ಮದ್ದೂರು, ಫೆ. 09: ಹಾಡಹಗಲೇ ಮಹಿಳೆಯನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಮದ್ದೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ರಾಮನಗರ ಜಿಲ್ಲೆ ರಾಮನಗರ ವಾಸಿ ಹೊಂಬೇಗೌಡನದೊಡ್ಡಿ ನಿವಾಸಿ ಎಚ್.ಆರ್. ಮನು ಕುಮಾರ್ ಅಲಿಯಾಸ್ ಮನು (೨೩) ಮತ್ತು ಕೂಟಗಲ್ ಹೋಬಳಿ ನಿವಾಸಿ ಸಿ. ರಮೇಶ್ (೨೯) ಬಂಧಿತ ಆರೋಪಿಗಳು.
ಫೆ.೨ರ ಮಂಗಳವಾರ ಪಟ್ಟಣದ ವಿ.ವಿ.ನಗರ ೯ನೇ ಕ್ರಾಸ್ ನಿವಾಸಿ ನಂಜುಂಡ ಅಲಿಯಾಸ್ ಬಿಳಿಯಪ್ಪ ಅವರ ಪತ್ನಿ ಪೂರ್ಣಿಮಾ ಅವರನ್ನು ದುಷ್ಕರ್ಮಿಗಳು ಹಣ ಮತ್ತು ಚಿನ್ನದ ಒಡವೆ ದೋಚುವ ಸಂಚಿನಿಂದ ಹತ್ಯೆಗೈದಿದ್ದರು.
ಆರೋಪಿಗಳ ಪತ್ತೆ ಸಂಬಂಧ ಡಿವೈಎಸ್ಪಿ ಲಕ್ಷ್ಮೀನಾರಾಯಣ ಪ್ರಸಾದ್ ನೇತೃತ್ವದಲ್ಲಿ ಪ್ರತ್ಯೇಕ ಮೂರು ತಂಡಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ನೇಮಿಸಿದ್ದರು.
ಆರೋಪಿಗಳಿಬ್ಬರು ಮೃತಳ ಬಳಿಯಿದ್ದ ಒಡವೆ, ಹಣ ದೋಚುವ ಉದ್ದೇಶದಿಂದ ಸಲ್ಲದ ನೆಪ ಹೇಳಿ ಆಕೆಯ ಮನೆಗೆ ಭೇಟಿ ನೀಡಿ ಬಳಿಕ ಕೈಕಾಲುಗಳನ್ನು ಕಟ್ಟಿ ಉಸಿರುಗಟ್ಟಿಸಿ ಮೃತಳ ಕತ್ತಿನಲ್ಲಿದ್ದ ರೋಲ್ಡ್ ಗೋಲ್ಡ್ ಮಾಂಗಲ್ಯ ಸರ, ನಾಲ್ಕು ಬಳೆ, ೪೫೦೦ ರೂ. ನಗದು, ಮೊಬೈಲ್ನ್ನು ದೋಚಿ ಪರಾರಿಯಾಗಿದ್ದರು.