ಚಿಕ್ಕಮಗಳೂರು, ಆ. 14: ರಾಜ್ಯಾದ್ಯಾಂತ ಕೊರೊನಾ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಜಿಲ್ಲಾಡಳಿತ ಕೆಲವು ನಿರ್ಬಂಧಗಳನ್ನುವಿಧಿಸಿ ಅವಕಾಶ ಕಲ್ಪಿಸಿದೆ.
ಚಿಕ್ಕಮಗಳೂರು ಜಿಲ್ಲೆಯ ಗಿರಿಶ್ರೇಣಿಗಳಾದ ಸೀತಾಳಯ್ಯನ ಗಿರಿ, ಮುಳ್ಳಯ್ಯನಗಿರಿ, ಮಾಣಿಕ್ಯಾಧಾರ, ಝರಿಫಾಲ್ಸ್, ಬಾಬಾಬುಡನ್ದರ್ಗಾ, ಐ.ಡಿ ಪೀಠ, ಅಯ್ಯನಕೆರೆ, ಹಿರೇಕೊಳಲೆಕೆರೆ, ರತ್ನಗಿರಿಬೋರೆಯ ಮಹಾತ್ಮಾಗಾಂಧಿಪಾರ್ಕ್ಗಳಿಗೆ ರಜೆ ದಿನಗಳಲ್ಲಿ ಸಾರ್ವಜನಿಕರು ಹೆಚ್ಚು ಬರುತ್ತಿರುವುದರಿಂದ ಕೋವಿಡ್ ಸೋಂಕು ಹರಡುವ ಭೀತಿ ಹೆಚ್ಚಾಗುವ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಮಾರ್ಗಸೂಚಿಗಳನ್ನು ಜಿಲ್ಲಾಡಳಿತ ಬಿಡುಗಡೆ ಮಾಡಿದೆ. ತಾಲ್ಲೂಕಿನ ಪ್ರವಾಸಿತಾಣಗಳಾದ ಮುಳ್ಳಯ್ಯನ ಗಿರಿ, ಸೀತಾಳಯ್ಯನ
ಗಿರಿ, ಐ.ಡಿ ಪೀಠದ ಗಿರಿಶ್ರೇಣಿಗಳಿಗೆ ಬೆಳಿಗ್ಗೆ 6ರಿಂದ 9 ಗಂಟೆಯವರೆಗೆ 150 ವಾಹನಗಳನ್ನು 1 ಪಾಳಿಯಲ್ಲಿ ಹಾಗೆ 2 ಪಾಳಿಯಂತೆ ಗರಿಷ್ಠ ದಿನವೊಂದಕ್ಕೆ 300 ಪ್ರವಾಸಿವಾಹನಗಳಲ್ಲಿ 1200 ಪ್ರವಾಸಿಗರ ಭೇಟಿಗೆ ಅವಕಾಶ ಕಲ್ಪಿಸಲಾಗಿದೆ. ಗಿರಿಶ್ರೇಣಿಯಲ್ಲಿರುವ ಪರವಾನಗಿ ಪಡೆದುಕೊಂಡಿರುವ ಅಧೀಕೃತ ಹೋಂಸ್ಟೇ ಮತ್ತು ರೆಸಾರ್ಟ್ಗಳಿಗೆ ಕೊಠಡಿಗಳನ್ನು ಮುಂಗಡವಾಗಿ ಕಾಯ್ದಿರಿಸಿದ ದಾಖಲಾತಿಗಳನ್ನು ನೀಡಿದಲ್ಲಿಮಾತ್ರ ಅವಕಾಶ ಕಲ್ಪಿಸಲಾಗುತ್ತದೆ.
ರತ್ನಗಿರಿಬೋರೆಯಲ್ಲಿ ಗರಿಷ್ಠ 200 ಜನ, ಹಿರೇಕೊಳಲೆಯಲ್ಲಿ 100 ಜನ, ಅಯ್ಯನಕೆರೆಯಲ್ಲಿ 100 ಜನ ಮೀರದಂತೆ ಪಾಳಿ ಅನ್ವಯ ಭೇಟಿ ನೀಡಲು ಅವಕಾಶ ಕಲ್ಪಿಸಿದೆ. ಭೇಟಿ ನೀಡುವ ಸಂದರ್ಭದಲ್ಲಿ ಕೋವಿಡ್ ನಿಯಮಗಳ ಪಾಲನೆ ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ.ಜಿಲ್ಲೆಯ ರೆಸಾರ್ಟ್, ಹೋಟೇಲ್, ಹೋಂಸ್ಟೇ, ಲಾಡ್ಜ್ಗಳಿಗೆ ಭೇಟಿ ನೀಡುವ ಕೇರಳ,ಮಹಾರಾಷ್ಟ್ರ ಪ್ರವಾಸಿಗರಿಗೆ 3 ದಿನದ ಪೂರ್ವದ ಆರ್ಟಿಪಿಸಿ ಪರೀಕ್ಷೆಯ ನೆಗೆಟಿವ್ ಹೊಂದಿರುವುದು ಕಡ್ಡಾಯಗೊಳಿಸ ಲಾಗಿದ್ದು ಮಾಸ್ಕ್ ಮತ್ತು ಸಾಮಾಜಿಕ ಅಂತರ ಪಾಲಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