`ದ ಕಾಶ್ಮೀರ್ ಫೈಲ್ಸ್’ ಸಿನಿಮಾ ಕಟ್ಟುಕಥೆಯಾ ಅಥವಾ ಅಸಲಿ ಕಥೆಯಾ? ಏನಿದೆ ಈ ಸಿನಿಮಾದಲ್ಲಿ? `ದ ಕಾಶ್ಮೀರಿ ಫೈಲ್ಸ್’ ಸಿನಿಮಾದ ಸಂಪೂರ್ಣ ವಿಮರ್ಶೆ ಇಲ್ಲಿದೆ!

the kashmir files

`ದ ಕಾಶ್ಮೀರ್ ಫೈಲ್ಸ್’(The Kashmir Files) ಸಿನಿಮಾ ಶೀರ್ಷಿಕೆಯೇ(Tittle) ಅರ್ಥೈಸುತ್ತೇ ಈ ಸಿನಿಮಾ ಕಥಾಹಂದರ ಯಾವ ವಿಷಯವನ್ನು ಜನರಿಗೆ ತಲುಪಿಸಲು ಮುನ್ನುಗ್ಗುತ್ತಿದೆ ಎಂಬುದು.

ಒಂದೆಡೆ ಈ ಸಿನಿಮಾ ಅಸಲಿ ಕಥೆಯನ್ನು ಹೇಳಿದೆ ಎಂಬ ವಾದಗಳು ಕೇಳಿಬಂದರೆ, ಮತ್ತೊಂದೆಡೆ ಈ ಸಿನಿಮಾ ಕಥೆಯನ್ನು ತಮಗೆ ಬೇಕೆಂದೇ ಸೃಷ್ಟಿಮಾಡಿಕೊಂಡಿದ್ದಾರೆ ಎಂಬ ರಾಜಕೀಯ(Political) ಮಾತುಗಳು ಕೇಳಿಬರುತ್ತಿವೆ? ಈ ರಾಜಕೀಯ ಪ್ರಹಾರದ ನಡುವೆ `ದ ಕಾಶ್ಮೀರ್ ಫೈಲ್ಸ್’ ಸಿನಿಮಾ ಹೇಳಿದ್ದೇ ಸತ್ಯವಾ? ಅಥವಾ ನೈಜ ಘಟನೆ ಆಧಾರಿತ ಎಂದು ಕಟ್ಟುಕಥೆಯನ್ನು ಜನರಿಗೆ ನೀಡಿದ್ರಾ? ಎಂಬ ಉತ್ತರ ಸಿಗದ ಅನೇಕ ಪ್ರಶ್ನೆಗಳಿಗೆ ಈಗ ಉತ್ತರ ಹುಡುಕುವ ಸಮಯ.

ಬಿಡುಗಡೆಗೊಂಡ ಮೊದಲ ದಿನದಿಂದಲೂ ಇಲ್ಲಿಯವರೆಗೂ ಇಡೀ ದೇಶವನ್ನು ಅಚ್ಚರಿ, ಅಶ್ಚರ್ಯಚಕಿತರನ್ನಾಗಿ ಮಾಡಿರುವಂತ ಪ್ರಸ್ತುತ ಏಕೈಕ ಸಿನಿಮಾ `ದ ಕಾಶ್ಮೀರ್ ಫೈಲ್ಸ್’. ಬರಹಗಾರ(Writer), ನಿರ್ದೇಶಕ(Director) ವಿವೇಕ್ ಅಗ್ನಿಹೋತ್ರಿ(Vivek Agnihothri) ಈ ಹಿಂದೆ ಇದೇ ರೀತಿ ಹೇಟ್ ಸ್ಟೋರಿ ಹೇಳಿದ್ದರು. ಇದೀಗ 1990ರಲ್ಲಿ ಕಾಶ್ಮೀರದ ಪಂಡಿತರ ಹತ್ಯೆಯ ನಿಜರೂಪವನ್ನು, ಅಸಲಿ ಕಾರಣವನ್ನು ತಮ್ಮದೇ ಶೈಲಿಯಲ್ಲಿ ಪ್ರೇಕ್ಷಕರ ಮುಂದೆ ಪ್ರದರ್ಶನಕ್ಕಿಟ್ಟಿರುವುದು ನಿಜಕ್ಕೂ ಶ್ಲಾಘನೀಯ! ಪ್ರೇಕ್ಷಕರು ಒಪ್ಪಿಕೊಂಡು, ಅಭೂತಪೂರ್ವ ಬೆಂಬಲ ಸೂಚಿಸುವ ಮುಖೇನ ವಿವೇಕ್ ಅಗ್ನಿಹೋತ್ರಿ ಬೆನ್ನುತಟ್ಟಿದ್ದಾರೆ. ಕೇವಲ ಪುಸ್ತಕದ ಪುಟಗಳಲ್ಲಿ ಅಡಗಿ ಹೋಗಿದ್ದ ಕಾಶ್ಮೀರಿ ಪಂಡಿತರ ಸಾವಿನ ಸತ್ಯಾಸತ್ಯತೆಯನ್ನು ಬೆಳ್ಳಿ ಪರೆದೆಯ ಮೂಲಕ ಬಹಿರಂಗಪಡಿಸಿದ್ದಾರೆ! ಕಾಶ್ಮೀರದಲ್ಲಿ ಪಂಡಿತರ ಹತ್ಯೆಯ ದೃಶ್ಯ ಕೆಲವರಿಗೆ ಪ್ರಚೋದಿಸುವ ಉದ್ದೇಶದಿಂದ ಮಾಡಿರುವುದು, ಇನ್ನೂ ಕೆಲವರು ಇದಕ್ಕೆ ಪುರಾವೆಯ ಇಲ್ಲ!

