ನಿರ್ದೇಶಕರಾದ ಪದ್ಮಶ್ರೀ ದೊಡ್ಡ ರಂಗೇಗೌಡ!

ದೊಡ್ಡರಂಗೇಗೌಡರು ಸಿನಿಮಾಗಳಿಗೆ ಬರೆದ ಹಾಡುಗಳೆಲ್ಲ ಇಂದಿಗೂ ಜನಪ್ರಿಯ. `ನಮ್ಮೂರ ಮಂದಾರ ಹೂವೇ..’ ಎನ್ನುವ ಒಂದು ಹಾಡು ಸಾಕು ಅವರನ್ನು ನೆನಪಿಸಲು. ನೂರಾರು ಚಿತ್ರಗೀತೆಗಳು, ಹತ್ತಾರು ಚಿತ್ರಗಳಿಗೆ ಸಂಭಾಷಣೆ, ನೂರರಷ್ಟು ಧಾರಾವಾಹಿಗಳಿಗೆ ಕತೆ ಬರೆದ ದೊಡ್ಡರಂಗೇಗೌಡರು ಹದಿನರಾರಷ್ಟು ಚಿತ್ರಗಳಲ್ಲಿ ಅಭಿನಯವನ್ನೂ ಮಾಡಿದ್ದಾರೆ. ಆದರೆ ಇದೀಗ ತಮ್ಮ ಎಪ್ಪತ್ತೈದನೆಯ ವಯಸ್ಸಿನಲ್ಲಿ ಪ್ರಪ್ರಥಮ ಸಿನಿಮಾ ನಿರ್ದೇಶಿಸಿದ್ದಾರೆ! ಅದರ ಹೆಸರು `ಹಾರುವ ಹಂಸಗಳು.’

ಮಕ್ಕಳ ಮೊಬೈಲ್ ಹುಚ್ಚಿನ ಬಗ್ಗೆ ಜಾಗೃತಿ

ವಿಜಯ ಟೈಮ್ಸ್ ಜತೆ ಮಾತನಾಡಿದ ದೊಡ್ಡ ರಂಗೇಗೌಡರು, ಕಳೆದ ಅಕ್ಟೋಬರ್ ನಲ್ಲೇ ಚಿತ್ರೀಕರಣ ಶುರು ಮಾಡಿದ್ದೆ. ಆದರೆ ಲಾಕ್ಡೌನ್ ಆದ ಕಾರಣ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮಾಡಲು ಸಾಧ್ಯವಾಗಲಿಲ್ಲ. ಈಗ ಅವೆಲ್ಲವೂ ಮುಗಿದು ಸೆನ್ಸಾರ್ ಕೂಡ ಆಗಿದೆ” ಎಂದು ಸಂಭ್ರಮ ವ್ಯಕ್ತಪಿಡಿಸಿದರು. ಸುಮಾರು ಒಂದೂವರೆ ಗಂಟೆಯ ಸಿನಿಮಾದಲ್ಲಿ  ಹದಿಮೂರು ವರ್ಷದೊಳಗಿನ ಎಂಟು, ಒಂಬತ್ತು ಮಂದಿ ಮಕ್ಕಳಿದ್ದಾರೆ. ದೀಪಾಂಕರ್ ಫಿಲ್ಮ್ಸ್ ಬ್ಯಾನರಲ್ಲಿ ವಾಸು ಪ್ರಸಾದ್ ಚಿತ್ರವನ್ನು ನಿರ್ಮಿಸಿದ್ದಾರೆ. ಅವರು ಕೂಡ ಒಬ್ಬ ಬರಹಗಾರರಾಗಿರುವ ಕಾರಣ, ಒಂದೊಳ್ಳೆಯ ಸಬ್ಜೆಕ್ಟನ್ನೇ ಚಿತ್ರ ಮಾಡಲು ಸಾಧ್ಯವಾಗಿದೆ. ಇದರಲ್ಲಿ ಮುಖ್ಯವಾಗಿ ಮಕ್ಕಳ ಕೈಯ್ಯಲ್ಲಿ ಮೊಬೈಲ್ ಹೇಗೆ ದುರ್ಬಳಕೆಯಾಗ್ತಿದೆ ಎನ್ನುವುದನ್ನು ಹೇಳಿದ್ದೇವೆ. ಬೆಳಿಗ್ಗೆ ಎಂಟರಿಂದ ಹನ್ನೊಂದರ ತನಕ ಮಕ್ಕಳು ಮೊಬೈಲು ಕೈಯ್ಯಲ್ಲಿ ಹಿಡಿದು ಅದೇ ಗೀಳಲ್ಲಿ ಇರುತ್ತಾರೆ. ಪಬ್ಜಿ ಸೇರಿದಂತೆ ಮೊಬೈಲ್ ಆಟಗಳಲ್ಲಿ ಮುಳುಗಿದ ಮಕ್ಕಳಿಗೆ ಊಟ ತಿಂಡಿಯ ಪರಿವೇ ಇಲ್ಲ. ಅಮ್ಮ, ಅಪ್ಪ ಯಾರೂ ಬೇಕಿಲ್ಲ. ಅದರಲ್ಲಿ ಕೂಡ ಆಟಗಳು ಬರೀ ಕೊಲ್ಲು ಕೊಲ್ಲು ಎನ್ನುವುದನ್ನಷ್ಟೇ ಹೇಳುತ್ತವೆ. ಕಟ್ಟು ಎನ್ನುವುದಿಲ್ಲ ಕೆಡವುದನ್ನೇ ತೋರಿಸಲಾಗುತ್ತದೆ ಎಂದು ಕವಿಗಳು ಸಮಕಾಲೀನ ಸಮಸ್ಯೆಯ ಬಗ್ಗೆ ತಮ್ಮ ನಿಜವಾದ ಆತಂಕ ವ್ಯಕ್ತಪಡಿಸಿದರು.

