ಮುಂದೆ ಉತ್ತಮ ವ್ಯಕ್ತಿಯಾಗಬೇಕಾದರೆ ನಿಮ್ಮ ಮಕ್ಕಳಿಗೆ ಈಗಿನಿಂದಲೇ ಈ ವಿಚಾರಗಳನ್ನು ಕಲಿಸಿ..

Kindergarten kids friends arm around sitting smiling

ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಪ್ರಸ್ತುತ ಕಾಲದಲ್ಲಿ ಉತ್ತಮ ಊಟ-ಬಟ್ಟೆ ಕೊಟ್ಟು ಮಕ್ಕಳನ್ನ ಸಾಕಿದರಷ್ಟೇ ಸಾಲದು. ಏಕೆಂದರೆ ಈಗೀಗ ಮಕ್ಕಳು ಬಹಳ ಸೂಕ್ಷ್ಮ ಮನಸ್ಥಿತಿಯುಳ್ಳವರಾಗುತ್ತಿದ್ದಾರೆ. ಆದ್ದರಿಂದ ಮಕ್ಕಳ ಸಂಪೂರ್ಣ ವ್ಯಕ್ತಿತ್ವದತ್ತ ಗಮನ ಹರಿಸಬೇಕು. ಅದಕ್ಕಾಗಿ ಪೋಷಕರಾದವರು ಏನು ಮಾಡಬೇಕು? ಎಂತಹ ಅಂಶಗಳನ್ನು ಅಳವಡಿಸಬೇಕು ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಸೋಲನ್ನು ಸ್ವೀಕರಿಸುವ ಧೈರ್ಯ:
ಹೌದು, ಈಗಿನ ಕಾಲಕ್ಕೆ ಇದು ಅವಶ್ಯಕವಾಗಿದೆ. ನಿಮ್ಮ ಮಕ್ಕಳಿಗೆ ಸೋಲುವುದನ್ನು ಹೇಳಿಕೊಡಬೇಕು. ಕೇವಲ ಗೆಲ್ಲಬೇಕು ಎಂದು ಒತ್ತಡ ಹೇರುತ್ತಿದ್ದರೆ, ಮುಂದೆ ಯಾವುದಾದರೊಂದು ದಿನ ಸೋತರೆ ಅದನ್ನು ಸ್ವೀಕರಿಸಲು ಅವರಿಗೆ ಕಷ್ಟವಾಗುವುದು. ಅನೇಕ ಬಾರಿ ಅವರಿಗೆ ತಮ್ಮ ಸಣ್ಣ ವೈಫಲ್ಯವನ್ನು ಸಹಿಸಿಕೊಳ್ಳುವ ಶಕ್ತಿ ಇರುವುದಿಲ್ಲ. ಅದಕ್ಕೆ ಇತ್ತೀಚೆಗೆ ಮಕ್ಕಳ ಆತ್ಮಹತ್ಯೆ ಸಂಖ್ಯೆ ಹೆಚ್ಚಾಗುತ್ತಿರುವುದು. ಅದಕ್ಕೆ ಮಕ್ಕಳಿಗೆ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನಸ್ಥಿತಿ ಬೆಳೆಸಬೇಕು.

ಪ್ರಾಣಿಗಳನ್ನು ಪ್ರೀತಿಸಲು ಕಲಿಸಿ:
ಪ್ರಾಣಿಗಳನ್ನು ಪ್ರೀತಿಸುವ ಮಕ್ಕಳು ಉತ್ತಮವಾಗಿ ಅಭಿವೃದ್ಧಿ ಹೊಂದಬಹುದು ಎಂದು ಸಂಶೋಧನೆ ಬಹಿರಂಗಪಡಿಸಿದೆ. ಅದೇ ಸಮಯದಲ್ಲಿ, ಅವರು ಸಮಾಜದ ಬಗ್ಗೆ ಬಹಳ ಸೂಕ್ಷ್ಮ ಪ್ರಜ್ಞೆಯನ್ನು ಬೆಳೆಸಿಕೊಳ್ಳುತ್ತಾರೆ. ಆದ್ದರಿಂದ ನಿಮ್ಮ ಮಕ್ಕಳಿಗೆ ಪ್ರಾಣಿಗಳಿಗೆ ಹಿಂಸೆ ಮಾಡದಂತೆ ಹೇಳಿ, ಬದಲಾಗಿ ಪ್ರಾಣಿಗಳನ್ನು ಪ್ರೀತಿಸಲು ಕಲಿಸಿ.