ಕಾಶ್ಮೀರಿ ಪಂಡಿತರ ಹತ್ಯೆಯ ನೆಪವನ್ನು ಇಟ್ಟುಕೊಂಡು ತನಗೆ ಬೇಕಾದ ರೀತಿಯಲ್ಲಿ ಕಥೆ ಸೃಷ್ಟಿಸಿದ್ದಾರೆ ಎಂದು ಆರೋಪ ಎಸಗಿದ್ದಾರೆ. ರಾಜಕೀಯ ದ್ವೇಷ, ಕಿಚ್ಚಿನ ಬಿಚ್ಚುಮಾತುಗಳು ದಿನದಿಂದ ದಿನಕ್ಕೆ ಸ್ವಾಗತವಾಗುತ್ತಿವೆ. ಸಿನಿಮಾವನ್ನು ತಮ್ಮ ದೃಷ್ಟಿಕೋನಕ್ಕೆ ತಕ್ಕಂತೆ ಬದಲಾಯಿಸಿಕೊಂಡು ಬುಡಬುಡಿಕೆ ಮಾತನಾಡುವರ ಸಂಖ್ಯೆಗೇನು ಕಡಿಮೆಯಿಲ್ಲ! ಈ ರಾಜಕೀಯ ಹೇಳಿಕೆಗಳೊಟ್ಟಿಗೆ ಸಾಕಷ್ಟು ವಿವಾದಾತ್ಮಕ ಹೇಳಿಕೆಗಳು ಮುಗಿಲು ಮುಟ್ಟುತ್ತಿದೆ. ಈ ಹೇಳಿಕೆಗಳನೆಲ್ಲಾ ಎಡಗಾಲಿನಲ್ಲಿ ಒದ್ದು ಸಿನಿಮಾ ಜನರನ್ನು ಸೆಳೆಯುತ್ತಿರುವುದು ಒಂದೇ ಕಾರಣಕ್ಕೆ, ” ದ ಕಾಶ್ಮೀರ್ ಫೈಲ್ಸ್ ಸಿನಿಮಾ, ಕಾಶ್ಮೀರಿ ಪಂಡಿತರ ಸಾವಿನಲ್ಲಿ ಚಿಮ್ಮಿದ ರಕ್ತದ ಪ್ರತಿಹನಿಯೂ ಅಸಲಿ ಕಥೆಯನ್ನು ಬಿತ್ತರಿಸುತ್ತದೆ”.

