ತಮಿಳುನಾಡು ವಿಧಾನಸಭೆ ಚುನಾವಣೆ: ಕೊಯಮತ್ತೂರು ದಕ್ಷಿಣ ಕ್ಶೇತ್ರದಿಂದ ನಾಮಪತ್ರ ಸಲ್ಲಿಸಿದ ಕಮಲ್ ಹಾಸನ್

ಕೊಯಮತ್ತೂರು, ಮಾ. 16: ಮಕ್ಕಳ್ ನೀಧಿ ಮೈಯಮ್ (ಎಂಎನ್​ಎಂ) ಪಕ್ಷದ ಸ್ಥಾಪಕ ಕಮಲ್ ಹಾಸನ್ ಸೋಮವಾರ ಕೊಯಮತ್ತೂರು ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಏಪ್ರಿಲ್ 6ರಂದು ನಡೆಯಲಿರುವ ಚುನಾವಣೆಯಲ್ಲಿ ಕಮಲ್ ಹಾಸನ್ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಎದುರಿಸಲಿದ್ದಾರೆ. ತಮಿಳುನಾಡಿನ ಪ್ರಮುಖ ರಾಜಕೀಯ ಪಕ್ಷಗಳಾದ ಎಐಎಡಿಎಂಕೆ ಮತ್ತು ಡಿಎಂಕೆ ಈ ಕ್ಷೇತ್ರವನ್ನು ಬಿಜೆಪಿ ಮತ್ತು ಕಾಂಗ್ರೆಸ್​ಗೆ ಬಿಟ್ಟುಕೊಟ್ಟಿವೆ ಎಂಬುದು ಗಮನಾರ್ಹ ಸಂಗತಿ.

ಕಮಲ್ ಹಾಸನ್ ಫೆಬ್ರುವರಿ 2018ರಲ್ಲಿಯೇ ಎಂಎನ್​ಎಂ ಪಕ್ಷವನ್ನು ಸ್ಥಾಪಿಸಿದ್ದರು. ಆದರೆ ತಾವು ಸ್ವತಃ ಯಾವುದೇ ಚುನಾವಣೆಗಳಲ್ಲಿ ಸ್ಪರ್ಧಿಸಿರಲಿಲ್ಲ. 2019ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದ ವತಿಯಿಂದ ಅಭ್ಯರ್ಥಿಗಳನ್ನು ನಿಲ್ಲಿಸಿದ್ದರು. ಕಮಲ್ ಪಕ್ಷವು ಲೋಕಸಭಾ ಚುನಾವಣೆಯಲ್ಲಿ ಶೇ 3.75ರಷ್ಟು ಮತಗಳನ್ನು ತನ್ನದಾಗಿಸಿಕೊಂಡಿತ್ತು.

ಎಐಎಡಿಎಂಕೆಯ ಅಮ್ಮಾನ್ ಕೆ.ಅರ್ಜುನನ್ ಈ ಮೊದಲು ಕೊಯಮತ್ತೂರು ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಈ ಸಲ ಎಐಎಡಿಎಂಕೆ ಈ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಟ್ಟಿದೆ. ಅರ್ಜುನನ್ ಕೊಯಮತ್ತೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಕೊಯಮತ್ತೂರು ದಕ್ಷಿಣ ಕ್ಷೇತ್ರದಲ್ಲಿ ಕಮಲ್ ಹಾಸನ್ ಎದುರು ಬಿಜೆಪಿಯ ವನತಿ ಶ್ರೀನಿವಾಸನ್ ಮತ್ತು ಕಾಂಗ್ರೆಸ್​ನ ಮಯೂರ ಎಸ್.ಜಯಕುಮಾರ್ ಸ್ಪರ್ಧಿಸಲಿದ್ದಾರೆ.

ರಸ್ತೆ ನಿರ್ಮಾಣ, ಕುಡಿಯುವ ನೀರು ಸರಬರಾಜು ಮತ್ತು ವಿಮಾನ ನಿಲ್ದಾಣ ವಿಸ್ತರಣೆ ಸೇರಿದಂತೆ ಹಲವು ಯೋಜನೆಗಳನ್ನು ಪೂರ್ಣಗೊಳಿಸುವ ಭರವಸೆಯನ್ನು ಕಮಲ್ ಹಾಸನ್ ನೀಡಿದ್ದಾರೆ. ‘ಕೊಯಮತ್ತೂರನ್ನು ಕೇವಲ ಭಾರತದ ಅತ್ಯುತ್ತಮ ನಗರವನ್ನಾಗಿ ಅಲ್ಲ, ವಿಶ್ವದ ಅತ್ಯುತ್ತಮ ನಗರವನ್ನಾಗಿ ರೂಪಿಸುವ ಆಸೆ ನನಗಿದೆ. ಇತರರಂತೆ ರಾಜಕಾರಣ ನನ್ನ ವೃತ್ತಿ ಅಲ್ಲ. ರಾಜಕಾರಣ ನನ್ನ ಕರ್ತವ್ಯ. ನಾನಿದನ್ನು ಬದ್ಧತೆಯಿಂದ ನಿರ್ವಹಿಸುತ್ತೇನೆ’. ‘ಹೊರಗಿನವನು’ ಎಂಬ ಆರೋಪ ಗೆಲುವಿನ ಸಾಧ್ಯತೆಯನ್ನು ಕಡಿಮೆ ಮಾಡಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಕಮಲ್ ಹಾಸನ್, ‘ಇವೆಲ್ಲವೂ ಸಾಮಾಜಿಕ ಮಾಧ್ಯಮಗಳು ಮತ್ತು ಕೆಲ ರಾಜಕೀಯ ಪಕ್ಷಗಳ ಸೃಷ್ಟಿ. ನನಗೆ ಇಂಥ ಸಮಸ್ಯೆ ಎದುರಾಗಿಲ್ಲ’ ಎಂದು ಹೇಳಿದರು.

Exit mobile version