ನಾಳೆಯಿಂದ ‘ಎದೆ ತುಂಬಿ ಹಾಡುವೆನು’

ಗಾನ ಗಾರುಡಿಗ ದಿ.|ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಕಳೆದ ಕೆಲವು ವರ್ಷಗಳ ಹಿಂದೆ ನಡೆಸಿಕೊಡುತ್ತಿದ್ದ ಜನಪ್ರಿಯ ಕಾರ್ಯಕ್ರಮ ‘ಎದೆ ತುಂಬಿ ಹಾಡುವೆನು’ ನಾಳೆ ಶನಿವಾರದಿಂದ ‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ಹೊಸ ರೂಪದೊಂದಿಗೆ ಪ್ರಸಾರವಾಗಲಿದೆ.

ಎಸ್ ಪಿ ಬಿ ಅವರ ನೆನಪಿನಲ್ಲಿ ಆರಂಭವಾಗಲಿರುವ ಈ ಕಾರ್ಯಕ್ರಮದ ಬಗ್ಗೆ ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಲರ್ಸ್ ಕನ್ನಡದ ಮುಖ್ಯಸ್ಥ ಪರಮೇಶ್ವರ ಗುಂಡ್ಕಲ್, “ನಾನು ಮೂರುವರ್ಷಗಳ ಹಿಂದೆ ಚೆನ್ನೈ ನಲ್ಲಿ ಎಸ್ ಪಿ ಬಿ ಅವರನ್ನು ಭೇಟಿ ಮಾಡಿ, ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮ ಪುನಃ ಆರಂಭಿಸೋಣ ಎಂದು ಕೇಳಿದ್ದೆ. ಆಗ ಅವರು ನನ್ನ ಶೆಡ್ಯುಲ್ ನೋಡಿ ತಿಳಿಸುತ್ತೀನಿ ಅಂದರು. ಆನಂತರ ಅವರಿಂದ ನನಗೊಂದು ಕಾಗದ ಬಂತು. ನನ್ನ ಬೇರೆ ಕಾರ್ಯಕ್ರಮಗಳು ಈಗಾಗಲೇ ನಿಗದಿಯಾಗಿರುವುದರಿಂದ 2019ರಲ್ಲಿ “ಎದೆ ತುಂಬಿ ಹಾಡುವೆನು” ಕಾರ್ಯಕ್ರಮ ಆರಂಭಿಸೋಣ ಅಂತ ಬರೆದಿದ್ದರು.

ನಂತರ ಕಾರ್ಯಕ್ರಮದ ರೂಪುರೇಷೆ ಸಿದ್ದಗೊಂಡು, ಆರಂಭ ಮಾಡೋಣ ಅಂದುಕೊಳ್ಳುತ್ತದಾಗ “ಕೊರೋನ” ಆರಂಭವಾಯಿತು. ನಂತರದ ದಿನಗಳಲ್ಲಿ ಎಸ್ ಪಿ ಬಿ ನಮ್ಮಿಂದ ದೂರವಾದರು.
ಈಗ ಅವರ ನೆನಪಲ್ಲಿ ಈ ಕಾರ್ಯಕ್ರಮ ಇದೇ ಆಗಸ್ಟ್ 14ರಿಂದ ಆರಂಭವಾಗಲಿದೆ. ರಾಜೇಶ್ ಕೃಷ್ಣನ್, ವಿ.ಹರಿಕೃಷ್ಣ ಹಾಗೂ ರಘು ದೀಕ್ಷಿತ್ ಈ ಕಾರ್ಯಕ್ರಮದ ತೀರ್ಪುಗಾರರು. ವಿಶೇಷ ತೀರ್ಪುಗಾರರಾಗಿ ಎಸ್ ಪಿ ಬಿ ಅವರ ಪುತ್ರ ಎಸ್ ಪಿ ಚರಣ್ ಇರುತ್ತಾರೆ. ಈಗಾಗಲೇ ಆಡಿಷನ್ ಮೂಲಕ ಹದಿನಾರರಿಂದ, ಹದಿನೆಂಟು ಗಾಯಕರನ್ನು ಆಯ್ಕೆ ಮಾಡಲಾಗಿದೆ ಎಂದಿದ್ದಾರೆ.