`ದ ಕಾಶ್ಮೀರ್ ಫೈಲ್ಸ್' ಸಿನಿಮಾದ ಪ್ರಾರಂಭದಲ್ಲಿಯೇ ವಿಶೇಷ ಸೂಚನೆ " ಈ ಸಿನಿಮಾ ಯಾವುದೇ ಹೇಳಿಕೆಗಳ ಮೇಲೆ ಮಾಡಿರುವುದಲ್ಲ! ನೈಜ ಘಟನೆ ಆಧಾರಿತ, ದೊರೆತಿರುವ ಪುರಾವೆಗಳನ್ನು ಬಲಪಡಿಸಿಕೊಂಡು ಅದರ ಅನುಸಾರಕ್ಕೆ ತಕ್ಕಂತೆ ಕಟ್ಟಿರುವಂತ ಸಿನಿಮಾ" ಎಂದು ಪ್ರತ್ಯೇಕವಾಗಿ ಉಲ್ಲೇಖಿಸಲಾಗಿದೆ. ಈ ವಿಶೇಷ ಸೂಚನೆ 2 ನಿಮಿಷಗಳ ಕಾಲ ಪ್ರೇಕ್ಷಕರು ಓದಲಿ ಎಂದು ಪ್ರದರ್ಶಿಸಲಾಗುತ್ತದೆ. 170 ನಿಮಿಷಗಳ ಕಾಲ ಚಲಿಸುವ ಈ ಸಿನಿಮಾ, ಅಂದು 1990ರಲ್ಲಿ ಕಾಶ್ಮೀರದಲ್ಲಿ ನೆಲೆಸಿದ್ದ ಪಂಡಿತರ ಪರಿಸ್ಥಿತಿ ಎಷ್ಟು ಘನಘೋರವಾಗಿತ್ತು ಎಂಬುದನ್ನು ತೋರಿಸಿದೆ. 
ನಾವು ಭಾರತೀಯರು, ಭಾರತ ನಮ್ಮದು ಎಂದು ಹೇಳುವ ಮಾತೇ ಇಲ್ಲ! ಹೇಳಿದರೆ ಅವರ ದೇಹದೊಳಗೆ ಗುಂಡಿನ ಸೀಳು! ರಕ್ತದ ಹೋಕುಳಿ ಹರಿಸುತ್ತಿದ್ದರು ಭಯೋತ್ಪಾದಕರ ಗುಂಪು. ಕಾಶ್ಮೀರವನ್ನು ತಮ್ಮದಾಗಿಸಿಕೊಳ್ಳುವಲ್ಲಿ ಮುಂದೋಗುವ ಇವರ ಗುಂಪು ಇಡೀ ಕಾಶ್ಮೀರದಲ್ಲಿ ಪಂಡಿತರು ಇಸ್ಲಾಮಕ್ಕೆ ಪರಿವರ್ತನೆಗೊಳ್ಳಬೇಕು! ಇಲ್ಲ, ಕಾಶ್ಮೀರ ಬಿಡಬೇಕು. ಇಲ್ಲ ಜೀವ ತ್ಯಜಿಸಬೇಕು ಎಂಬ ಘೋಷಣೆ ಕೂಗುತ್ತಾರೆ. ಪಂಡಿತರ ಗುಂಪಿನ ಗಂಡಸರು ಬೇಡ, ಅವರ ಪತ್ನಿಯರು ನಮ್ಮವರಾಗಬೇಕು ಎಂದು ಹಿಂಸಿಸುತ್ತಾರೆ.

ಆಜಾದಿ….ಆಜಾದಿ ಎಂದು ಘೋಷಣೆ ಕೂಗುವ ಮೂಲಕ ಕಾಶ್ಮೀರಿ ಪಂಡಿತರನ್ನು ಸಿಕ್ಕ ಸಿಕ್ಕ ಕಡೆ ಗುಂಡಿಕ್ಕಿ ಕೊಲ್ಲುತ್ತಾನೆ ಗುಂಪಿನ ನಾಯಕ ಬಿಟ್ಟಾ ಕರಾಟೆ. ಕಾಶ್ಮೀರಿ ಪಂಡಿತರ ಸಾವಿನ ಹಿಂದಿರುವ ತಿಳಿಯದ ಸಂಗತಿಯನ್ನು ತಿಳಿಸಲು ತನ್ನ ಚಿತಾಭಸ್ಮದ ಮೂಲಕ ಮತ್ತೆ ಕಾಶ್ಮೀರಕ್ಕೆ ಬರುವ ಪುಷ್ಕರ್ ಪಾತ್ರಧಾರಿ ಅನುಪಮ್ ಖೇರ್(Anupam Kher) ತನ್ನ ಮೊಮ್ಮಗ ಕೃಷ್ಣ ಪಂಡಿತ್ ಮೂಲಕ ನೈಜ ಕಥೆಯನ್ನು ಹೇಳಲು ಪ್ರಾರಂಭಿಸುತ್ತಾರೆ. ಜೆಎನ್‍ಯು ವಿದ್ಯಾರ್ಥಿಯಾಗಿ ಕಾಣಿಸಿಕೊಳ್ಳುವ ಕೃಷ್ಣ ಪಂಡಿತ್(Darshan Kumar) ಕಾಶ್ಮೀರದಲ್ಲಿ ಪಂಡಿತರು ಯಾಕೆ ಸತ್ತರು? ಅವರ ಸಾವಿನ ಹಿಂದಿರುವ ಅಸಲಿ ಕಥೆ ತಿಳಿಯದವನಾಗಿರುತ್ತಾನೆ.

