ಚೆನ್ನೈ, ಆ. 24: ಡಿಎಂಕೆ ಪರಮೋಚ್ಛ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ದಿವಂಗತ ಎಂ. ಕರುಣಾನಿಧಿ ಅವರು ‘ಆಧುನಿಕ ತಮಿಳುನಾಡು‘ ನಿರ್ಮಾಣಕ್ಕೆ ನೀಡಿರುವ ಕೊಡುಗೆಯ ಸ್ಮರಣೆಗಾಗಿ ಇಲ್ಲಿನ ಮರಿನಾದಲ್ಲಿರುವ ಕಾಮರಾಜರ್ ಸಲಾಯ್ನಲ್ಲಿ ₹39 ಕೋಟಿ ವೆಚ್ಚದಲ್ಲಿ ಸ್ಮಾರಕ ನಿರ್ಮಿಸುವುದಾಗಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮಂಗಳವಾರ ಪ್ರಕಟಿಸಿದರು. ಪ್ರಸಿದ್ಧ ಕಡಲ ತೀರದಲ್ಲಿರುವ 2 ಎಕರೆ 21 ಗುಂಟೆಯಲ್ಲಿ ಈ ಸ್ಮಾರಕವನ್ನು ನಿರ್ಮಿಸಲಾಗುವುದು. ಡಿಎಂಕೆ ಸಂಸ್ಥಾಪಕ ಅಣ್ಣಾದೊರೈ ಅವರ ಸ್ಮಾರಕದ ಪಕ್ಕದಲ್ಲೇ ಕರುಣಾನಿಧಿ ಅವರ ಸ್ಮಾರಕ ನಿರ್ಮಾಣವಾಗಲಿದೆ ಎಂದು ಅವರು ರಾಜ್ಯ ವಿಧಾನಸಭೆಗೆ ಮಾಹಿತಿ ನೀಡಿದರು. ತನ್ನ ತಂದೆ ಹಾಗೂ ಡಿಎಂಕೆ ಧುರೀಣ ಕರುಣಾನಿಧಿಯವರು, ಸಮಾಜ ಕಲ್ಯಾಣ, ಸಾರಿಗೆ, ಸಾಹಿತ್ಯ, ಶಿಕ್ಷಣ, ನಗರೀಕರಣ ಮತ್ತು ಮೂಲಸೌಕರ್ಯ ಅಭಿವೃದ್ಧಿಯಂತಹ ವಿವಿಧ ಕ್ಷೇತ್ರಗಳಿಗೆ ನೀಡಿದ ಕೊಡುಗೆಗಳನ್ನು ಸ್ಮರಿಸಿದ ಸ್ಟಾಲಿನ್, ಅವರನ್ನು ‘ಆಧುನಿಕ ತಮಿಳುನಾಡಿನ ಶಿಲ್ಪಿ‘ ಎಂದು ಶ್ಲಾಘಿಸಿದರು.