ಬೆಂಗಳೂರು, ಫೆ. 01: ಮೋದಿ ಆತ್ಮನಿರ್ಭರ ಅಲ್ಲ, ಆತ್ಮ ಬರ್ಬಾದ್ ಬಜೆಟ್ ನೀಡಿದ್ದಾರೆ ಎಂದು ವಿಧಾನಸಭಾ ವಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಕೇಂದ್ರ ಬಜೆಟ್ 2021 ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊರೊನಾ ಪಿಡುಗು, ಉದ್ಯೋಗ ನಷ್ಟ, ಕುಸಿದ ಆರ್ಥಿಕತೆಯಿಂದ ಹೈರಾಣಾಗಿರುವ ಜನರಿಗೆ ಈ ಬಾರಿ ಬಜೆಟ್ ಚೇತರಿಕೆ ದಾರಿ ಮಾಡಿಕೊಡುತ್ತದೆ ಎಂಬ ನಿರೀಕ್ಷೆಗಳು ಹುಸಿಯಾಗಿವೆ. ಇದು ಆತ್ಮ ಬರ್ಬಾದ್ ಬಜೆಟ್ ಆಗಿದೆ ಎಂದು ಟೀಕಿಸಿದ್ದಾರೆ.
ಹೊಸದಾಗಿ ಕೃಷಿ ಸೆಸ್ಗಳನ್ನು ವಿಧಿಸಿದ್ದಾರೆ. ರೈತರ ಸಾಲ ಮನ್ನಾ ಬೇಡಿಕೆ ಈಡೇರಿಸಲು ಯಾವುದೇ ಕ್ರಮಕೈಗೊಂಡಿಲ್ಲ. ಕೃಷಿ ಉತ್ಪನ್ನಗಳ ಬೆಲೆ ಸ್ಥಿರತೆಗೂ ಕ್ರಮವಹಿಸಿಲ್ಲ. ಒಟ್ಟಾರೆ, ರೈತರ ಕಲ್ಯಾಣಕ್ಕೆ ಯಾವುದೇ ಯೋಜನೆಗಳಿಲ್ಲ ಎಂದು ಬೇಸರಿಸಿದ್ದಾರೆ.
ವಿಮಾ ಕ್ಷೇತ್ರದಲ್ಲಿ ಎಫ್ಡಿಐ ಪ್ರಮಾಣ ಶೇ. 74ಕ್ಕೆ ಏರಿಸಲಾಗಿದೆ. ಖಾಸಗೀಕರಣದಿಂದ ವಿದ್ಯುತ್ ದರ ಹೆಚ್ಚಾಗಿದೆ. ಈ ಎಲ್ಲ ಕ್ರಮಗಳು ಮತ್ತೆ ಹಣದುಬ್ಬರಕ್ಕೆ ಕಾರಣವಾಗಲಿವೆ ಎಂದು ತಿಳಿಸಿದ್ದಾರೆ.