2 ಮಕ್ಕಳ ತಾಯಿಯಿಂದ ಯುವಕನ ಮೇಲೆ ಆಸಿಡ್ ದಾಳಿ

ಇಡುಕ್ಕಿ ನ 22 : ಮದುವೆಯಾಗಿ ಎರಡು ಮಕ್ಕಳಿರುವ ವಿಷಯವನ್ನು ಮುಚ್ಚಿಟ್ಟು ಬೇರೆ ಯುವಕನೊಂದಿಗೆ ಚಾಟಿಂಗ್ ನಡೆಸುತ್ತಿದ್ದ ‘ಪ್ರಿಯತಮೆ’ ಕೊನೆಗೆ ಆ ಯುವಕನಿಗೆ ಆಸಿಡ್ ಎರಚಿದ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯ ಅಡಿಮಾಲಿಯಲ್ಲಿ ನಡೆದಿದೆ.

35 ವರ್ಷದ ಶೀಬಾ ಎಂಬಾಕೆಗೆ ಎರಡು ವರ್ಷಗಳ ಹಿಂದೆ ಫೇಸ್ ಬುಕ್ ಮೂಲಕ ತಿರುವನಂತಪುರುಂನ ಪೂಜಪ್ಪುರದ ಅರುಣ್ ಎಂಬಾತನ ಪರಿಚಯವಾಗಿತ್ತು. ದಿನನಿತ್ಯ ಚಾಟಿಂಗ್ ನಡೆಸುತ್ತಾ ಇಬ್ಬರು ಪ್ರೀತಿಯ ಬಲೆಯಲ್ಲಿ ಬಿದ್ದಿದ್ದರು. ಆದರೆ, ಶೀಬಾಗೆ ಈಗಾಗಲೇ ಮದುವೆ ಆಗಿ ಇಬ್ಬರು ಮಕ್ಕಳಿರುವ ವಿಷಯ ಅರುಣ್’ಗೆ ಸ್ನೇಹಿತರ ಮೂಲಕ ತಡವಾಗಿ ಗೊತ್ತಾಗಿದೆ. ಬಳಿಕ ಅರುಣ್, ಶೀಬಾಳ ಜೊತೆಗಿನ ಪ್ರೀತಿಗೆ ಗುಡ್ ಬೈ ಹೇಳಿ, ಬೇರೆ ಮದುವೆಗೆ ಸಿದ್ಧತೆ ನಡೆಸಿದ್ದ. ಆದರೆ, ಶೀಬಾ ಮಾತ್ರ ಮದುವೆ ಆಗುವಂತೆ ದುಂಬಾಲು ಬಿದ್ದಿದ್ದಳು.

ನವೆಂಬರ್ 16ರಂದು ಹಣಕಾಸಿನ ವಿಚಾರವಾಗಿ ಮಾತನಾಡಬೇಕೆಂದು ಹೇಳಿ ಶೀಬಾ, ಅರುಣ್’ನನ್ನು ಇಡುಕ್ಕಿಯ ಅಡಿಮಾಲಿಗೆ ಒಬ್ಬನೇ ಬರಲು ಹೇಳಿದ್ದಳು. ಒಬ್ಬನೇ ಬರುವಂತೆ ಹೇಳಿದ ಕಾರಣ ಸಂಶಯಗೊಂಡ ಅರುಣ್ ತನ್ನ ಸ್ನೇಹಿತರ ಜೊತೆ ಬಂದಿದ್ದ. ಆದರೆ ಶೀಬಾಳ ಜೊತೆ ಮಾತನಾಡುವ ವೇಳೆ ಸ್ನೇಹಿತರು ದೂರ ನಿಂತಿದ್ದರು. ಮಾತು ಪ್ರಾರಂಭಿಸಿದ ಸ್ವಲ್ಪ ಹೊತ್ತಲ್ಲೇ, ರಬ್ಬರ್ ಹೆಪ್ಪುಗಟ್ಟಿಸಲು ಬಳಸುತ್ತಿದ್ದ ಆಸಿಡ್‌ನಿಂದ ಶೀಬಾ, ಅರುಣ್ ಮೇಲೆ ದಾಳಿ ಮಾಡಿದ್ದಾಳೆ.

ಇರುಂಪುಪಳಂ ಚರ್ಚ್ ಬಳಿ ಅಳವಡಿಸಲಾಗಿದ್ದ CCTVಯಲ್ಲಿ ಶೀಬಾ, ಅರುಣ್ ಮೇಲೆ ಆಸಿಡ್ ಎರಚುವ ದೃಶ್ಯ ಸೆರೆಯಾಗಿದೆ. ಆಸಿಡ್ ದಾಳಿಯಿಂದ ಗಂಭೀರ ಗಾಯಗೊಂಡ ಅರುಣ್ ನನ್ನು ತಕ್ಷಣ ಜೊತೆಯಲ್ಲೇ ಇದ್ದ ಸ್ನೇಹಿತರು ಅಡಿಮಾಲಿಯ ಪ್ರಾಥಮಿಕ ಚಿಕಿತ್ಸಾ ಕೇಂದ್ರಕ್ಕೆ ದಾಖಲಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ತಿರುವನಂತಪುರಂನ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿದೆ.. ಆದರೆ, ಅರಣ್ ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ. ಘಟನೆಯ ಬಗ್ಗೆ ಅಡಿಮಾಲಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version