ವಿದ್ಯಾರ್ಥಿಯಾಗಿದ್ದವನಿಗೆ ಲಿಬರಲ್ ಶಿಕ್ಷಕಿಯಾಗಿ ಕಾಣಿಸಿಕೊಳ್ಳುವ ರಾಧಿಕಾ ಮೆನನ್(Actor/Producer Pallavi Joshi) ಕಾಶ್ಮೀರವನ್ನು ಭಾರತದಿಂದ ಕಿತ್ತುಕೊಳ್ಳಬೇಕು ಎಂಬುದನ್ನು ವಿದ್ಯಾರ್ಥಿಗಳಲ್ಲಿ ರಾಜಕೀಯವಾಗಿ ಹರಡುತ್ತಾರೆ. ಪುಷ್ಕರ್ ಪಂಡಿತ್ ತನ್ನ ಮೊಮ್ಮಗನಿಗೆ ಹೇಳದ ಕಟು ಸತ್ಯವನ್ನು ಪುಷ್ಕರ್ ಅವರ ನಾಲ್ವರು ಸ್ನೇಹಿತರು ಹಂತ ಹಂತವಾಗಿ ಮೊಮ್ಮಗ ಕೃಷ್ಣ ಪಂಡಿತ್‍ಗೆ ಹೇಳುತ್ತಾರೆ. ಇಲ್ಲಿಂದ ಹೊರಬೀಳುತ್ತೆ ಕಾಶ್ಮೀರಿ ಪಂಡಿತರ ಸಾವಿನ ಭಯಾನಕ ಸತ್ಯಾಸತ್ಯತೆ! ಪ್ರತಿ ದೃಶ್ಯವನ್ನು ನೈಜ ಘಟನೆಯಂತೆ ತೋರಿಸಿರುವ ಕೆಲಸಗಳು ಬಹಳ ಅಚ್ಚುಕಟ್ಟಾಗಿ ಮೂಡಿಬಂದಿವೆ. ರಕ್ತಪಾತ, ಚಿತ್ರಹಿಂಸೆ ಮತ್ತು ಗುಂಡಿನ ಚಕಮಕಿ ನಡೆಯುವ ಕಣಿವೆಗಳ ದೃಶ್ಯವನ್ನು ಜನರಿಗೆ ತಲುಪಿಸುವ ಕೆಲಸದಲ್ಲಿ ಚಿತ್ರತಂಡ ಯಶಸ್ವಿಯಾಗಿದೆ.

