Bengaluru: 2022ರಲ್ಲಿ ಹುಬ್ಬಳ್ಳಿ ನಗರದಲ್ಲಿ ನಡೆದಿದ್ದ ಕೋಮುಗಲಭೆಯ ಪ್ರಕರಣವನ್ನು ಕೈಬಿಡುವಂತೆ ಸೂಚನೆ ನೀಡಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ (D.K.Shivakumar) ರಾಜ್ಯ ಗೃಹ ಇಲಾಖೆಗೆ ಪತ್ರ ಬರೆದಿದ್ದು, ಇದೀಗ ವಿವಾದಕ್ಕೆ ಕಾರಣವಾಗಿದೆ. ಡಿ.ಕೆ.ಶಿವಕುಮಾರ್ ನಡೆಗೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್ (Congress) ಸರ್ಕಾರ ಮುಸ್ಲಿಂ ತುಷ್ಠೀಕರಣಕ್ಕೆ ಇಳಿಯಿತಾ ಎಂಬ ಮಾತುಗಳು ಕೇಳಿ ಬರುತ್ತಿವೆ.
ಮೂಲಗಳ ಪ್ರಕಾರ, 2022ರಲ್ಲಿ ನಡೆದಿದ್ದ ಗಲಭೆಗೆ ಸಂಬಂಧಿಸಿದಂತೆ 158 ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಪೊಲೀಸ್ ರಾಣೆಯ ಮೇಲೆ ದಾಳಿ, ಜೀವ ಬೆದರಿಕೆ, ಸಾರ್ವಜನಿಕರ ಆಸ್ತಿಪಾಸ್ತಿಗಳಿಗೆ ಹಾನಿ, ಕೋಮುಪ್ರಚೋದನೆ ಸೇರಿದಂತೆ ಅನೇಕ ಗಂಭೀರ ಪ್ರಕರಣಗಳು ಈ 158 ಜನರ ಮೇಲೆ ದಾಖಲಿಸಲಾಗಿದೆ. ಇಂತಹ ಪ್ರಕರಣವನ್ನು ವಾಪಸ್ ಪಡೆಯುವಂತೆ ಡಿಸಿಎಂ ಡಿಕೆ ಶಿವಕುಮಾರ್ ಗೃಹ ಇಲಾಖೆಗೆ ಪತ್ರ ಬರೆದಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಅವರ ಪತ್ರ ಆಧರಿಸಿ ಪ್ರಕರಣದ ಮಾಹಿತಿಯನ್ನು ಸಲ್ಲಿಸುವಂತೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರಿಗೆ ಎಡಿಜಿಪಿ (ADGP) ಸೂಚಿಸಿದ್ದಾರೆ. ಪ್ರಕರಣ ಹಿಂಪಡೆಯುವ ಬಗ್ಗೆ ಎಫ್ಐಆರ್, ಚಾರ್ಜ್ಶೀಟ್(Charge Sheet), ಸಾಕ್ಷಿಗಳ ಹೇಳಿಕೆಯನ್ನು ಸಲ್ಲಿಸಲಾಗಿದೆ.
ಈ ಬಗ್ಗೆಮಾಹಿತಿ ನೀಡಿರುವ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ್(Renuka Sukumar), ಅಧಿಕೃತವಾಗಿ ಏನಾದರೂ ಕೇಳಿದ್ದರೆ ಅದಕ್ಕೆ ನಾವು ಉತ್ತರ ಕೊಟ್ಟಿರುತ್ತೇವೆ, ಅದೆಲ್ಲವನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸೋಕೆ ಆಗುವುದಿಲ್ಲ ಎಂದು ಹೇಳಿದ್ದಾರೆ.
ಹುಬ್ಬಳ್ಳಿ ಗಲಭೆ ಪ್ರಕರಣ :
ಏಪ್ರಿಲ್ 16, 2022ರಂದು ಹಳೇ ಹುಬ್ಬಳ್ಳಿ (Hubballi) ಪೊಲೀಸ್ ಠಾಣೆ ಎದುರು ಗಲಭೆ ನಡೆದಿತ್ತು. ಸಾವಿರಾರು ಮುಸ್ಲಿಮರು ಪೊಲೀಸ್ ಠಾಣೆ ಮುಂದೆ ಸೇರಿ ಗಲಭೆ ನಡೆಸಿ, ಪೊಲೀಸರ ವಾಹನಗಳ ಮೇಲೆ ದಾಳಿ ನಡೆಸಿದ್ದರು. ನಂತರ ಆಸ್ಪತ್ರೆ, ದೇವಸ್ಥಾನ, ಮನೆಗಳ ಮೇಲೆ ಕಲ್ಲು ತೂರಾಟ ಕೂಡ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 158 ಜನರನ್ನು ಬಂಧಿಸಲಾಗಿದ್ದು, 4 ಸಾವಿರ ಪುಟಗಳ ಚಾರ್ಜ್ಶೀಟ್ ಸಲ್ಲಿಕೆಯಾಗಿದೆ. 151 ಆರೋಪಿಗಳು ಬಳ್ಳಾರಿ ಹಾಗೂ ಕಲಬುರಗಿ ಜೈಲಿನಲ್ಲಿದ್ದಾರೆ. ಸರ್ಕಾರ ಪ್ರಕರಣವನ್ನು ಹಿಂಪಡೆದರೆ ಜೈಲಿನಲ್ಲಿರುವ 151 ಆರೋಪಿಗಳು ಬಿಡುಗಡೆಯಾಗಲಿದ್ದಾರೆ.