ಸೃಜನಶೀಲತೆಯ ಅಭಿವೃದ್ಧಿ:
ಮಗು ಹುಟ್ಟಿದ ತಕ್ಷಣ ಪೋಷಕರು ಅವರನ್ನು ವೈದ್ಯರು, ಎಂಜಿನಿಯರ್, ಐಎಸ್ ಅಧಿಕಾರಿ ಮತ್ತು ಇನ್ನಿತರರನ್ನಾಗಿ ಮಾಡುವ ಕನಸು ಕಾಣುತ್ತಾರೆ. ಆದರೆ ಮಕ್ಕಳ ಆಸಕ್ತಿ ಏನು ಎಂಬುದನ್ನು ತಿಳಿಯಲು ಹೋಗುವುದಿಲ್ಲ. ಆದ್ದರಿಂದ ಪೋಷಕರಾದವರು ಮೊದಲು ಮಕ್ಕಳ ಆಸಕ್ತಿಯನ್ನು ಅರಿತುಕೊಂಡು, ಅವರ ಸೃಜನಶೀಲತೆ ಅಭಿವೃದ್ಧಿ ಪಡಿಸುವಂತಹ ತರಬೇತಿ ನೀಡಬೇಕು. ಅವರ ಆಸಕ್ತಿ ಕಲೆ, ಸಾಹಿತ್ಯ, ವಿಜ್ಞಾನ, ಕ್ರೀಡೆ, ಯಾವುದೇ ಕ್ಷೇತ್ರದಲ್ಲಿರಬಹುದು. ಅದನ್ನು ಗುರುತಿಸುವಂತಹ ಪ್ರಯತ್ನ ಮೊದಲು ಪೋಷಕರು ಮಾಡಬೇಕು.

ಅಸಮಾನತೆಗಳನ್ನು ಗೌರವಿಸಿ:
ಮಕ್ಕಳಿಗೆ ಜಗತ್ತಿನಲ್ಲಿ ಅಸ್ತಿತ್ವದಲ್ಲಿರುವ ಧರ್ಮ, ಸಂಸ್ಕೃತಿ, ಜನಾಂಗ, ಜಾತಿ, ಶ್ರೀಮಂತ ಮತ್ತು ಬಡವರ ನಡುವಿನ ಅಸಮಾನತೆಗಳು ತಿಳಿದಿರುವುದಿಲ್ಲ. ಅವರು ಬೆಳೆಯುತ್ತಾ ಹೋದಂತೆ ಇದು ಅರಿವಿಗೆ ಬರುವುದು. ಆದರೆ ಮಕ್ಕಳಿರುವಾಗಲೇ ಈ ಅಸಮಾನತೆಗಳಿಗೆ ಗವರವ ನೀಡುವುದನ್ನು ಅವರಿಗೆ ಹೇಳಿಕೊಡಿ. ಈ ಜಗತ್ತಿನಲ್ಲಿ ಎಲ್ಲರೂ ಒಂದೇ, ಇವುಗಳೆಲ್ಲಾ ನೆಪಮಾತ್ರ, ಪ್ರತಿಯೊಬ್ಬರನ್ನು ಪ್ರತಿಯೊಂದನ್ನು ಗೌರವ ನೀಡಬೇಕಾದ ಮಹತ್ವ ತಿಳಿಸಿಕೊಡಿ. ಅಸಮಾನತೆಯನ್ನು ಗೌರವಿಸಲು ನಾವು ನಮ್ಮ ಮಕ್ಕಳಿಗೆ ಕಲಿಸಿದರೆ, ಈ ಜಗತ್ತು ವಾಸಿಸಲು ಉತ್ತಮ ಸ್ಥಳವಾಗಬಹುದು. ಏಕೆಂದರೆ ಈ ಅಸಮಾನತೆಗಳೇ ಯುದ್ಧಗಳು, ಗಲಭೆಗಳು ಮುಂತಾದ ಮಾನವ ದುರಂತಗಳಿಗೆ ಕಾರಣವಾಗುತ್ತವೆ.