ಒಂದೊಂದು ದೃಶ್ಯ ಕೂಡ ನಮ್ಮ ಮುಂದೆ ನಡೆಯುತ್ತಿದೆ ಎಂಬಂತೆ ಬಿಂಬಿತವಾಗುತ್ತೆ. ಕೆಲವೊಂದು ಸನ್ನಿವೇಶ ನೋಡುವಾಗ ನಮ್ಮ ತಾಳ್ಮೆಯನ್ನು ಪರೀಕ್ಷೆ ಮಾಡಿದಂತೆ ಭಾಸವಾಗುತ್ತೆ! ಅಷ್ಟು ಕ್ರೂರ, ಹಿಂಸಾತ್ಮಾಕ ದೃಶ್ಯಗಳು ಈ ಸಿನಿಮಾದಲ್ಲಿವೆ. ಅನುಪಮ್ ಖೇರ್ ಅವರ ಪುಷ್ಕರ್ ಪಾತ್ರ ಪ್ರತಿಯೊಬ್ಬ ವೀಕ್ಷಕನಿಗೂ ಹತ್ತಿರವಾಗುತ್ತೆ, ಅವರ ಪ್ರತಿಯೊಂದು ಡೈಲಾಗ್‍ಗಳು ಕೂಡ ನೈಜತೆಯನ್ನು ಸೃಷ್ಟಿಸುತ್ತದೆ. ಪ್ರತಿಯೊಬ್ಬರನ್ನು ಭಾವುಕರನ್ನಾಗಿ ಮಾಡುತ್ತದೆ ಕೆಲವು ದೃಶ್ಯಗಳು. ಆ ಸಮಯದಲ್ಲಿ ಯಾರ್ಯಾರ ಅಧಿಕಾರ ಹೇಗಿತ್ತು? ಮಾಧ್ಯಮಗಳ ಮುಖಪುಟಗಳು ಹೇಗಿತ್ತು? ಆಡಳಿತ ಹೇಗೆ ಕ್ರೂರತ್ವಕ್ಕೆ ಕಾರಣ ಎಂಬುದು ಸ್ಪಷ್ಟವಾಗಿ ತಿಳಿಯುತ್ತೆ.

ಕೇವಲ ಕಾಶ್ಮೀರಿ ಪಂಡಿತರು ಮಾತ್ರ ಬಲಿಯಾಗಿದ್ದಾರೆ ಎಂಬ ಹೇಳಿಕೆಯು ಹುಸಿಯಾಗುತ್ತದೆ. ಇದಕ್ಕೆ ಕಾರಣ, ಕಾಶ್ಮೀರದಲ್ಲಿದ್ದ ಮುಸ್ಲಿಂಮರು, ಸಿಖ್ಖರು, ಬುದ್ಧಿಸ್ಟ್, ಪಂಡಿತರು ಎಲ್ಲರನ್ನು ಅಮಾನುಷಾವಾಗಿ ಕೊಲ್ಲಲಾಗಿರುತ್ತದೆ. ಯಾರೇ ಒಬ್ಬರು ನಾನು ಭಾರತೀಯ, ಭಾರತದವನು ಎಂದು ಹೇಳಿದರೆ, ಹೇಳಿದ ಮುಂದಿನ ಮರುನಿಮಿಷವೇ ಅವರ ಹಣೆಗೆ ಗುಂಡು ಹಾರಿಸುತ್ತಿದ್ದರು. ಎಷ್ಟೋ ಅಮಾಯಕ, ಮುಗ್ದ ಜೀವಗಳು ಈ ಸಂಘರ್ಷಕ್ಕೆ ಬಲಿಯಾಗಿವೆ ಎಂಬುದು ಅರಗಿಸಿಕೊಳ್ಳಲಾಗದ ಸಂಗತಿ.

ಆಜಾದಿ….ಆಜಾದಿ….ಆಜಾದಿ ಎಂದು ಕೂಗುವ ಮೂಲಕ ಪಂಡಿತರ ಎದೆ ಸೀಳುವ ದೃಶ್ಯಗಳು ನಮ್ಮ ರಕ್ತವನ್ನು ಕುದಿಸುತ್ತದೆ! ಪೂರ ಸಿನಿಮಾ ಕಥೆಯನ್ನು ಪ್ರೇಕ್ಷಕರಿಗೆ ತಲುಪಿಸುವ ಕೆಲಸದಲ್ಲಿ ಎಲ್ಲೂ ಬ್ರೇಕ್ ಕೊಡದೆ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ ಎಂಬುದರಲ್ಲಿ ಅನುಮಾನವೇ ಇಲ್ಲ! ಅದಕ್ಕೆ ಈಗಾಗಲೇ ಸಿಕ್ಕಿರುವ ರೇಟಿಂಗ್ ಮತ್ತು ಜನಾಭಿಪ್ರಾಯವೇ ಸ್ಪಷ್ಟ ಉತ್ತರ ಎನ್ನಬಹುದು. ಈ ಸಿನಿಮಾ ಮಹತ್ವ ತಿರುವು ಪಡೆದುಕೊಳ್ಳುವುದು ಕೃಷ್ಣ ಪಂಡಿತ್ ತನ್ನ ತಂದೆ, ತಾಯಿ ಮತ್ತು ತಮ್ಮ ಹೇಗೆ ಸತ್ತರು? ಎಂಬುದನ್ನು ತನ್ನ ಭಾಷಣದಲ್ಲಿ ಹೇಳುವ ಒಂದು ಸಾಲಿನಿಂದ ಹೊರಬೀಳುತ್ತದೆ. 

