ಗೋ ಹತ್ಯೆ ನಿಷೇಧ ಕಾನೂನು ರಾಜ್ಯದಲ್ಲಿ ಜಾರಿಯಾಗಿದ್ದರೂ ಕೂಡ ರಾಜ್ಯದ ಕೆಲವಡೆಗಳಲ್ಲಿ ಇನ್ನೂ ಕೂಡ ಅಕ್ರಮವಾಗಿ ಗೋಹತ್ಯೆ ಎಗ್ಗಿಲ್ಲದೆ ಸಾಗುತ್ತಿದೆ. ಇದಕ್ಕೆ ಪುಷ್ಟಿ ಎನ್ನುವಂತೆ ಕೆಲವು ದಿನಗಳ ಹಿಂದೆ ಹಸುಗಳ ಮೂಳೆಯನ್ನು ತುಂಬಿದ್ದ ಟ್ರಕ್ವೊಂದನ್ನು ಬಾಗೇಪಲ್ಲಿ ಪೊಲೀಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದರು.
ಈ ಬಗ್ಗೆ ಆಳವಾಗಿ ಅಧ್ಯಯನ ನಡೆಸಿದ ವಿಜಯ ಟೈಮ್ಸ್ ಕವರ್ ಸ್ಟೋರಿ ತಂಡ ಅಕ್ಟೋಬರ್ 3, 2021 ರಂದು ಧ್ಯಾನ್ ಫೌಂಡೇಶನ್ ಎಂಬ ಎನ್ ಜಿಒ ಜೊತೆ ಕೈಜೋಡಿಸಿ ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ಅಕ್ರಮವಾಗಿ ಗೋಹತ್ಯೆ ನಡೆಯುತ್ತಿರುವ ಕೇಂದ್ರದ ಮೇಲೆ ದಾಳಿ ನಡೆಸಿತು. ಜಾರ್ಖಂಡ್ನಿಂದ ಬಂದಿದ್ದ 10 ಜನರ ತಂಡ ಯಾರಿಗೂ ಗೋಚರಿಸದಂತೆ ಹಸಿರಿನಿಂದ ಆವೃತವಾಗಿದ್ದ ಶೆಡ್ನೊಳಗೆ ಹಸುಗಳನ್ನು ತರುತ್ತಿದ್ದರು. ಜೊತೆಗೆ ಇಲ್ಲಿ ಇದಕ್ಕೂ ಮುಂಚೆ ಸಾವಿರಾರು ಗೋವುಗಳನ್ನು ಕ್ರೂರವಾಗಿ ಕೊಲ್ಲಲಾಗಿತ್ತು. ಮತ್ತು ಅಲ್ಲಿ ಗೋವಿನ ಮೂಳೆಗಳು, ಕೊಂಬುಗಳು, ಚರ್ಮ, ತಲೆಬುರುಡೆಗಳನ್ನು ರಾಶಿ ಮಾಡಿ ಇದನ್ನು ಯಂತ್ರದಲ್ಲಿ ಪುಡಿಮಾಡಿ , ನಂತರ ಇದನ್ನು ಗೋಣಿ ಚೀಲಗಳಲ್ಲಿ ತುಂಬಿಸಿ, ಈ ಪುಡಿಯನ್ನು ಸಕ್ಕರೆ, ಎಣ್ಣೆ, ಟೂತ್ಪೇಸ್ಟ್ ತಯಾರಿಸುವಂತಹ ಅನೇಕ ಕಾರ್ಖಾನೆಗಳಿಗೆ ರಫ್ತು ಮಾಡುವ ದೊಡ್ಡ ದಂಧೆಯನ್ನೇ ಲೀಲಾಜಾಲವಾಗಿ ಮಾಡುತ್ತಿದ್ದರು.
ವಿಜಯ ಟೈಮ್ಸ್ ಕವರ್ ಸ್ಟೋರಿತಂಡ, ಧ್ಯಾನ ಫೌಂಡೇಶನ್ ಸದಸ್ಯರೊಂದಿಗೆ ನೈಜ ಸಾಕ್ಷ್ಯವನ್ನು ಕಂಡುಹಿಡಿಯಲು ಕಸಾಯಿಖಾನೆಯ ಕಡೆಗೆ ಹೊರಟರು. ಕಸಾಯಿಖಾನೆಯ ಇದರ ಖಚಿತತೆಗಾಗಿ ಕವರ್ ಸ್ಟೋರಿ ತಂಡವು ಬಾಗೇಪಲ್ಲಿ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿತು. ಪೋಲಿಸರೊಂದಿಗೆ ತೆರಳಿದ ತಂಡವು ಅಕ್ರಮ ಗೋಹತ್ಯೆನ್ನು ಬಯಲಿಗೆಳೆಯಿತು. ಕಾರ್ಮಿಕರ ಅಮಾನವೀಯ ವರ್ತನೆಯಿಂದಾಗಿ, ಶೆಡ್ ಗಬ್ಬು ನಾರುತ್ತಿತ್ತು. ಸಂಪೂರ್ಣ ಶೆಡ್ ಮತ್ತು ಅದರ ಎದುರಿಗಿರುವ ಕಾರ್ಮಿಕರ ಮನೆಯ ಮೇಲೂ ದಾಳಿ ನಡೆಸಿ ಅಕ್ರಮವನ್ನು ಬಯಲಿಗೆಳೆಯಲಾಯಿತು. ಈ ಕಾರ್ಯಚರಣೆಯಲ್ಲಿ ಒಂದು ಎತ್ತನ್ನು ರಕ್ಷಿಸಿ ಹತ್ತಿರದ ಗೋಶಾಲೆಗೆ ಸ್ಥಳಾಂತರಿಸಳಾಯಿತು.
ಅಕ್ರಮ ಗೋಹತ್ಯೆ ನಡೆಸುತ್ತಿದ್ದ ಸ್ಥಳದ ಮಾಲೀಕರಾದ ತೊಸಿಫ್ ಅಫ್ರೊಸ್ ಖಾನ್ ಮತ್ತು ಇನ್ನಿತರ 10 ಕಾರ್ಮಿಕರ ವಿರುದ್ಧ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.