ನಾನು ಚಿಕ್ಕವನಾಗಿದಾಗ ನಮ್ಮಮ್ಮ ರೆಡಿಯೋ ಹಾಕಿದ ತಕ್ಷಣ ಎಸ್ ಪಿ ಬಿ ಅವರ ಹಾಡು ಬರುತಿತ್ತು. ಆಗಿನಿಂದ ಅವರ ಕಂಠಕ್ಕೆ ಅಭಿಮಾನಿ ನಾನು. ಅಂತಹ ಮಹಾನ್ ಗಾಯಕ ನಡೆಸುಕೊಡುತ್ತಿದ್ದ ಕಾರ್ಯಕ್ರಮಕ್ಕೆ ನೀವು ತೀರ್ಪುಗಾರರಾಗಬೇಕು ಎಂದು ಪರಮೇಶ್ವರ್ ಅವರು ಹೇಳಿದಾಗ ನನ್ನ ಆನಂದಕ್ಕೆ ಪಾರವೇ ಇರಲಿಲ್ಲ ಎಂದರು ರಘು ದೀಕ್ಷಿತ್.

ಎಸ್ ಪಿ ಬಿ ಅವರ ಮಾನಸ ಪುತ್ರರೆಂದೇ ಖ್ಯಾತರಾಗಿರುವ ರಾಜೇಶ್ ಕೃಷ್ಣನ್ ಮಾತನಾಡಿ, ಈ ಕಾರ್ಯಕ್ರಮವನ್ನು ಎಸ್ ಪಿ ಬಿ ಅವರೆ ನಮ್ಮಲ್ಲಿ ನಿಂತು ನಡೆಸಿಕೊಡುತ್ತಾರೆ. ಅವರಿಂದ ನಾವು ತಿಳಿದುಕೊಂಡದ್ದನ್ನು, ಈಗಿನ ಗಾಯಕರಿಗೆ ತಿಳಿಸುವ ಪ್ರಯತ್ನ ಮಾಡುತ್ತಿದ್ದೇವೆ.
ನಾನು ಹಂಸಲೇಖ ಅವರ ಬಳಿ ಟ್ರ್ಯಾಕ್ ಹಾಡುವ ಕಾಲದಲ್ಲಿ ನಾನು ಎಸ್ ಪಿ ಬಿ ಅವರು ಇಲ್ಲಿಗೆ ಬಂದಾಗ ತುಂಬಾ ಹತ್ತಿರದಿಂದ ನೋಡಿದವನು ನಾನು ಅವರು ನೀನು ಏಕೆ ನನ್ನ ಹಾಗೆ ಹಾಡುತ್ತೀಯಾ? ಎಂದು ಕೇಳಿದ್ದು ಉಂಟು..‌ಅವರು ನನ್ನ ಮೇಲಿಟ್ಟಿದ ಪ್ರೀತಿ ಅಪಾರ. ಹೀಗೆ ಎಸ್ ಪಿ ಬಿ ಅವರೊಂದಿಗಿನ ಒಡನಾಟವನ್ನು ರಾಜೇಶ್ ಕೃಷ್ಣನ್ ನೆನಪಿಸಿಕೊಂಡರು.

ಕೆಲವು ವರ್ಷಗಳ ಹಿಂದೆ ಭಾನುವಾರ ರಾಮಾಯಣ ಹಾಗೂ ಮಹಾಭಾರತ ಎಂಬ ಎರಡು ಮಹಾನ್ ಧಾರಾವಾಹಿಗಳು ದೂರದರ್ಶನದಲ್ಲಿ ಬರುತ್ತಿದ್ದವು.‌ ಕೋಟ್ಯಾಂತರ ಜನ ಅದನ್ನು ವೀಕ್ಷಿಸುತ್ತಿದ್ದರು. ಆನಂತರ ಅಷ್ಟೇ ಜನಪ್ರಿಯವಾಗಿದ್ದು “ಎದೆ ತುಂಬಿ ಹಾಡುವೆನು” ನಾನು ಈಗ ಅವರು ನಡೆಸಿಕೊಡುತ್ತಿದ್ದ ಕಾರ್ಯಕ್ರಮದ ವಿಟಿ ನೋಡಿದಾಗ ಭಯವಾಗುತ್ತಿದೆ.