ಮೊಬೈಲ್ ಬಳಕೆಯನ್ನು ನಾನು ಒಪ್ಪುತ್ತೇನೆ. ಆದರೆ ಅದರ ದುರ್ಳಕೆ ಸರಿಯಲ್ಲ. ಅದರಿಂದಾಗಿ ಮಕ್ಕಳ ಸಹಜ ಬೆಳವಣಿಗೆಯೇ ತಪ್ಪಿ ಹೋಗಿದೆ. ಪೋಷಕರ ಜತೆಗಿನ ಸಂಬಂಧವೇ ನಾಶವಾಗಿದೆ. ನಾಲ್ಕು ಜನ ಒಂದೇ ಮನೆಯಲ್ಲಿದ್ದರೂ ವ್ಯಕ್ತಿ ವ್ಯಕ್ತಿಗಳ ಮಧ್ಯೆ ಇರುವ ಸಂಬಂಧಕ್ಕಿಂತ ಮೊಬೈಲ್ ಜತಗಿನ ಸಂಬಂಧವೇ ಹೆಚ್ಚಾಗಿದೆ. ಮಹಡಿಯಿಂದ  ಗ್ರೌಂಡ್ ಫ್ಲೋರ್ ಗೆ ಪೋನ್ ಮಾಡಿ ಮಾರಮಾಡುವ ಸಂದರ್ಭ ಬಂದಿದೆ ಎಂದು ಪರಿಸ್ಥಿತಿಯ ವ್ಯಂಗ್ಯವನ್ನು ತೆರೆದಿಟ್ಟರು ಗೌಡರು.

ಅಂದಹಾಗೆ ಸುಮಾರು ಹದಿನಾಲ್ಕು ದಿನಗಳಲ್ಲಿಯೇ ಚಿತ್ರೀಕರಣ ಪೂರ್ತಿಯಾಗಿದೆ. ನಾನು ನಿರ್ದೇಶಕನಾದರೂ ಚಿತ್ರವನ್ನು ನಾನು ಮಾಡಿದ್ದೇನೆ ಎನ್ನುವುದಕ್ಕಿಂತ ನನ್ನ ಮೇಲೆ ಸ್ನೇಹ ಪ್ರೀತಿ,ವಿಶ್ವಾಸ  ಇರಿಸಿರುವವರ ಬಳಗ ಸೇರಿ ಈ ಚಿತ್ರ ಮಾಡಿದೆ. ಕಳೆದ 55 ವರ್ಷಳಿಂದ ಚಿತ್ರರಂಗದಲ್ಲಿ ಇರುವುದರಿಂದ ನನ್ನ ಸ್ನೇಹ ಬಳಗದ ಉತ್ತಮ ತಂತ್ರಜ್ಞರು ನನ್ನ ಆದೇಶದ ಮೇರೆಗೆ ಅನಿಸಿಕೆಗಳನ್ನು ಅವರದೇ ಆಲೋಚನೆ ಎನ್ನುವ ಹಾಗೆ ಅರ್ಥಮಾಡಿಕೊಂಡು ಕಾರ್ಯರೂಪಕ್ಕೆ ತಂದಿದ್ದಾರೆ. ಕೊರೊನ ಕಾರಣ ಸುಮಾರು 45 ದಿನ ಸುಮ್ಮನಿರಬೇಕಾಯಿತು.  ಆದರೆ ಈಗ ಎಲ್ಲವೂ ಸಿದ್ಧವಾಗಿದೆ. ಎರಡು ದಿನ ಹಿಂದೆ ಟ್ರೇಲರ್ ಬಿಡುಗಡೆ ಮಾಡಿದ್ದೇವೆ. ಚಿತ್ರದಲ್ಲಿ ನಿರ್ಮಾಪಕರ ಇಬ್ಬರು ಮಕ್ಕಳು ಕೂಡ ನಟಿಸಿದ್ದಾರೆ. ಅದರಲ್ಲಿಯೂ  ಪ್ರಧಾನ ಪಾತ್ರದಲ್ಲಿರುವ ಓಜಸ್, ಬೆರಳು ತೋರಿಸಿದರೆ ಹಸ್ತ ನುಂಗಬಲ್ಲಷ್ಟು ಚೂಟಿ ಹುಡುಗ.  ಒಂದು ಬಾರಿ ಹೇಳಿದರೆ ಚೆನ್ನಾಗಿ ಗ್ರಹಿಸುತ್ತಿದ್ದ. ಎಲ್ಲ ಮಕ್ಕಳು ಮುದ್ದಾಗಿ ಮಾಡಿದ್ದಾರೆ ಎನ್ನುವುದು ನಿರ್ದೇಶಕರಾಗಿ ದೊಡ್ಡರಂಗೇ ಗೌಡರ ನಿಷ್ಕಲ್ಮಶ ಮನದ ಅನಿಸಿಕೆ.

