ಹಾಡಹಗಲೇ ಪೆಟ್ರೋಲ್‌ ಬಂಕ್‌ನಲ್ಲಿ ಕಳ್ಳತನಕ್ಕೆ ಯತ್ನ

ಬೆಂಗಳೂರು ನ 10 : ಹಾಡಹಗಲೇ ದುಷ್ಕರ್ಮಿಯೊಬ್ಬ ವಿಳಾಸ ಕೇಳುವ ನೆಪದಲ್ಲಿ ಪೆಟ್ರೋಲ್ ಬಂಕ್ ಸಿಬ್ಬಂದಿಯ ಹಣ ದರೋಡೆ ನಡೆಸಲು ಯತ್ನಿಸಿದ ಘಟನೆ  ಮೈಸೂರು ರಸ್ತೆಯ ರಚನ ಪೆಟ್ರೋಲ್ ಬಂಕ್​ನಲ್ಲಿ ನಡೆದಿದೆ.

ಲಾಂಗ್ ತೋರಿಸಿ ಹಣದ ಬ್ಯಾಗ್ ಕಸಿಯುವ ವಿಫಲ ಯತ್ನ ನಡೆಸಿರುವ ಘಟನೆ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಕಳೆದ ಎರಡು ದಿನಗಳ ಹಿಂದೆ ಮೈಸೂರು ರಸ್ತೆಯಲ್ಲಿರುವ ಇಂಡಿಯನ್ ಪೆಟ್ರೋಲ್ ಬಂಕ್​ ಮುಂದೆ ವಿಳಾಸ ಕೇಳುವ ಸೋಗಿನಲ್ಲಿ ಹೆಲ್ಮೆಟ್ ಧರಿಸಿಕೊಂಡು ಬಂದ ವ್ಯಕ್ತಿಯೊಬ್ಬ, ಸಿಬ್ಬಂದಿಯೊಂದಿಗೆ ಮಾತಿಗಿಳಿದಿದ್ದಾನೆ. ಈ ವೇಳೆ ನೋಡು ನೋಡುತ್ತಿದ್ದಂತೆ ಏಕಾಏಕಿ ಲಾಂಗ್ ತೋರಿಸಿ, ಬಂಕ್ ಸಿಬ್ಬಂದಿ ಕೈಯಲ್ಲಿದ್ದ ಹಣದ ಬ್ಯಾಗ್ ಕಸಿದುಕೊಳ್ಳಲು ಮುಂದಾಗಿದ್ದಾನೆ.

ಲಾಂಗ್ ಬೀಸಿದರೂ ಕೂಡ ಹಣದ ಬ್ಯಾಗ್ ಮಾತ್ರ ಸಿಬ್ಬಂದಿ ಖದೀಮನಿಗೆ ಕೊಟ್ಟಿಲ್ಲ. ನಡುರಸ್ತೆಯಲ್ಲೇ ಬ್ಯಾಗ್ ಹಿಡಿದು ಇಬ್ಬರೂ ಎಳೆದಾಡಿಕೊಂಡಿದ್ದಾರೆ. ಈ ವೇಳೆ ಘಟನಾ ಸ್ಥಳಕ್ಕೆ ಹೆಚ್ಚು ಹೆಚ್ಚು ಜನರು ಆಗಮಿಸುವುದನ್ನು ಕಂಡು ಆತಂಕಗೊಂಡ ಖದೀಮ, ಸ್ಥಳದಿಂದ ಪರಾರಿಯಾಗಿದ್ದಾನೆ.

ಈ ಘಟನೆ ಕುರಿತು ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Exit mobile version