ಮುಂಬೈ ಡಿ 15 : ಭಾರತ ತಂಡದ ನಾಯಕತ್ವದಿಂದ ಬಿಸಿಸಿ ವಿರಾಟ್ ಕೊಹ್ಲಿಯನ್ನು ದೂರವಿಟ್ಟ ಬೆನ್ನಲ್ಲೇ ಈ ಬಗ್ಗೆ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ. ಟೀಂ ಇಂಡಿಯಾದ ಏಕದಿನ ತಂಡದ ನಾಯಕರಾಗಿ ರೋಹಿತ್ ಶರ್ಮಾ ಅವರನ್ನು ಆಯ್ಕೆ ಮಾಡುತ್ತಿರುವ ಕುರಿತು ಆಯ್ಕೆ ಸಮಿತಿಯ ಸಭೆಗೂ ಒಂದುವರೆ ಗಂಟೆ ಮೊದಲು ನನಗೆ ಮಾಹಿತಿ ನೀಡಿದ್ದರು ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ತಿಳಿಸಿದ್ದಾರೆ.
ನಾಯಕತ್ವದ ವಿಚಾರವಾಗಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವೆ ಸಂಘರ್ಷ ನಡೆಯುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಇಂದು ತುರ್ತು ಸುದ್ದಿಗೋಷ್ಠಿ ನಡೆಸಿದ ವಿರಾಟ್ ಕೊಹ್ಲಿ ನನ್ನ ಮತ್ತು ರೋಹಿತ್ ನಡುವೆ ನಾಯಕತ್ವದ ವಿಚಾರದಲ್ಲಿ ಯಾವುದೇ ಸಂಘರ್ಷವಿಲ್ಲ. ನಮ್ಮ ನಡುವೆ ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಸಭೆ ನಡೆಯುವ ಒಂದೂವರೆ ಗಂಟೆ ಮೊದಲು ನನಗೆ ಏಕದಿನ ತಂಡದ ನಾಯಕತ್ವದ ಕುರಿತು ಮಾಹಿತಿ ನೀಡಿದರು. ಇದಕ್ಕೂ ಮೊದಲು ನನ್ನೊಂದಿಗೆ ಈ ಕುರಿತು ಚರ್ಚೆ ನಡೆಸಿಲ್ಲ. ನಾವು ಟೆಸ್ಟ್ ತಂಡದ ಆಯ್ಕೆ ಕುರಿತು ಆಯ್ಕೆ ಸಮಿತಿಯೊಂದಿಗೆ ಚರ್ಚೆ ನಡೆಸಿದ್ದೆ. ಆ ವೇಳೆ ಏಕದಿನ ತಂಡದ ನಾಯಕತ್ವದ ಕುರಿತು ಯಾವುದೇ ಚರ್ಚೆ ನಡೆದಿರಲಿಲ್ಲ ಎಂದು ತಿಳಿಸಿದ್ಧಾರೆ.
ನಾನು ಟಿ20 ತಂಡದ ನಾಯಕತ್ವ ತ್ಯಜಿಸುವ ನಿರ್ಧಾರ ತೆಗೆದುಕೊಂಡಾಗ ನಾನು ಏಕದಿನ ಮತ್ತು ಟೆಸ್ಟ್ ತಂಡದ ನಾಯಕನಾಗಿ ಮುಂದುವರೆಯುತ್ತೇನೆ ಎಂದು ತಿಳಿಸಿದ್ದೆ. ಬಿಸಿಸಿಐ ನನ್ನ ನಿರ್ಧಾರವನ್ನು ಸ್ವಾಗತಿಸಿತ್ತು. ನಾನು ನನ್ನ ಕಡೆಯಿಂದ ಸೂಕ್ತ ರೀತಿಯಲ್ಲಿ ಸಂವಹನ ಮಾಡಿದ್ದೆ ಆದರೆ ಬಿಸಿಸಿಐ ಅಧಿಕಾರಿಗಳು ಮತ್ತು ಆಯ್ಕೆ ಸಮಿತಿಗೆ ನಾನು ಏಕದಿನ ತಂಡದ ನಾಯಕನಾಗಿರುವುದು ಬೇಕಿಲ್ಲದಿದ್ದರೆ. ಓಕೆ ನಾನು ಇದನ್ನು ಒಪ್ಪಿಕೊಳ್ಳಲು ಸಿದ್ಧನಿದ್ದೇನೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ನಾನು ದಕ್ಷಿಣ ಆಫ್ರಿಕಾ ವಿರುದ್ಧದ 3 ಏಕದಿನ ಪಂದ್ಯಗಳ ಸರಣಿಗೆ ಲಭ್ಯವಿದ್ದೇನೆ. ನಾನು ಬ್ರೇಕ್ ಬೇಕೆಂದು ಕೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.