ಸ್ನೇಹಿತ್ರೆ ನಾನಿವತ್ತು ಒಂದು ವಿಚಿತ್ರ ಸ್ಟೋರಿ ಹೇಳ್ತೀನಿ. ಈ ಸ್ಟೋರಿ ಕೇಳಿದಾಗ ನಮ್ಮ ಸರ್ಕಾರಗಳು ಇಂಥಾ ನೀಚ ಕೆಲಸವನ್ನೂ ಮಾಡ್ತವಾ? ಜನಸೇವಕರ ಮುಖವಾಡ ಹಾಕಿಕೊಂಡ ರಾಜಕಾರಣಿಗಳು ಇಂಥಾ ದುಷ್ಟ ಕೆಲಸವನ್ನೂ ಮಾಡಬಲ್ಲರಾ? ಅಧಿಕಾರಿಗಳಂತು ಇಷ್ಟೊಂದು ಕೀಳುಮಟ್ಟಕ್ಕೆ ಇಳೀತಾರಾ ಅಂತ ಅನ್ನಿಸುತ್ತೆ. ಅಂಥಾ ಕೆಟ್ಟ ಕೆಲಸ ಮಾಡಿ ನಮ್ಮ ನಾಡಿಗೆ ಅದ್ರಲ್ಲೂ ಮುಖ್ಯವಾಗಿ ಉತ್ತರ ಕರ್ನಾಟಕ ಭಾಗದ ಜನರಿಗೆ ದ್ರೋಹ ಎಸಗಿದವರ ಬೇಟೆ ಮಾಡಿತು ಕವರ್ಸ್ಟೋರಿ ತಂಡ
ನೀರು ಕಳ್ಳರಿದ್ದಾರೆ ಎಚ್ಚರ !: ಉತ್ತರ ಕರ್ನಾಟಕದ ಮಂದಿಗೆ ಬರ ಒಂದು ಶಾಪ. ಆದ್ರೆ ಆ ಶಾಪ ವಿಮೋಚನೆಗಾಗಿ ನಮ್ಮ ಸರ್ಕಾರಗಳು ಹತ್ತಾರು ನೀರಾವರಿ ಯೋಜನೆಗಳನ್ನು ಹಮ್ಮಿಕೊಂಡಿವೆ. ಅದಕ್ಕಾಗಿ ಸಾವಿರಾರು ಕೋಟಿ ರೂಪಾಯಿ ವ್ಯಯ ಮಾಡಿದೆ. ನೀರಾವರಿ ಯೋಜನೆಗಳಿಗೆ ಹಣ ಬಿಡುಗಡೆ ಮಾಡಿದ ಲೆಕ್ಕದಲ್ಲಿ ಉತ್ತರ ಕರ್ನಾಟಕ ಭಾಗ ಮಲೆನಾಡಾಗಿ ಪರಿವರ್ತನೆಯಾಗಬೇಕಾಗಿತ್ತು. ಆದ್ರೆ ಯಾಕೆ ಇಂದಿಗೂ ಉತ್ತರ ಕರ್ನಾಟಕ ಭಾಗ ಬರದಿಂದ ತತ್ತರಿಸುತ್ತಿದೆ? ಇಂದಿಗೂ ಜನ ಒಣ ಬೇಸಾಯವನ್ನೇ ಯಾಕೆ ನಂಬಿದ್ದಾರೆ. ಯಾಕಂದ್ರೆ ನೀರಾವರಿ ಯೋಜನೆಗಳ ಅನುದಾನವೆಲ್ಲ ರಾಜಕಾರಣಿಗಳ ಹಾಗೂ ಭ್ರಷ್ಟ ಅಧಿಕಾರಿಗಳು ಟಿಜೋರಿ ಸೇರಿದೆ. ಇದಕ್ಕೆ ಒಂದು ಒಳ್ಳೆ ಉದಾಹರಣೆ ಅಂದ್ರೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನಲ್ಲಿರೋ ನೀರಾವರಿ ಯೋಜನೆಗಳು. ಅದ್ರಲ್ಲೂ ಮರೋಳ ಹನಿ ಹಾಗೂ ಹರಿ ನೀರಾವರಿ ಯೋಜನೆಗಳಲ್ಲಿ ಮಾಡಿದ ಹಗರಣ ನೋಡಿದ್ರೆ ಛೀ ಥೂ ಅನ್ನಬೇಕು.
