ಬೆಂಗಳೂರು, ಡಿ. 07: ಸದಸ್ಯರ ಹಾಜರಾತಿ ನಡುವೆಯೇ ವಿಧಾನಸಭೆ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಅಧಿವೇಶನದಲ್ಲಿ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು.
ಕೇಂದ್ರ ಸಚಿವರಾಗಿದ್ದ ರಾಮ್ ವಿಲಾಸ್ ಪಾಸ್ವಾನ್, ಮಾಜಿ ಕೇಂದ್ರ ಸಚಿವ ಜಸ್ವಂತ್ ಸಿಂಗ್, ಮಾಜಿ ಸಚಿವ ವೈ. ನಾಗಪ್ಪ, ಮಾಜಿ ಶಾಸಕರಾದ ಕೆ. ಮಲ್ಲಪ್ಪ, ಡಿ.ಐ. ಪಾಟೀಲ್, ರತನ್ ಕುಮಾರ್ ಕಟ್ಟೆಮಾರ್, ವಿಮರ್ಶಕ ಜಿ.ಎಸ್. ಆಮೂರ, ಪತ್ರಕರ್ತ ರವಿ ಬೆಳಗೆರೆ, ಸಹಕಾರಿ ಧುರೀಣ ವಿ.ಎಸ್. ಸೊಂದೆ ಸೇರಿದಂತೆ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು.
ಸದನದಲ್ಲಿ ಹಾಜರಾತಿ ಕೊರತೆ:
ಚಳಿಗಾಲದ ಅಧಿವೇಶನದ ಮೊದಲ ದಿನದಂದು ಹಾಜರಾತಿ ಕೊರತೆ ಕಂಡು ಬಂದಿದ್ದು, ಸಿಎಂ ಸೇರಿ 12 ಸಚಿವರು, ಆಡಳಿತ ಪಕ್ಷದ 26 ಶಾಸಕರು, ವಿಪಕ್ಷ ಕಾಂಗ್ರೆಸ್ ಶಾಸಕರು 25, ಜೆಡಿಎಸ್ ಶಾಸಕರು 5 ಮಾತ್ರ ಸದನದಲ್ಲಿ ಹಾಜರಾಗಿದ್ದರು.
ಈ ನಡುವೆ ಶಿವಮೊಗ್ಗ ಪ್ರವಾಸಕ್ಕೆ ತೆರಳುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿಧಾನಸಭೆಯಿಂದ ನಿರ್ಗಮಿಸಿದರು. ಎಚ್ಎಎಲ್ ಏರ್ ಪೋರ್ಟ್ ಗೆ ತೆರಳಿದ ಸಿಎಂ, ಶಿವಮೊಗ್ಗಕ್ಕೆ ಪ್ರಯಾಣಿಸಿದ್ದು, ಸಂಜೆ 3.45ಕ್ಕೆ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.
ಮತ್ತೊಂದೆಡೆ ವಿಧಾನ ಪರಿಷತ್ ಕಲಾಪ ಆರಂಭವಾಗಿದ್ದು, ವಂದೇ ಮಾತರಂ ಮೂಲಕ ಕಲಾಪ ಶುರುವಾಯಿತು. ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಅಧಿವೇಶನದ ಬಗ್ಗೆ ಶಾಸಕರ ನಿರಾಸಕ್ತಿತೋರಿದ್ದು, ನಿಗದಿತ ಅವಧಿಗೂ ಮುನ್ನವೇ ಅಧಿವೇಶನ ಮುಗಿಸಲು ಹಲವು ಶಾಸಕರ ಆಸಕ್ತಿ ತೋರಿದರು ಎನ್ನಲಾಗಿದೆ.