನರಿಗೆ ಖುಷಿಯಾಗ್ಬೇಕು. ಉದ್ಯೋಗ ಸಿಗುತ್ತೆ ಅಂತ ಸಂಭ್ರಮ ಪಡ್ಬೇಕು. ಆದ್ರೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಗ್ರಾಮದ ಮಂದಿಗೆ ಸಕ್ಕರೆ ಕಾರ್ಖಾನೆ ಶಾಪವಾಗಿ ಪರಿಣಮಿಸಿದೆ. ಅದು ಹೇಗೆ ಅನ್ನೋದನ್ನ ಸಿಟಿಜನ್ ಜರ್ನಲಿಸ್ಟ್ ಶಿವಕುಮಾರ್ ತಿಳಿಸ್ತಾರೆ ನೋಡಿ. ಬೆಳಗಾವಿ ಕರುನಾಡಿನ ಗಡಿನಾಡ ಜಿಲ್ಲೆ. ಈ ಜಿಲ್ಲೆಯಲ್ಲಿ ಕಬ್ಬನ್ನು ಯಥೇಚ್ಛಚಾಗಿ ಬೆಳೀತಾರೆ. ಹಾಗಾಗಿ ಇಲ್ಲಿ ಹತ್ತು ಹಲವು ಸಕ್ಕರೆ ಕಾರ್ಖಾನೆಗಳು ಸ್ಥಾಪನೆಯಾಗಿವೆ. ಈ ಕಾರ್ಖಾನೆಗಳು ಸ್ಥಳೀಯರ ಬಾಳು ಹಸನಾಗಿಸಿದೆ.
ಅದ್ರೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಗ್ರಾಮದ ಮಂದಿಗೆ ಸಕ್ಕರೆ ಕಾರ್ಖಾನೆ ಶಾಪವಾಗಿ ಪರಿಣಮಿಸಿದೆ. ಅದ್ರಲ್ಲೂ ಇಲ್ಲಿ ಕಬ್ಬಿನ ಸೀಜನ್ ಆರಂಭವಾಗುತ್ತಿದ್ದಂತೆ ಉಗಾರಾ ಗ್ರಾಮದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುತ್ತೆ. ಇದಕ್ಕೆ ಮುಖ್ಯ ಕಾರಣ ಇಲ್ಲಿರೋ ಸಕ್ಕರೆ ಕಾರ್ಖಾನೆ. ಉಗಾರಾ ಸಕ್ಕರೆ ಕಾರ್ಖಾನೆ ಯಿಂದ ಸಾಕಷ್ಟು ಲಾಭ ಗಳಿಸುತ್ತಿದೆ. ಆದ್ರೆ ಇವರಿಗೆ ಪರಿಸರ ಹಾಗೂ ಕಾರ್ಖಾನೆ ಸುತ್ತಮುತ್ತ ವಾಸಿಸುವ ನಿವಾಸಿಗಳ ಬಗ್ಗೆ ಚಿಂತೆಯೇ ಇಲ್ಲ. ಈ ಕಾರ್ಖಾನೆಯ ಆಡಳಿತ ಮಂಡಳಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಕಾನೂನನ್ನು ಗಾಳಿಗೆ ತೂರಿ ಕಾರ್ಖಾನೆಯ ಕಲುಶಿತ ನೀರನ್ನು ನದಿ , ರೈತರ ಹೊಲಗದ್ದೆಗಳಿಗೆ ಬಿಡುತ್ತಿದೆ.
ಈ ಕಲುಶಿತ ನೀರು ರೈತರ ಹೊಲಗದ್ದೆಗಳಿಗೆ ಮಾತ್ರವಲ್ಲ ಇಲ್ಲಿನ ಬಾವಿಗಳಿಗೆ ಕೂಡಾ ಹರಿದುಬರುತ್ತಿದೆ. ಈ ನೀರು ಕೆಟ್ಟ ವಾಸನೆ ಬೀರುತ್ತಿರುವುದರಿಂದಾಗಿ ಜನರಿಗೆ ಬಾವಿ ನೀರು ಕುಡಿಯಲು ಆಗದೆ ಭಾರೀ ತೊಂದರೆ ಅನುಭವಿಸುತ್ತಿದ್ದಾರೆ. ಆದ್ರೆ ಇಲ್ಲಿನ ಜನರ ದುರಂತ ನೋಡಿ. ಈ ಮಲಿನಗೊಂಡ ನೀರನ್ನೇ ಇಲ್ಲಿನ ಜನ ಕುಡಿದು ಬದುಕ ಬೇಕಾದ ಹೀನಾಯ ಸ್ಥಿತಿ ಎದುರಾಗಿದೆ. ಕಾರ್ಖಾನೆಯಿಂದ ಹೊರ ಬಿಡುವ ಕಲುಷಿತ ತ್ಯಾಜ್ಯವನ್ನು ಸಂಸ್ಕರಿಸಿ ಅದನ್ನು ಸುರಕ್ಷಿತವಾಗಿ ಹೊರ ಬಿಡಬೇಕು. ಇಲ್ಲವೇ ಇಂಗಿಸುವ ವ್ಯವಸ್ಥೆ ಮಾಡಬೇಕು. ಆದ್ರೆ ಈ ಉಗಾರಾ ಸಕ್ಕರೆ ಕಾರ್ಖಾನೆಯವರು ತ್ಯಾಜ್ಯ ನೀರನ್ನು ಬೇಕಾ ಬಿಟ್ಟಿಯಾಗಿ ಎಲ್ಲೆಂದರಲ್ಲಿ ಹರಿಯ ಬಿಡುವುದರಿಂದ ಸ್ಥಳೀಯ ಜನರಿಗೆ ವಾಸಿಸಲೂ ಸಾಧ್ಯವಾಗುತ್ತಿಲ್ಲ ಅನ್ನೋದು ಇಲ್ಲಿನ ಜನರ ಗೋಳು.