ಏಷ್ಯಾದಲ್ಲೇ ಅತೀ ದೊಡ್ಡ ಜಲಹಗರಣ: ಮರೋಳ ಹನಿ ಹಾಗೂ ಹರಿ ನೀರಾವರಿ ಯೋಜನೆಗೆ ಸರ್ಕಾರ ಸಾವಿರ ಕೋಟಿ ರೂಪಾಯಿಯನ್ನ ಅನುದಾನವಾಗಿ ನೀಡಿತ್ತು. ಆದ್ರೆ ಈ ಯೋಜನೆಯನ್ನು ಸಂಪೂರ್ಣ ಕಳಪೆ ಮಾಡಿ ಜನರಿಗೆ ಒಂದು ಹನಿ ನೀರು ಸಿಗದ ಹಾಗೆ ಮಾಡಿ ಅಲ್ಲಿನ ಜನರಿಗೆ ಮಾತ್ರವಲ್ಲ ಸರ್ಕಾರಕ್ಕೂ ಭಾರೀ ವಂಚನೆ ಮಾಡಿದೆ. ಮರೋಳ ಹರಿ ನೀರಾವರಿ ಯೋಜನೆಯಂತು ಅರ್ಧಕ್ಕೆ ನಿಲ್ಲಿಸಿ ಭರ್ಜರಿ ಹಣ ಎತ್ತಿದ್ದಾರೆ. ಆಗಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಕಾಮಗಾರಿಯೇ ಪೂರ್ಣಗೊಳ್ಳದೆ ಪ್ರಚಾರಕ್ಕಾಗಿ ಉದ್ಘಾಟನೆ ಮಾಡಿದ್ರು. ೫೨ ಕಿ.ಮೀ ಕಾಲುವೆ ಮಾಡಬೇಕಾದ ಯೋಜನೆಯಲ್ಲಿ ಬರೀ ೪೪ ಕಿ.ಮೀ ಮಾಡಿ ಸುಮಾರು ೪೦ ಕೋಟಿಯನ್ನಂತು ಅನಾಮತ್ತಾಗಿ ಎತ್ತಿದ್ರು.
ರೈತರಿಗೆ ಇನ್ನೂ ಸಿಕ್ಕಿಲ್ಲ ಪರಿಹಾರ: ನೀರಾವರಿ ಕಾಲುವೆ ರಚನೆಗೆ ನೀರಾವರಿ ಇಲಾಖೆ ರೈತರ ಭೂಮಿಯನ್ನು ಕಾನೂನು ಪ್ರಕಾರ ವಶಪಡಿಸಿಕೊಳ್ಳಲೇ ಇಲ್ಲ. ಗುತ್ತಿಗೆದಾರರು ದಬ್ಬಾಳಿಕೆ ಮಾಡಿ ಕಂಡಕಂಡಲ್ಲಿ ಕಾಲುವೆ ರಚಿಸಿದ್ರು. ಅದಕ್ಕೆ ಪರಿಹಾರವೂ ಕೊಡದೆ ಭಾರೀ ಮೋಸ ಮಾಡಿದ್ರು. ಈಗ ರೈತರು ಹೋರಾಟಕ್ಕಿಳಿದಾಗ ಈಗ ಪರಿಹಾರ ಕೊಡಲು ಮುಂದಾಗಿದೆ ಇಲಾಖೆ, ಅದೂ ಲಂಚ ಕೊಟ್ರೆ ಮಾತ್ರ ಅಂತೆ.
