ಬೆಸ್ಕಾಂ ಸಿಬ್ಬಂದಿ ಮೇಲೆ ಕಲ್ಲು ದೊಣ್ಣೆಯಿಂದ ಹಲ್ಲೆ

ಪಟ್ಟನಾಯಕನಹಳ್ಳಿ ಸೆ 30 : ವಿದ್ಯುತ್ ಬಿಲ್ ವಸೂಲಾತಿ ಸಂದರ್ಭದಲ್ಲಿ ಬೆಸ್ಕಾಂನ ನಾಲ್ವರು ಸಿಬ್ಬಂದಿ ಮೇಲೆ ಗುಂಪೊಂದು ಹಲ್ಲೆ ನಡೆದಿರುವ ಘಟನೆ ಶಿರಾ ತಾಲ್ಲೂಕಿನ ಚಿಕ್ಕನಕೋಟೆ ಗೊಲ್ಲರಹಟ್ಟಿಯಲ್ಲಿ ಗ್ರಾಮದಲ್ಲಿ ನಡೆದಿದೆ

ಬುಧವಾರ ಬೆಳಗ್ಗೆ ವಿದ್ಯುತ್ ಬಿಲ್ ವಸೂಲಿಗಾಗಿ ತೆರಳಿದ್ದ ವೇಳೆ ಗ್ರಾಮಸ್ಥರು ಏಕಾಏಕಿ ಬೆಸ್ಕಾಂ ಸಿಬ್ಬಂದಿಗಳ ಮೇಲೆ ಕಲ್ಲು, ದೊಣ್ಣೆಗಳಿಂದ ದಾಳಿ ಮಾಡಿದ್ದಾರೆ. ಘಟನೆಯಲ್ಲಿ ಬೆಸ್ಕಾಂ ಶಾಖಾಧಿಕಾರಿ ರಾಜಣ್ಣ ಗಂಭೀರವಾಗಿ ಗಾಯಗೊಂಡಿದ್ದಾರೆ ಗ್ರಾಮಸ್ಥರು ಹಾಗೂ ಬೆಸ್ಕಾಂ ಸಿಬ್ಬಂದಿಗಳ ನಡುವೆ ಬಿಲ್ ವಿಚಾರವಾಗಿ ಮೊದಲು ಮಾತಿನ ಚಕಮಕಿ ನಡೆದಿದೆ. ಬಳಿಕ ಸ್ಥಳೀಯರು ಬೆಸ್ಕಾಂ ಸಿಬ್ಬಂದಿಗೆ ಅಟ್ಟಾಡಿಸಿ ಕಲ್ಲು, ದೊಣ್ಣೆಗಳಲ್ಲಿ ಹಲ್ಲೆ ನಡೆಸಿದ್ದಾರೆ. ಲೈನ್‍ಮ್ಯಾನ್ ಗಳಾದ ಭೂತರಾಜು, ನರಸಿಂಹರಾಜು, ತಿಪ್ಪೇಸ್ವಾಮಿ ಎಂಬುವರ ಮೇಲೆಯೂ ಹಲ್ಲೆ ಮಾಡಲಾಗಿದೆ. ಗಾಯಗೊಂಡವರು ಶಿರಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮಸ್ಥರು ಹಲ್ಲೆ ಮಾಡುತ್ತಿರುವ ದೃಶ್ಯ ಮೊಬೈಲ್ ನಲ್ಲಿ ಸೆರೆ ಹಿಡಿಯಲಾಗಿದ್ದು, ಇದೀಗ ವೈರಲ್ ಆಗ ತೊಡಗಿದೆ. ಈ ಬಗ್ಗೆ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version