ಈ ಕಲುಷಿತ ನೀರನ್ನು ಮನುಷ್ಯರು ಬಿಡಿ ಪ್ರಾಣಿಗಳೂ ಸಹ ಕುಡಿಯಲು ಸಾಧ್ಯವಿಲ್ಲ. ಅಷ್ಟು ಗಬ್ಬು ನಾರುತ್ತಿದೆ. ಆದ್ರೆ ಉಗಾರ ಮಂದಿ ನಿತ್ಯ ಇದೇ ಕಲುಷಿತ ನೀರು ಸೇವನೆ ಮಾಡಿ ಅನೇಕ ಕಾಯಿಲೆಗಳಿಗೆ ತುತ್ತಾಗಿದ್ದಾರೆ. ಊರಿನ ಜನರಿಗೆ ನಾನಾ ರೋಗಗಳನ್ನು ಸಕ್ಕರೆ ಕಾರ್ಖನೆ ಮಾಲೀಕರೇ ಉತ್ಪಾದಿಸಿ ಜನರಿಗೆ ಹಂಚಿ ಅವರನ್ನು ಬಲಿತೆಗೆದುಕೊಳ್ಳುತ್ತಿದ್ದಾರೆ. ದುಡಿದ ಹಣವನ್ನು ಆಸ್ಪತ್ರೆ ಪಾಲಾಗುವಂತೆ ಮಾಡುತ್ತಿದ್ದು ಜನರಿಗೆ ಇನ್ನಷ್ಟು ತೊಂದರೆಗಳನ್ನು ನೀಡುತ್ತಿದ್ದಾರೆಂಬುದು ಜನರ ಆರೋಪ. ಸಾರ್ವಜನಿಕರಿಗೆ ಇಷ್ಟೊಂದು ತೊಂದರೆ ಕೊಡುತ್ತಿರುವ ಹೆಚ್ಚಿನ ಎಲ್ಲಾ ಕಾರ್ಖಾನೆಗಳು ರಾಜಕೀಯ ಮುಖಂಡರಿಗೆ ಸೇರಿದ್ದು. ಹಾಗಾಗಿ ಇವರ ವಿರುದ್ಧ ಯಾರೂ ಕೂಡ ಕ್ರಮಕೈಗೊಳ್ಳಲು ಮುಂದಾಗುತ್ತಿಲ್ಲ. ಅಧಿಕಾರಿಗಳು ಲಂಚ ಪಡೆದು ಆರಾಮವಾಗಿದ್ದಾರೆ. ಜನಪ್ರತಿನಿಧಿಗಳು ಹಾಗೂ ಈ ಭಾಗದ ಶಾಸಕರಾದ ಶ್ರೀಮಂತ ಪಾಟೀಲರು ಜನರ ಕಷ್ಟಗಳನ್ನು ನೋಡಿ ಶೀಘ್ರದಲ್ಲಿ ಜನರಿಗೆ ಕುಡಿಯುವ ಶುದ್ಧ ನೀರಿನ ವ್ಯವಸ್ಥೆಯನ್ನು ಮಾಡಿಕೊಡಬೇಕು. ಇಲ್ಲದಿದ್ದರೆ ಬೀದಿಗಿಳಿದು ಉಗ್ರ ಹೋರಾಟ ಮಾಡುವುದಾಗಿ ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ. ನೋಡಿದಿರಲ್ಲಾ ಇಲ್ಲಿನ ಜನರ ಸಮಸ್ಯೆಗಳನ್ನು ಕಾರ್ಖಾನೆ ಮಾಲಿಕರು ಹಾಗೂ ಆಡಳಿತ ಅಧಿಕಾರಿಗಳು ತಕ್ಷಣವೇ ಇತ್ತ ಗಮನ ಹರಿಸಿ ಸಮಸ್ಯೆ ಬಗೆಹರಿಸಿ ಕೊಡಬೇಕು ಎಂಬುದು ವಿಜಯಾಟೈಮ್ಸ್ ಆಶಯವಾಗಿದೆ.
- ಸಿಟಿಜನ್ ಜರ್ನಲಿಸ್ಟ್ ಶಿವಕುಮಾರ್