ವಿಕಲಚೇತನ ಅಪ್ರಾಪ್ತೆ ಮೇಲೆ ಅತ್ಯಾಚಾರ ಯತ್ನ

ವಿಜಯಪುರ, ಡಿ. 16:  14 ವರ್ಷದ ವಿಕಲಚೇತನೆಯ ಮೇಲೆ 52 ರ ವ್ಯಕ್ತಿಯೊಬ್ಬ ಅತ್ಯಾಚಾರಕ್ಕೆ ಯತ್ನಿಸಿ ಸಿಕ್ಕಿ ಬಿದ್ದಿದ್ದಾನೆ. ಇವನ ಮೇಲೆ ದೂರು ನೀಡಿದರೂ ಪೊಲೀಸರು ರಾಜಿ ಸಂಧಾನ ಮಾಡಿ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ.

ಪೊಲೀಸರು ಪ್ರಕರಣ ದಾಖಲಿಸಿಕೊಳ್ಳದಿದ್ದಾಗ ವಿಕಲಚೇತನರು ಪ್ರತಿಭಟಿಸಿ, ದೂರು ದಾಖಲಾಗುವಂತೆ ಮಾಡಿದ್ದಾರೆ.

ಮುದ್ದೇಬಿಹಾಳ ತಾಲೂಕು ನಡಹಳ್ಳಿ ಗ್ರಾಮದಲ್ಲಿ 14 ವರ್ಷದ ಬುದ್ಧಿಮಾಂದ್ಯತೆ ಬಾಲಕಿ ಮೇಲೆ ಸೋಮವಾರ ರುದ್ರಗೌಡ ಪಾಟೀಲ (52) ಎಂಬಾತ ಅತ್ಯಾಚಾರ ನಡೆಸಲು ಯತ್ನಿಸಿದ್ದಾನೆ. ಬಾಲಕಿ ಕಿರುಚಿಕೊಂಡಾಗ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದು, ತಾಳಿಕೋಟೆಯ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಆದರೆ ಪಿಎಸೈ ಗಂಗೂಬಾಯಿ ಬಿರಾದಾರ ಪ್ರಕರಣ ದಾಖಲಿಸಿಕೊಳ್ಳದೇ ರಾಜೀ ಸಂಧಾನ ಮಾಡಿ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದಾರೆ. ವಿಷಯ ವಿಕಲಚೇತನರ ಗಮನಕ್ಕೆ ಬಂದಾಗ ದೂರು ದಾಖಲಿಸದ ಎಸ್‌ಐ ಗಂಗೂಬಾಯಿ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಘಟನೆಯ ಕುರಿತು ವಿಕಲಚೇತನರು ವಿಕಲಚೇತನರ ಸಬಲೀಕರಣ ಇಲಾಖೆ ಜಿಲ್ಲಾ ಅಧಿಕಾರಿ ಉಪಾಧ್ಯೆ ಅವರ ಗಮನಕ್ಕೆ ತಂದಿದ್ದು, ಮಂಗಳವಾರ ಸಂಜೆ ಪೊಲೀಸ್ ಠಾಣೆಗೆ ಆಗಮಿಸಿ ಕೇಸು ದಾಖಲಿಸಿಕೊಳ್ಳುವಂತೆ ಒತ್ತಡ ಹೇರಿದ್ದಾರೆ. ಅಲ್ಲದೇ ಸ್ಯಳೀಯರಿಂದ ಪ್ರಕರಣದ ಮಾಹಿತಿ ಪಡೆದುಕೊಂಡಿದ್ದರು.

ಇಷ್ಟೆಲ್ಲಾ ಆದರೂ ಎಸೈ ಗಂಗೂಬಾಯಿ ವಿಕಲಚೇತನೆಯ ಮೇಲೆ ಅತ್ಯಾಚಾರ ಯತ್ನ ನಡೆದಿಲ್ಲ ಎಂದು ವಾದಿಸಿದ್ದಾರೆ. ಇದಲ್ಲದೇ ಪಾಲಕರ ಮೇಲೆ ಒತ್ತಡ ಹೇರಿ ಠಾಣೆಯಲ್ಲಿ ಬರೆಸಿಕೊಂಡಿದ್ದ ಪತ್ರವನ್ನು ಉಪಾಧ್ಯೆ ಅವರಿಗೆ ತೋರಿಸಿ ಪ್ರಕರಣ ಮುಚ್ಚಿ ಹಾಕುವ ಯತ್ನ ಮಾಡಿದ್ದರು. ಇಷ್ಟಾದರೂ ಪೊಲೀಸರು ದೂರು ದಾಖಲೊಸಿಕೊಳ್ಳದ ಕ್ರಮದ ವಿರುದ್ಧ ವಿಕಲಚೇತನರು ತಮ್ಮ ಸಂಘಟನೆ ಪದಾಧಿಕಾರಿಗಳು ಸೇರಿ ಪ್ರತಿಭಟಿಸುವ ಎಚ್ಚರಿಕೆ ನೀಡಿದ್ದಾರೆ. ಈ ಹಂತದಲ್ಲಿ ಪರಿಸ್ಥಿತಿ ಕೈ ಮೀರುವುದನ್ನು ಅರಿತು, ಎಚ್ಚೆತ್ತ ಇಲಾಖೆ ಅಧಿಕಾರಿಗಳು ದೂರು ದಾಖಲಿಸಲು ಮುಂದಾಗಿದ್ದಾರೆ.ವಿಕಲಚೇತನರ ಸಬಲೀಕರಣ ಅಧಿಕಾರಿ ಉಪಾಧ್ಯೆ, ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣೆ ಅಧಿಕಾರಿ ನಿರ್ಮಲಾ ಸುರಪೂರ ಅವರು ಸ್ಥಳದಲ್ಲೇ ಬಿಡಾರ ಹೂಡಿದ್ದಾರೆ.

ಸದ್ಯ ಪ್ರಕರಣ ದಾಖಲಾಗಿದ್ದು, ಸಂತ್ರಸ್ತ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾಗಿ ಉಪಾಧ್ಯೆ ತಿಳಿಸಿದ್ದಾರೆ.

Exit mobile version