ಬೆಂಗಳೂರು, ಮಾ. 14: ರಾಷ್ಟ್ರೀಯ ಬ್ಯಾಂಕುಗಳ ಖಾಸಗೀಕರಣ ವಿರೋಧಿಸಿ ಬ್ಯಾಂಕ್ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆ ಮಾ.15 ಮತ್ತು 16ರಂದು ಎರಡು ದಿನಗಳ ಅಖಿಲ ಭಾರತ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಬ್ಯಾಂಕಿಂಗ್ ವಹಿವಾಟುಗಳು ಸಂಪೂರ್ಣ ಸ್ಥಗಿತಗೊಂಡಿದೆ.
ಎಐಬಿಇಎ, ಎಐಬಿಓಸಿ, ಎನ್ಸಿಬಿಇ, ಎಐಬಿಇ, ಎಐಬಿಓಎ ಸೇರಿದಂತೆ ವಿವಿಧ ಬ್ಯಾಂಕ್ ಕಾರ್ಮಿಕರ ಸಂಘಟನೆಗಳ ನೇತೃತ್ವದಲ್ಲಿ ದೇಶಾದ್ಯಂತ 10 ಲಕ್ಷಕ್ಕೂ ಹೆಚ್ಚು ಮಂದಿ ಮುಷ್ಕರ ನಡೆಸಲಿದ್ದಾರೆ. 11ನೇ ವೇತನ ಪರಿಷ್ಕರಣೆ ಜಾರಿಗೆ ಒತ್ತಾಯ ವಾಣಿಜ್ಯ ಬ್ಯಾಂಕುಗಳಲ್ಲಿ ವೇತನ ಪರಿಷ್ಕರಣೆ ಜಾರಿಯಾದ ನಂತರ ಗ್ರಾಮೀಣ ಬ್ಯಾಂಕುಗಳ ಉದ್ಯೋಗಿಗಳಿಗೆ ರಾಷ್ಟ್ರೀಯ ನ್ಯಾಯಮಂಡಳಿ ತೀರ್ಪಿನ ಅನ್ವಯ ಕೇಂದ್ರ ಸರ್ಕಾರ ವೇತನ ಪರಿಷ್ಕರಣೆ ಜಾರಿಮಾಡುವಂತೆ ಒತ್ತಾಯಿಸಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ನೌಕರರ ಸಂಘ, ಕರ್ನಾಟಕ ಗ್ರಾಮೀಣ ಬ್ಯಾಂಕ್ ಅಧಿಕಾರಿಗಳ ಸಂಘ ಹಾಗೂ ಸಮನ್ವಯ ಜಂಟಿಕ್ರಿಯಾ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳು ಗ್ರಾಮೀಣ ಬ್ಯಾಂಕುಗಳ ಪ್ರಾದೇಶಿಕ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಗ್ರಾಮೀಣ ಬ್ಯಾಂಕ್ ಅಧಿಕಾರಿಗಳ ಸಂಘದ ಅಧ್ಯಕ್ಷ ಕೆ.ಆರ್.ಕೃಷ್ಣಮೂರ್ತಿ ತಿಳಿಸಿದ್ದಾರೆ.
ಬೇಡಿಕೆಗಳು:
- ರಾಷ್ಟ್ರೀಕೃತ ಬ್ಯಾಂಕುಗಳನ್ನು ಖಾಗೀಕರಣ ವಾಡುವ ಕ್ರಮಕ್ಕೆ ಕಡಿವಾಣ ಹಾಕಬೇಕು.
- ಬ್ಯಾಂಕುಗಳಲ್ಲಿ ದಿನಗೂಲಿ ನೌಕರರಾಗಿ ದಶಗಳಿಂದ ದುಡಿಯುತ್ತಿರುವವರನ್ನು ಖಾಯಂಗೊಳಿಸಬೇಕು.
- 11ನೇ ವೇತನ ಪರಿಷ್ಕರಣೆಯನ್ನು ಕೂಡಲೇ ಜಾರಿಗೆ ತರಬೇಕು.
- ಗ್ರಾಮೀಣ ಬ್ಯಾಂಕುಗಳಲ್ಲಿ ವ್ಯವಹಾರಕ್ಕೆ ತಕ್ಕಂತೆ ಮಾನವ ಸಂಪನ್ಮೂಲ ಹೆಚ್ಚಿಸಬೇಕು.
- ನಿವೃತ್ತ ನೌಕರರ ಪಿಂಚಣಿ ಪಾವತಿಯಲ್ಲಿ ಆದ ತಾರತಮ್ಯವನ್ನು ಸರಿಪಡಿಸಬೇಕು.