Bengaluru: ಕರ್ನಾಟಕದ (Karnataka) ರಾಜಧಾನಿ ಎಂದೇ ಖ್ಯಾತಿಯಾಗಿರುವ ಬೆಂಗಳೂರಿನ 15 ಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿದ್ದು, ಬಸವೇಶ್ವರ ನಗರ ಹಾಗೂ ಯಲಹಂಕ (Yelahanka) ಪೊಲೀಸ್ ಠಾಣಾ ವ್ಯಾಪ್ತಿಯ ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ (Bomb) ಬೆದರಿಕೆ ಬಂದಿದೆ.
ಈ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಮಕ್ಕಳನ್ನು ಮನೆಗೆ ಕಳಿಸಲಾಗಿದೆ. ಇನ್ನು ಪೋಷಕರೂ ಆತಂಕಗೊಂಡು ಶಾಲೆ ಬಳಿಗೆ ಓಡೋಡಿ ಬರುತ್ತಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ಭೇಟಿ
ಬಾಂಬ್ ಬೆದರಿಕೆ ಸುದ್ದಿ ಹಬ್ಬುತ್ತಿದ್ದಂತೇ ಡಿಸಿಎಂ ಡಿಕೆ ಶಿವಕುಮಾರ್ (D K Shivakumar) ಸದಾಶಿವನಗರದ ನ್ಯೂ ಅಕಾಡೆಮಿ ಶಾಲೆಗೆ ಭೇಟಿ ನೀಡಿದ್ದಾರೆ. ಘಟನೆ ಬಗ್ಗೆ ಮಾಹಿತಿ ಪಡೆದು ಧೈರ್ಯ ನೀಡಿದ್ದಾರೆ. ಈ ವೇಳೆ ಮಾತನಾಡಿದ ಅವರು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಗರ ಪೊಲೀಸ್ ಆಯುಕ್ತರ ಜೊತೆಯೂ ಮಾತನಾಡಿದ್ದೇನೆ. ಯಾರೂ ಆತಂಕ ಪಡಬೇಕಿಲ್ಲ ಎಂದಿದ್ದಾರೆ.
ಇ-ಮೇಲ್ ಮೂಲಕ ಬೆದರಿಕೆ
ನೀವು ಇಸ್ಲಾಂ (Islam) ಮತಕ್ಕೆ ಸೇರಬೇಕು, ಇಲ್ಲದಿದ್ದರೆ ನಿಮ್ಮ ಮಕ್ಕಳನ್ನು ಕೊಲ್ಲುತ್ತೇವೆ ಎಂದು ಮೇಲ್ ನಲ್ಲಿ ಬರೆದಿರುವ ಆಗಂತುಕರು, ನೀವೆಲ್ಲ ಅಲ್ಲಾಹುವಿನ ವಿರೋಧಿಗಳು, ಸಾಯಲು ಸಿದ್ಧರಾಗಿರಿ ಎಂದಿದ್ದಾರೆ.
ಹುಸಿ ಬಾಂಬ್ ಕರೆ?
ಇನ್ನು ಇದೇ ವೇಳೆ ಸುದ್ದಿಗೋಷ್ಠಿ ನಡೆಸಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ (B Dayanand), ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಹಾಕಿದ್ದಾರೆ. ಬೆದರಿಕೆ ಇ-ಮೇಲ್ (E-Mail) ಬಂದಿರುವ ಶಾಲೆಗಳಿಗೆ ಪೊಲೀಸರು ತೆರಳಿ ಪರಿಶೀಲಿಸುತ್ತಿದ್ದಾರೆ, ಯಾವುದೇ ಕಾರಣಕ್ಕೆ ಆತಂಕ ಪಡುವ ಸ್ಥಿತಿ ಇಲ್ಲ ಎಂದು ಭರವಸೆ ನೀಡಿದ್ದಾರೆ.
ಭವ್ಯಶ್ರೀ ಆರ್ ಜೆ