ಭೂಮಿಯಲ್ಲಿ ನಾವು ಒಂದು ಜೀವಿ:
ಇಡೀ ಭೂಮಿ ನಮ್ಮದೇ ಎಂಬ ದುರಾಸೆ ಭಾವನೆ ನಮ್ಮಲ್ಲಿ ಇದೆ. ಆದರೆ ಈ ಭೂಮಿಯಲ್ಲಿ ನಾವು ಒಂದು ಜೀವಿ ಎಂಬುದನ್ನು ಮಕ್ಕಳಿಗೆ ಮನವರಿಕೆ ಮಾಡಿ. ಭೂಮಿಯನ್ನು ಸ್ವಂತ ಸಾಧನವೆಂದು ಪರಿಗಣಿಸಬಾರದು. ಕಾಡು, ಪರ್ವತ, ಮರುಭೂಮಿಗಳು, ಮರಗಳು ಮತ್ತು ಸಸ್ಯಗಳು, ಪ್ರಾಣಿ ಮತ್ತು ಪಕ್ಷಿಗಳಂತೆ ನಾವು ಈ ಭೂಮಿಯ ಜೀವಿಗಳಷ್ಟೇ. ಇದನ್ನು ಹಾಳು ಮಾಡುವ ಅಧಿಕಾರ ನಮಗಿಲ್ಲ ಎಂಬುದನ್ನು ತಿಳಿಸಿಕೊಡಿ. ಈ ಪಾಠವನ್ನು ಅಳವಡಿಸಿಕೊಳ್ಳಲು ಸಾಧ್ಯವಾದರೆ, ಬಹುಶಃ ಮುಂಬರುವ ಪೀಳಿಗೆಗಳು ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಏರಿಕೆಯಂತಹ ಸಮಸ್ಯೆಗಳ ಬಗ್ಗೆ ಚಿಂತಿಸಬೇಕಾಗಿಲ್ಲ.

ಒತ್ತಡದ ವಿರುದ್ಧ ಹೋರಾಡುವುದು:
ಜೀವನದಲ್ಲಿ ಅಗತ್ಯವಾದ ಒತ್ತಡವು ಅಭಿವೃದ್ಧಿ ಹೊಂದಲು ನಮಗೆ ಸಹಾಯ ಮಾಡುತ್ತದೆ, ಆದರೆ ಇದೇ ಒತ್ತಡವು ಅತಿಯಾದರೆ ನಮ್ಮ ಆರೋಗ್ಯಕ್ಕೆ ಹಾನಿಕಾರಕ. ನಾವು ಇಷ್ಟಪಡುತ್ತೀವೋ ಇಲ್ಲವೋ, ಒತ್ತಡಗಳನ್ನು ಎದುರಿಸಬೇಕಾಗುತ್ತದೆ. ಆದರೆ ಎದುರಿಸುವಾಗ ಮುಖದಲ್ಲಿ ಒಂದು ನಗುವಿರಲಿ. ಒತ್ತಡವನ್ನು ನಗುವಿನೊಂದಿಗೆ ಎದುರಿಸಲು ಕಲಿಯುವುದು ಉತ್ತಮ.

Exit mobile version