ಕಾಲುವೆಗಳೆಲ್ಲಾ ಮಾಯ: ಈ ಯೋಜನೆಯಲ್ಲಿ ರೈತರಿಗೆ ಇನ್ನೂ ಹನಿ ನೀರೂ ಸಿಗಲಿಲ್ಲ. ಆದ್ರೆ ಕಾಲುವೆಗಳೆಲ್ಲಾ ಮಂಗಮಾಯ ಆಗಿವೆ. ಝೀರೋ ಪಾಯಿಂಟ್ನಲ್ಲೇ ಮುಖ್ಯ ಕಾಲುವೆಗಳು ಕುಸಿದು ಕಾಲುವೆ ಮುಚ್ಚಿಹೋಗಿವೆ. ಸೇತುವೆಗಳನ್ನ ದುರ್ಬೀನ್ ಹಾಕಿ ಹುಡುಕಬೇಕಾಗಿದೆ. ಕಾಡಾ ರಸ್ತೆಗಳು, ವಿತರಣಾ ಕಾಲುವೆಗಳು, ಹೊಲಕಾಲುವೆ ಇವೆಲ್ಲಾ ಕಾಣಸಿಗುವುದೇ ಇಲ್ಲ. ಅಷ್ಟೊಂದು ಕಳಪೆ ಮಟ್ಟದಲ್ಲಿ ಯೋಜನೆಯನ್ನು ಮಾಡಲಾಗಿದೆ. ಇನ್ನು ಈ ನೀರಾವರಿ ಯೋಜನೆ ರೂಪಿಸಿದ ಇಂಜಿನಿಯರ್ಗೆ ನೊಬೆಲ್ ಪ್ರಶಸ್ತಿ ಕೊಡಬೇಕು. ಯಾಕಂದ್ರೆ ನಿಯಮದ ಪ್ರಕಾರ ಕಾಲುವೆಗಳು ಹೊಲಗಳಿಗೆ ನೀರುಣಿಸಬೇಕು ಆದ್ರೆ ಇಲ್ಲಿ ಉಲ್ಟಾ ಆಗಿದೆ, ಹೊಲಗಳ ನೀರೇ ಕಾಲುವೆಗೆ ಹರಿದು ಬರ್ತಿವೆ. ಅಲ್ಲದೆ ಜನ ಪಂಪ್ಸೆಟ್ ಹಾಕಿ ಕಾಲುವೆ ನೀರು ಪಡೀಬೇಕಾದ ದುಸ್ಥಿತಿ ಬಂದಿದೆ.
ರಾಜಕಾರಣಿಗಳೆಲ್ಲಾ ಭಾಗಿ: ಈ ಯೋಜನೆಯಲ್ಲಿ ಪ್ರತಿ ಪಕ್ಷದ ರಾಜಕಾರಣಿಗಳು ಭಾಗಿ ಭಾರೀ ಹಗರಣ ಮಾಡಿದ್ದಾರೆ. ಅಲ್ಲದೆ ಈ ಯೋಜನೆಯ ಗುತ್ತಿಗೆಯನ್ನು ರಾಜಕಾರಣಿಯ ಸಂಬಂಧಿಕರೇ ಮಾಡಿರುವುದರಿಂದ ಯಾರೂ ಕೂಡ ತನಿಖೆಗೆ ಮುಂದಾಗುತ್ತಿಲ್ಲ. ಇದರ ದನಿ ಎತ್ತಿದ್ರೆ ಅವರ ದನಿ ಅಡಗಿಸುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ. ಈ ಬಗ್ಗೆ ಹಾಲಿ ಶಾಸಕರಾದ ದೊಡ್ಡನಗೌಡ ಪಾಟೀಲರ ಬಳಿ ಕೇಳಿದ್ರೆ ಅವರು ಹರಿ ನೀರಾವರಿ ಯೋಜನೆ ಸಂಪೂರ್ಣ ಸಫಲ ಆಗಿದೆ ಹೇಳಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಇನ್ನು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರು ಇದರಲ್ಲಿ ಭಾರೀ ಹಗರಣ ಆಗಿದೆ ಅಂತ ಆರೋಪಿಸುತ್ತಾರೆ. ಒಟ್ಟಾರೆ ಮರೋಳ ನೀರಾವರಿ ಯೋಜನೆಯಲ್ಲಿ ಭಾರೀ ಹಗರಣ ಆಗಿರೋದು ಸ್ಪಷ್ಟ. ಇದನ್ನು ಸಿಬಿಐ ತನಿಖೆಗೆ ಕೊಟ್ರೆ ಎಲ್ಲಾ ಸತ್ಯಾಂಶಗಳೂ ಬಯಲಿಗೆ ಬರುತ್ತೆ.