ಬೆಂಗಳೂರು : ಮನೆ ಮುಂದಿನ ಕಸ ಗುಡಿಸುವಾಗ ಕಣ್ಣಿಗೆ ಕಸ ಬಂದಿದೆ ಎಂಬ ಕಾರಣಕ್ಕೆ ಮಹಿಳೆಯರಿಬ್ಬರ ಮೇಲೆ ಹಲ್ಲೆ ಮಾಡಿದ್ದಾರೆಂದು ನಿರ್ಮಾಪಕ ಸೌಂದರ್ಯ ಜಗದೀಶ್ ಪುತ್ರ ಸ್ನೇಹಿತ್ ವಿರುದ್ಧ ಪ್ರಕರಣ ದಾಖಲಾಗಿದೆ.
ಮಹಾಲಕ್ಷ್ಮಿ ಲೇಔಟಿನಲ್ಲಿರುವ ಈಸ್ಟ್ ವೆಸ್ಟ್ ಗ್ರೂಪ್ ಮಾಲೀಕ ರಜತ್ ಅವರ ಮನೆಗೆ ಸ್ನೇಹಿತ್ ತಮ್ಮ ಬೌನ್ಸರ್ ಗಳೊಂದಿಗೆ ಅತಿಕ್ರಮವಾಗಿ ನುಗ್ಗಿದ್ದಲ್ಲದೇ ಮನೆಗೆಲಸದ ಅನುರಾಧ ಹಾಗೂ ಆಕೆಯ ತಾಯಿಯ ಮೇಲೆ ಹಲ್ಲೆ ಮಾಡಿ ರಂಪ ಮಾಡಿದ್ದಾರೆ ಎನ್ನುವ ಆರೋಪ ಬಂದಿದ್ದು ಮಹಾಲಕ್ಷ್ಮೀ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹತ್ತು ಜನ ಬೌನ್ಸರ್ ಗಳೊಂದಿಗೆ ಸ್ನೇಹಿತ್ ರಜತ್ ಎಂಬುವವರ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು ಇದಕ್ಕೆ ಪುಷ್ಠಿ ನೀಡುವಂತೆ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿವೆ. ಅಸಲಿಗೆ ರಜತ್ ಮನೆ ಮುಂಭಾಗದಲ್ಲಿ ಅನುರಾಧ ಕಸ ಗುಡಿಸುತ್ತಿದ್ದರು. ಈ ಕಸದ ಧೂಳು ತಮ್ಮ ಮೈಮೇಲೆ ಬಿದ್ದಿದೆ..ಕಣ್ಣಿಗೆ ಬಿದ್ದಿದೆ ಎನ್ನುವುದು ಸ್ನೇಹಿತ್ ಆಕ್ರೋಶಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕೆ ಅನುರಾಧರ ಮೇಲೆ ಹಲ್ಲೆ ಮಾಡಿದ್ದಾರೆ.
ಈ ಹಿಂದೆಯೂ ಸಹ ಸ್ನೇಹಿತ್ ಮತ್ತು ಗ್ಯಾಂಗ್ ಹಲ್ಲೆ ಮಾಡಿದ್ದ ಆರೋಪ ಎದುರಿಸಿತ್ತು ಸಣ್ಣ ಪುಟ್ಟ ವಿಚಾರ ಎಂದು ರಜತ್ ಕುಟುಂಬ ಸುಮ್ಮನೆ ಇತ್ತು. ಆದರೆ ಈ ಸಾರಿ ದೂರು ನೀಡಿದೆ. ಸ್ನೇಹಿತ್ ಮತ್ತು ಇತರರ ವಿರುದ್ದ ಎಫ್ಐಆರ್ ದಾಖಲಾಗಿದೆ. ಸದ್ಯ ಹಲ್ಲೆಗೊಳಗಾದವರನ್ನು ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು ಐಪಿಸಿ ಸೆಕ್ಷನ್ 354-ಮಹಿಳೆ ಗೌರವಕ್ಕೆ ಧಕ್ಕೆ, ಐಪಿಸಿ ಸೆಕ್ಷನ್ 323-ಕೈಯಿಂದ ಹಲ್ಲೆ ನಡೆಸುವುದು. ಐಪಿಸಿ ಸೆಕ್ಷನ್ 448 ಅತಿಕ್ರಮಣ ಪ್ರವೇಶ, 506 ಜೀವ ಬೆದರಿಕೆ ಆರೋಪದಡಿ ದೂರು ದಾಖಲಾಗಿದ್ದು ನಾಳೆ ಸ್ನೇಹಿತ್ ವಿಚಾರಣೆ ನಡೆಸಲು ಸಿದ್ಧತೆ ನಡೆಸಿದ್ದಾರೆ.