ಕಾಶ್ಮೀರಿ ಪಂಡಿತರನ್ನು ಎಳೆದು ತಂದು ಒಂದು ಕಡೆ ಸೇರಿಸಿ, ಒಬ್ಬೊಬ್ಬರನ್ನು ನಿಲ್ಲಿಸಿ, ಅವರ ಹಣೆಗೆ ಗುಂಡಿಟ್ಟು ಕ್ರೂರತೆ ಮೆರೆಯುವ ದೃಶ್ಯ ಯಾರಿಗೆ ಆಗಲಿ ಅರಗಿಸಿಕೊಳ್ಳಲು ಕಷ್ಟಸಾಧ್ಯ! ಹೆಣ್ಣು ಮಗಳೊಬ್ಬಳನ್ನು ಹಿಂಸಿಸಿ ಕೊಲ್ಲುವ ದೃಶ್ಯ ಕ್ರೂರತೆಗೂ ಮೀರಿದ ಪದವನ್ನು ಹುಡುಕುತ್ತ ಹೋಗುತ್ತದೆ. ಒಟ್ಟಾರೆ 30 ವರ್ಷಗಳ ಹಿಂದೆ ಇಂಥ ಕ್ರೂರತನ ನಡೆದಿತ್ತಾ? ಹಾಗಾದ್ರೆ ಇಷ್ಟು ದಿನ ಈ ಸತ್ಯ ಯಾಕೆ ಹೊರಬರಲಿಲ್ಲ ಎಂಬ ಪ್ರಶ್ನೆಗಳು ಕಾಡುವುದಂತು ಅಕ್ಷರಶಃ ಸತ್ಯ! ಇಂಥ ಘನಘೋರ ಘಟನೆಗಳು ಅಂದು ಕಾಶ್ಮೀರಿ ಪಂಡಿತರಿಗೆ ಎದುರಾಗಿತ್ತಾ ಎಂಬುದು ಪ್ರಶ್ನಾತೀತ!

ಈ ಸಿನಿಮಾದ ಪ್ರಮುಖ ಕಲಾವಿದರಾದ ಚಿನ್ಮಯಿ ಮಂಡೇಲ್ಕರ್, ಮಿಥುನ್ ಚಕ್ರಬೋರ್ತಿ, ಅನುಪಮ್ ಖೇರ್, ಪಲ್ಲವಿ ಜೋಶಿ, ಅಮಾನ್ ಇಖ್ಬಾಲ್, ದರ್ಶನ್ ಕುಮಾರ್, ಬಾಷಾ ಸುಂಬ್ಲಿ, ಪುನೀತ್ ಇಸ್ಸಾರ್ ಮತ್ತು ಪ್ರಕಾಶ್ ಬೆಳವಾಡಿ ಅವರ ನೈಜ ನಟನೆಗೆ ಅಭಿನಂದನೆಗಳು ಸಲ್ಲಿಸಲೇಬೇಕು. `ದ ಕಾಶ್ಮೀರ ಫೈಲ್ಸ್‘ ಸಿನಿಮಾ ಪ್ರತಿಯೊಬ್ಬ ಭಾರತೀಯನ ಹೃದಯದ ಬಾಗಿಲನ್ನು ತಟ್ಟುತ್ತಿದೆ. ಹೌದು, ಅಷ್ಟು ಉತ್ತಮ ಪ್ರತಿಕ್ರಿಯೇ ಈ ಸಿನಿಮಾಗೆ ದೊರೆಯುತ್ತಿದೆ. ಕಾರಣ, ಈ ಒಂದು ಸಿನಿಮಾ ಯಾವುದೇ ಮುಲ್ಲಾಜಿಲ್ಲದೇ ಸತ್ಯಾಸತ್ಯತೆಯನ್ನು ಬಿತ್ತರಿಸುವ ಪರಿಗೆ ಎಂದು ಹೇಳಬಹುದು. ಪ್ರತಿಯೊಬ್ಬರು ಈ ಸಿನಿಮಾವನ್ನು ವೀಕ್ಷಿಸಿ ಎಂದು ನಾನು ಖುದ್ದಾಗಿ ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ.
Exit mobile version