ಕೊರೊನಾ ಎಫೆಕ್ಟ್‌ ನಡುವೆ ನಗರ ಪಾಲಿಕೆ ಅಧಿಕಾರಿಗಳ ದರ್ಪ |Video|

100 ರೂ. ನೀಡದ್ದಕ್ಕೆ ಮೊಟ್ಟೆ ಮಾರುತ್ತಿದ್ದ ಹುಡುಗನ ಮೇಲೆ ಪಾಲಿಕೆ ಸಿಬ್ಬಂದಿಗಳ ದರ್ಪ

ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎಂಬಂತೆ ನೂರು ರೂ. ಲಂಚ ಕೊಡಲಿಲ್ಲ ಎಂದು ಮೊಟ್ಟೆ ಮಾರುತ್ತಿದ್ದ ಹುಡುಗನೊಬ್ಬನ ತಳ್ಳು ಗಾಡಿಯನ್ನು ದೂಡಿ ಅದರಲ್ಲಿದ್ದ ಮೊಟ್ಟೆಯಲ್ಲಾ ಒಡೆದು ಹಾಕಿರುವ ಘಟನೆ ಮಧ್ಯಪ್ರದೇಶದ ಇಂಧೋರ್ ನಲ್ಲಿ ನಡೆದಿದೆ.

ವೈರಲ್ ವಿಡಿಯೋದಲ್ಲಿ ಸೆರೆಯಾಗಿರುವಂತೆ, ತಳ್ಳು ಗಾಡಿಯಲ್ಲಿ ಮೊಟ್ಟೆ ಮಾರುತ್ತಿದ್ದ 14 ವರ್ಷದ ಹುಡುಗನಿಗೆ ಬೆಳಗ್ಗೆ ಪುರಸಭೆ ಅಧಿಕಾರಿಗಳು ಬಂದು ಗಾಡಿಯನ್ನು ತೆಗೆಯುವಂತೆ ಎಚ್ಚರಿಕೆ ನೀಡಿದ್ದರು. ಇಲ್ಲದಿದ್ದರೆ ನೂರು ರೂಪಾಯಿ ಲಂಚ ಕೊಡಬೇಕೆಂದು ಬೇಡಿಕೆ ಇಟ್ಟಿದ್ದರು. ಆದರೆ ಹುಡುಗ ಅದಕ್ಕೆ ಒಪ್ಪದಿದ್ದಾಗ ಅಧಿಕಾರಿಗಳು ಗಾಡಿಯನ್ನು ಬುಡಮೇಲು ಮಾಡಿ, ಎಲ್ಲಾ ಮೊಟ್ಟೆಗಳು ಒಡೆದು ಹಾಕಿದರು ಎಂದು ವೀಡಿಯೋದಲ್ಲಿರುವ ಹುಡುಗ ಅಧಿಕಾರಿಗಳ ಮೇಲೆ ಆರೋಪಿಸಿದ್ದಾನೆ.

ಅಲ್ಲದೆ ಕೋವಿಡ್ 19 ವೈರಸ್ ನಿಂದಾಗಿ ದಿನಂಪ್ರತಿ ಮೊಟ್ಟೆ ವ್ಯಾಪಾರವೂ ಕಡಿಮೆಯಾಗಿದೆ. ಇದೀಗ ಪುರಸಭೆ ಅಧಿಕಾರಿಗಳು ಮೊಟ್ಟೆ ಒಡೆದು ಹಾಕಿದ್ದರಿಂದ ಮತ್ತಷ್ಟು ಆರ್ಥಿಕ ಹೊರೆ ಬಿದ್ದಂತಾಗಿದೆ ಎಂದು ಹುಡುಗ ಅಳಲು ತೋಡಿಕೊಂಡಿರುವುದಾಗಿ ವರದಿ ಹೇಳಿದೆ.

ಜವಾಬ್ದಾರಿಯುತ ಸ್ಥಾನದಲ್ಲಿರುವ ಅಧಿಕಾರಿಗಳೆ ಎಂಜಲುಕಾಸಿಗಾಗಿ ಮೊಟ್ಟೆ ಗಾಡಿಯನ್ನು ಬುಡಮೇಲು ಮಾಡಿ ಮೊಟ್ಟೆಯನ್ನು ಒಡೆದು ಹಾಕಿರುವ ಈ ವಿಡಿಯೋ ಎಲ್ಲೆಡೆ ಹರಿದಾಡಿದ್ದು, ಈ ಬಗೆಗೆ ಸ್ಥಳೀಯರು ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.

Exit mobile version