ಕಿಡ್ನಿ,ಕಣ್ಣನ್ನು ಮಾರಿ ಸಾಲ ತೀರಿಸಲು ಮುಂದಾದ ರೈತ..!

ತುಮಕೂರು: ವಿಪರೀತ ಕೈಸಾಲ ಮಾಡಿಕೊಂಡಿರುವ ರೈತನೋರ್ವ ಅದನ್ನು ತೀರಿಸಲಾಗದೆ ಕಿಡ್ನಿ ಹಾಗೂ ತನ್ನ ಕಣ್ಣನ್ನೇ ಮಾರಲು ಮುಂದಾಗಿರುವುದಾಗಿ ತನ್ನ ಸಂಕಷ್ಟದ ಪರಿಸ್ಥಿತಿಯನ್ನು ತೋಡಿಕೊಂಡಿದ್ದಾನೆ.

ಹೌದು, ಶಿರಾ ತಾಲೂಕಿನ ಮಾಗೋಡು ಗ್ರಾಮದ ಚಂದ್ರಶೇಖರ್ ಎಂಬಾತ ಈ ರೀತಿಯ ಒಂದು ನಿರ್ಧಾರಕ್ಕೆ ಬಂದಿರುವುದಾಗಿ ಹೇಳುತ್ತಿದ್ದಾರೆ. 3 ಎಕರೆ ಜಮೀನು ಹೊಂದಿರುವ ಚಂದ್ರಶೇಖರ್​ ಮೂರು ಬೋರ್​ವೆಲ್​ಗಳನ್ನು ಕೊರೆಸಿದ್ದರು. ಅದರಲ್ಲಿ ಎರಡು ವಿಫಲವಾಗಿವೆ. ನೀರಿಲ್ಲದೆ ಅಡಿಕೆ ತೋಟ ಕೂಡ ಒಣಗಿದೆ. ಇನ್ನೊಂದೆಡೆ ಸಾಕಷ್ಟು ಕೈ ಸಾಲವನ್ನು ಮಾಡಿಕೊಂಡಿದ್ದು, ಅದನ್ನು ತೀರಿಸಲಾಗಿದೆ ಒದ್ದಾಡುತ್ತಿದ್ದಾನೆ.

ಈ ಹಿಂದೆ ಸಾಲ ತೀರಿಸಲಾಗದೆ ಒಮ್ಮೆ ವಿಷವನ್ನು ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದೆ ಎಂದು ಚಂದ್ರಶೇಖರ್ ಹೇಳಿಕೊಳ್ಳುತ್ತಾರೆ. ಬ್ಯಾಂಕಿನಲ್ಲಿ ಇರುವ ಸಾಲವನ್ನು ತೀರಿಸಿದ್ದರೂ ಅದರಿಂದ ಮುಕ್ತಗೊಳಿಸುತ್ತಿಲ್ಲ. ಹೀಗಾಗಿ ಬೇರೆ ಬ್ಯಾಂಕ್​ನಲ್ಲಿ ಸಾಲ ಪಡೆದು ಕೈಸಾಲ ತೀರಿಸಲು ಸಾಧ್ಯವಾಗುತ್ತಿಲ್ಲ ಎಂದು ತಮ್ಮ ಅಳನ್ನು ತೋಡಿಕೊಂಡಿದ್ದಾನೆ. ಅಲ್ಲದೆ, ನಿತ್ಯ ಖಾಸಗಿ ಫೈನಾನ್ಶಿಯರ್​ಗಳು ಬಂದು ಸಾಲದ ಹಣ ವಾಪಸಾತಿಗೆ ಚಿತ್ರ ಹಿಂಸೆ ನೀಡುತ್ತಿದ್ದಾರೆ ಎಂದು ಚಂದ್ರಶೇಖರ್​ ಆರೋಪಿಸಿದ್ದಾರೆ.

Exit mobile version