ಅಲ್ಲಿ ಬರುವ ಹೊಸ ಗಾಯಕರಿಗಿಂತ ನಾವು ತಿಳಿದುಕೊಳ್ಳುವುದು ಸಾಕಷ್ಟಿದೆ. ತೀರ್ಪುಗಾರರಾಗಿ ಎಸ್ ಪಿ ಬಿ ಅವರು ಕಾರ್ಯಕ್ರಮ ನಡೆಸಿಕೊಡುತ್ತಿದ್ದ ರೀತಿ ಅನುಕರಣೀಯ. ಅವರ ಹೆಸರಿಗೆ ತೊಂದರೆಯಾಗದಂತೆ ಕಾರ್ಯಕ್ರಮ ನಡೆಸಿಕೊಡುವುದು ನಮ್ಮ ಕರ್ತವ್ಯ ಎಂದರು ವಿ.ಹರಿಕೃಷ್ಣ.

ಅಪ್ಪನ ನೇತೃತ್ವದಲ್ಲಿ ಮೂಡಿಬರುತ್ತಿದ್ದ, ” ಎದೆ ತುಂಬಿ ಹಾಡುವೆನು” ಕಾರ್ಯಕ್ರಮವನ್ನು ಮತ್ತೆ ಆರಂಭಿಸುತ್ತಿರುವುದಕ್ಕೆ. ಕಲರ್ಸ್ ವಾಹಿನಿಗೆ ಧನ್ಯವಾದ ಎಂದರು ಎಸ್ ಪಿ ಬಿ ಪುತ್ರ ಎಸ್ ಪಿ ಚರಣ್.
ರಾಮೋಜಿರಾವ್ ಅವರು ತೆಲುಗಿನಲ್ಲಿ “ಪಾಡುತ ತೀಯಗ” ಎಂಬ ಕಾರ್ಯಕ್ರಮ ನಡೆಸುತ್ತಿದ್ದರು. ಆ‌ನಂತರ ಅಪ್ಪ ಈ ಕಾರ್ಯಕ್ರಮವನ್ನು ಕನ್ನಡದಲ್ಲಿ “ಎದೆ ತುಂಬಿ ಹಾಡುವೆನು” ಎಂಬ ಶೀರ್ಷಿಕೆಯಿಂದ ಆರಂಭಿಸಿದರು. ಕಾರ್ಯಕ್ರಮ ಅತ್ಯಂತ ಜನಪ್ರಿಯವೂ ಆಯಿತು. ಈ ಟಿವಿ ಅವರು ಈ ಕಾರ್ಯಕ್ರಮ ನಿಲಿಸಿದಾಗ ಅಪ್ಪನಿಗೆ ಬೇಸರವಾಗಿದ್ದು ಉಂಟು. ತೆಲುಗು, ಕನ್ನಡದಲ್ಲಿ ಜನಪ್ರಿಯವಾಗಿದ್ದ ಈ ಕಾರ್ಯಕ್ರಮವನ್ನು ತಮಿಳಿನಲ್ಲಿ ಮಾಡಲಿಲ್ಲ ಎಂಬ ಕೊರಗು ಅಪ್ಪನಲ್ಲಿತ್ತು ಎಂದರು ಚರಣ್.ನಮ್ಮ ಬಾಲ್ಯದಲ್ಲಿ ಅಪ್ಪನೊಂದಿಗೆ ಹೆಚ್ಚು ಸಮಯ ಕಳೆಯಲಿಲ್ಲ.. ಅಪ್ಪ ಯಾವಗಲೂ ಬ್ಯುಸಿ ಇರುತ್ತಿದ್ದರು.

ನನ್ನ ಕಿರಿಯ ಸಹೋದರನಂತಿರುವ ರಾಜೇಶ್ ಕೃಷ್ಣನ್ ಅಪ್ಪನೊಂದಿಗೆ ಸಾಕಷ್ಟು ಸಮಯ ಕಳೆದಿದ್ದಾರೆ ಎಂದು ಚರಣ್ ಹಿಂದಿನ ದಿನಗಳನ್ನು ಮೆಲಕು ಹಾಕಿ ಕೊಂಡರು. ನಾನು ಆಗಾಗ ಈ ಕಾರ್ಯಕ್ರಮಕ್ಕೆ ಆಗಮಿಸುತ್ತೇನೆ ಎಂದು ತಿಳಿಸಿದ ಎಸ್ ಪಿ ಚರಣ್ ಈ ಕಾರ್ಯಕ್ರಮದ ಇಡೀ ತಂಡಕ್ಕೆ ಮತ್ತೊಮ್ಮೆ ಧನ್ಯವಾದ ತಿಳಿಸಿದರು.

Exit mobile version