ಮುನಿರತ್ನ ಪರ ನಟ ದರ್ಶನ್ ಪ್ರಚಾರ

ಬೆಂಗಳೂರು, ಅ.28: ಕಾಂಗ್ರೆಸ್‌ ಪಕ್ಷದಲ್ಲಿದ್ದ ಮುನಿರತ್ನ ಈಗ ಬಿಜೆಪಿ ಸೇರ್ಪಡೆಗೊಂಡು ಇದೇ ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿದ್ಧಾರೆ. ಆದ್ದರಿಂದ ಮುನಿರತ್ನ ಅವರಿಗೆ ಇದು ಪ್ರತಿಷ್ಠೆಯ ವಿಚಾರವಾಗಿದೆ. ಆದ್ದರಿಂದ ಆರ್‌ ಆರ್‌ ನಗರ ಕ್ಷೇತ್ರದ ಗೆಲುವಿಗಾಗಿ ಹರಸಾಹಸ ನಡೆಸುತ್ತಿರುವ ಹಿನ್ನಲೆಯಲ್ಲಿ ಅವರ ಪರ ಪ್ರಚಾರಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪನವರು ಮುಂದಾಗಿದ್ದಾರೆ. ಅವರ ಜತೆಗೆ ಸಿನಿಮಾ ನಟ ಹಾಗೂ ನಿರ್ಮಾಪಕ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಕೂಡ ಮುಂದಾಗಿದ್ದಾರೆ.

ಅದಲ್ಲದೇ, ಇತ್ತೀಚೆಗಷ್ಟೇ ಬಿಜೆಪಿ ಸೇರಿರುವ ನಟಿ ಖುಷ್ಭೂ ಕೂಡ ಅವರ ಪರ ಇಂದು ಪ್ರಚಾರ ನಡೆಸಲು ಮುಂದಾಗಿದ್ದಾರೆ. ಮುನಿರತ್ನ ಹಾಗೂ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಉತ್ತಮ ಸ್ನೇಹವನ್ನು ಹೊಂದಿದ್ದು, ಈ ಹಿನ್ನಲೆ ದರ್ಶನ್​ ಆರ್.​ಆರ್.​ನಗರ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಮುಂದಾಗಿದ್ದಾರೆ. ದರ್ಶನ್​ ಪ್ರಚಾರದಿಂದ ಕ್ಷೇತ್ರ ಮತ್ತಷ್ಟು ರಂಗೇರಲಿದ್ದು, ಇದು ತಮಗೆ ವರದಾನವಾಗಲಿದೆ ಎಂಬ ಲೆಕ್ಕಾಚಾರ ಮುನಿರತ್ನ ನಡೆಸಿದ್ದಾರೆ ಎನ್ನಲಾಗಿದೆ. 

ನಾಳೆ ದರ್ಶನ್​ ಆರ್​. ಆರ್ ​ನಗರದಲ್ಲಿ ನಗರಗಳಲ್ಲಿ ರೋಡ್​ ಶೋ ನಡೆಸುವ ಮೂಲಕ ಮುನಿರತ್ನ ಪರ ಪ್ರಚಾರ ನಡೆಸಲಿದ್ದಾರೆ. ಇದಕ್ಕೂ ಮುನ್ನ ನಟಿ ಖುಷ್ಬೂ ಲಗ್ಗೆರೆ ಸೇರಿದಂತೆ ಕೆಲ ಭಾಗದಲ್ಲಿ ಮತಯಾಚನೆ ಮಾಡಲಿದ್ದಾರೆ.  

ಈ ಹಿಂದೆ ಮಂಡ್ಯದಲ್ಲಿ ಸುಮಲತಾ ಪರ ಪ್ರಚಾರ ನಡೆಸಿದ್ದ ನಟ ದರ್ಶನ್​ ಅವರ ಗೆಲುವಿಗೆ ಸಾಕಷ್ಟ ಪಾತ್ರವಹಿಸಿದ್ದರು. ಈ ಹಿಂದೆ ಚುನಾವಣಾ ಅಭ್ಯರ್ಥಿಗಳ ಮತ ಪ್ರಚಾರದ ಕುರಿತು ಮಾತನಾಡಿದ್ದ ನಟ ದರ್ಶನ್​ ನನಗೆ ಪಕ್ಷಕ್ಕಿಂತ ವ್ಯಕ್ತಿಮುಖ್ಯ. ಈ ಹಿನ್ನಲೆ ಸ್ನೇಹಿತರು ಆಮಂತ್ರಣದ ಹಿನ್ನಲೆ ಅವರ ಪರ ಪ್ರಚಾರ ನಡೆಸುತ್ತೇನೆ ಎಂದಿದ್ದರು.

ಇನ್ನು ದರ್ಶನ್​ ಮುನಿರತ್ನ ಜೊತೆ ಹೆಚ್ಚು ಆತ್ಮೀಯ ಸಂಬಂಧ ಹೊಂದಿದ್ದಾರೆ. ಮುನಿರತ್ನ ನಿರ್ಮಾಣ ಮಾಡಿದ್ದ ಅದ್ಧೂರಿ ಬಜೆಟ್​ನ ಕುರುಕ್ಷೇತ್ರದಲ್ಲಿ ನಟ ದರ್ಶನ್​ ಮಿಂಚಿದ್ದರು. ಬಿಗ್​ ಬಜೆಟ್​ ಸಿನಿಮಾವಾದ ಇದರಲ್ಲಿ ಜೆಡಿಎಸ್​ ಯುವ ನಾಯಕ ನಿಖಿಲ್​ ಕುಮಾರಸ್ವಾಮಿ ಕೂಡ ಅಭಿಮಾನ್ಯು ಪಾತ್ರನಿರ್ವಹಿಸಿದ್ದರು. ಚುನಾವಣಾ ಕಣದಲ್ಲಿ ಸದ್ಯ ಎದುರಾಳಿಗಳಾಗಿರುವ ನಿಖಿಲ್​, ಮುನಿರತ್ನ ಜೊತೆಗಿನ ಸಂಬಂಧ ಚಿತ್ರ ಮುಗಿಯುತ್ತಿದ್ದಂತಲೇ ಮುಕ್ತಾಯವಾಗಿದೆ. ಈಗ ಅವರು ನಮ್ಮ ವಿರೋಧಿ ಅಭ್ಯರ್ಥಿ ಅವರ ವಿರುದ್ಧ ನಾನು ಪ್ರಚಾರ ಮಾಡುತ್ತೇನೆ ಎಂದಿದ್ದಾರೆ.

Exit mobile version