ಡುಂಡಿರಾಜ್ ಗೀತೆಯೂ ಚಿತ್ರದಲ್ಲಿದೆ!

ಚಿತ್ರದಲ್ಲಿ ಹಳ್ಳಿ ಮಕ್ಕಳನ್ನು ಪಟ್ಟಣಕ್ಕೆ ಕರೆದೊಯ್ಯುವ ಮತ್ತು ಪಟ್ಟಣದ ಮಕ್ಕಳನ್ನು ಹಳ್ಳಿಗೆ ಕರೆದೊಯ್ಯುವಂಥ ಸಂದರ್ಭ ಇರುವುದಾಗಿ ತಿಳಿದು ಬಂದಿದೆ. ಮುಖ್ಯವಾಗಿ
ಈ ಎರಡು ಸಂಸ್ಕೃತಿಗಳ ನಡುವಿನ ಸಂವಹನ ಹೇಗೆ ನಡೆಯುತ್ತದೆ ಎನ್ನುವುದನ್ನು ಆಕರ್ಷಕವಾಗಿ ತೋರಿಸಲಾಗಿದೆಯಂತೆ. ಬೆಟ್ಟ,ಗುಡಿ, ಶಾಲೆ ಇರುವ ಹಳ್ಳಿಯಲ್ಲಿ ಚಿತ್ರೀಕರಣ ನಡೆಸಲಾಗಿದ್ದು, ಛಾಯಾಗ್ರಾಹಕ ಪಿವಿಆರ್ ಸ್ವಾಮಿಯವರು  ರೆಡ್ ಎಪಿಕ್ ನಲ್ಲಿ ತುಂಬ ಆಕರ್ಷಕವಾಗಿ ಚಿತ್ರೀಕರಿಸಿದ್ದಾರೆ ಎಂದು ಗೌಡರು ಪ್ರಶಂಸೆ ವ್ಯಕ್ತಪಡಿಸಿದರು. ಚಿತ್ರವನ್ನು  ಪುಟ್ಟಣ್ಣನ ಜಾಡಿನಲ್ಲಿ ಕಲಾತ್ಮಕ ರೀತಿಯಲ್ಲಿ ಮಾಡಿದ್ದೇನೆ ಎಂದ ಗೌಡರ ಈ ಚಿತ್ರದಲ್ಲಿ ಅವರ ಜತೆಗೆ ಖ್ಯಾತ ಕವಿ ಡುಂಡಿರಾಜ್ ಅವರ ಗೀತೆಯೂ ಇರುವುದು ವಿಶೇಷ. ಚಿತ್ರದಲ್ಲಿ ಮೂರು ಹಾಡುಗಳಿವೆ. ಉಳಿದ ಎರಡನ್ನು ದೊಡ್ಡರಂಗೇಗೌಡರೇ ರಚಿಸಿದ್ದಾರೆ. ಪ್ರಶಸ್ತಿ ವಿಜೇತ ಗಾಯಕ ರವೀಂದ್ರ ಸೋರಗಾವಿ ಮತ್ತು  ಶ್ವೇತಾ ಪ್ರಭು ಹಾಡಿದ್ದಾರೆ. ಸುರೇಶ್ ಮತ್ತು ಉಪಾಸನಾ ಮೋಹನ್ ಸಂಗೀತ ನಿರ್ದೇಶಕರು. ಸೆನ್ಸಾರ್ ಮಂಡಳಿಯಿಂದ ಮೆಚ್ಚುಗೆ ಪಡೆದಿರುವ ಪದ್ಮಶ್ರೀ ದೊಡ್ಡರಂಗೇಗೌಡರ ಹಾರುವ ಹಂಸಗಳು ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಮೂಡಿದೆ.

Exit mobile version