ನಿಯಂತ್ರಣ ತಪ್ಪಿ ಕಾಲುವೆಗೆ ಉರುಳಿದ ಬಸ್; 32 ಕ್ಕೂ ಹೆಚ್ಚು ಮಂದಿ ಸಾವು

ಭೋಪಾಲ್, ಫೆ. 16: ಮಧ್ಯಪ್ರದೇಶದ ಸಿದ್ದಿ ಜಿಲ್ಲೆಯಲ್ಲಿ ಬಸ್​ವೊಂದು ಕಾಲುವೆಗೆ ಉರುಳಿ ಬಿದ್ದು 32ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ದುರ್ಘಟನೆ ಸಂಭವಿಸಿದೆ. ಸಿದ್ದಿ ಜಿಲ್ಲೆಯ ರಾಮಪುರ್ ನಾಯಿಕಿನ್ ಪ್ರದೇಶದಲ್ಲಿ ಇಂದು ಮಂಗಳವಾರ ಬೆಳಗ್ಗೆ 7:30ಕ್ಕೆ ಈ ಅವಘಡ ಸಂಭವಿಸಿರುವುದು ತಿಳಿದುಬಂದಿದೆ. ಈ ಅಪಘಾತಕ್ಕೊಳಗಾದ ಈ ಬಸ್ಸಿನಲ್ಲಿ 54 ಮಂದಿ ಇದ್ದು ಸಿದ್ದಿಯಿಂದ ಸತ್ನಾ ನಗರಕ್ಕೆ ಹೋಗುತ್ತಿತ್ತು. ಛುಯಾ ಕಣಿವೆ ಮೂಲಕ ಹೋಗಬೇಕಿದ್ದ ಬಸ್, ಟ್ರಾಫಿಕ್ ಇದ್ದ ಹಿನ್ನೆಲೆಯಲ್ಲಿ ಚಾಲಕ ಮಾರ್ಗ ಬದಲಿಸಿ ಹೋಗಿದ್ದ. ಈ ವೇಳೆ ಬಸ್ ನಿಯಂತ್ರಣ ತಪ್ಪಿ ಕಾಲುವೆಗೆ ಉರುಳಿದೆ. ಆದರೆ ಅದೃಷ್ಟವಶಾತ್‌ ಬಸ್ ಚಾಲಕ ಬದುಕಿದ್ದಾನೆ. ಆದರೆ, ಬಸ್ಸಿನಲ್ಲಿದ್ದ 54 ಜನರ ಪೈಕಿ ಹೆಚ್ಚಿನವರು ಬದುಕಿರುವ ಸಾಧ್ಯತೆ ಇಲ್ಲ. ಈವರೆಗೆ 32 ಮಂದಿ ಶವ ದೊರಕಿದೆ. ಡ್ರೈವರ್ ಸೇರಿದಂತೆ ಏಳು ಮಂದಿಯನ್ನು ರಕ್ಷಿಸಲಾಗಿದೆ.

ಘಟನೆ ನಡೆದ ಕೂಡಲೇ ಸ್ಥಳಕ್ಕೆ ಧಾವಿಸಿದ ಎಸ್​ಡಿಆರ್​ಎಫ್ ತಂಡ ಕ್ರೇನ್ ಸಹಾಯದಿಂದ ಬಸ್ಸನ್ನು ನೀರಿನಿಂದ ಮೇಲಕೆತ್ತಿತು. ಮುನ್ನೆಚ್ಚರಿಕೆಯಾಗಿ ಸಮೀಪದ ಬನಸಾಗರ್ ಜಲಾಶಯದಿಂದ ಕಾಲುವಿಗೆ ನೀರು ಹರಿಸುವುದನ್ನು ತಾತ್ಕಾಲಿಕಾಗಿ ನಿಲ್ಲಿಸಿ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು.

32 ಸೀಟುಗಳ ಈ ಬಸ್ಸಿನಲ್ಲಿ 54 ಮಂದಿ ಪ್ರಯಾಣಿಸುತ್ತಿದ್ದರು. ಹೆಚ್ಚು ಜನರು ಇದ್ದರಿಂದ ಬಸ್ ನಿಯಂತ್ರಣ ತಪ್ಪಿ ಉರುಳಿಬಿದ್ದಿರುವ ಶಂಕೆ ಇದೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ. ಸಾರಿಗೆ ಸಚಿವ ಗೋವಿಂದ್ ಸಿಂಗ್ ರಾಜಪೂತ್ ಅವರನ್ನ ಕರೆದು ವಿಚಾರಣೆ ನಡೆಸಿದ್ದಾರೆ. ಇವತ್ತು ಸಿಎಂ ತಮ್ಮೆಲ್ಲಾ ಕಾರ್ಯಕ್ರಮಗಳನ್ನ ರದ್ದುಗೊಳಿಸಿ ಅಪಘಾತ ಘಟನೆಯನ್ನ ಅವಲೋಕಿಸುತ್ತಿದ್ದಾರೆ.

ತಮಿಳುನಾಡಿನಲ್ಲಿ ಮತ್ತೊಂದು ದುರ್ಘಟನೆ:

ಇವತ್ತು ತಮಿಳುನಾಡಿನಲ್ಲಿ ಇದೇ ರೀತಿಯ ಮತ್ತೊಂದು ಅಪಘಾತ ಘಟನೆ ವರದಿಯಾಗಿದೆ. ತೂತುಕ್ಕುಡಿ ಜಿಲ್ಲೆಯಲ್ಲಿ ಸಣ್ಣ ಸರಕು ಸಾಗಣೆ ವಾಹನವೊಂದು ರಸ್ತೆ ಬದಿಯ ಕಾಲುವೆಗೆ ಉರುಳಿ ಬಿದ್ದು ಐವರು ಮೃತಪಟ್ಟಿದ್ಧಾರೆ. 30 ಮಂದಿ ಗಾಯಗೊಂಡಿದ್ಧಾರೆ. ಮೃತಪಟ್ಟವರೆಲ್ಲರೂ ಮಹಿಳೆಯರೇ ಆಗಿದ್ದಾರೆ.

Exit mobile version