ಅಯೋಧ್ಯೆ (Ayodhya) ರಾಮಮಂದಿರ ಉದ್ಘಾಟನೆಗೆ ಕೆಲವೇ ದಿನಗಳು ಬಾಕಿಯಿದ್ದು, ಈ ಕಾರ್ಯಕ್ರಮಕ್ಕೆ ಕಾಂಗ್ರೆಸ್ (Congress) ಗೈರು ಆಗಲು ನಿರ್ಧರಿಸಿದೆ. ಈ ಬಗ್ಗೆ ಕಾಂಗ್ರೆಸ್ ಮುಖ್ಯ ವಕ್ತಾರ ಜೈರಾಮ್ ರಮೇಶ್ (Jairam Ramesh) ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಅಯೋಧ್ಯೆ ರಾಮಮಂದಿರ ಟ್ರಸ್ಟ್ ನೀಡಿರೋ ಆಹ್ವಾನವನ್ನು ಗೌರವಪೂರ್ವಕವಾಗಿ ನಿರಾಕರಿಸಿರುವುದಾಗಿ ತಿಳಿಸಿದ್ದಾರೆ.
ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮಮಂದಿರವನ್ನು ಜನವರಿ (January) 22ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಲೋಕಾರ್ಪಣೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶದ ಗಣ್ಯಾತಿಗಣ್ಯರಿಗೆ ಅಯೋಧ್ಯೆ ಮಂದಿರ ಟ್ರಸ್ಟ್ ಖುದ್ದು ಭೇಟಿ ಮಾಡಿ ಆಹ್ವಾನ ಪತ್ರಿಕೆಯನ್ನು ನೀಡುತ್ತಿದೆ. ಲೋಕಾರ್ಪಣೆಯ ದಿನ ಹತ್ತಿರವಾಗುತ್ತಿದ್ದಂತೆ ಕಾಂಗ್ರೆಸ್ ನಾಯಕರು ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಈ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ಪಕ್ಷದ ಅಧಿನಾಯಕಿ ಸೋನಿಯಾಗಾಂಧಿ ಹಾಗೂ ಅಧೀರ್ ರಂಜನ್ ಚೌಧರಿ ಭಾಗಿಯಾಗಲ್ಲ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದ್ದು, ಶ್ರೀರಾಮಮಂದಿರ ಲೋಕಾರ್ಪಣೆಗೆ ಭಾಗಿಯಾಗಲ್ಲ ಎಂದಿರುವ ಕಾಂಗ್ರೆಸ್ ನಾಯಕರು ಸ್ಪಷ್ಟನೆಯನ್ನು ನೀಡಿದ್ದಾರೆ.
ಕಾಂಗ್ರೆಸ್ ಪಕ್ಷ 2019ರ ಸುಪ್ರೀಂಕೋರ್ಟ್ (Supreme Court) ತೀರ್ಪು ಅನ್ನು ಗೌರವಿಸುತ್ತೆ. ಭಗವಾನ್ ಶ್ರೀರಾಮನನ್ನು ಮಿಲಿಯನ್ ಗಟ್ಟಲೇ ಭಕ್ತರು ಆರಾಧಿಸುತ್ತಾರೆ. ಧರ್ಮ ವೈಯಕ್ತಿಕ ವಿಷಯ. ಆದರೆ, ಬಿಜೆಪಿ, ಆರ್.ಎಸ್.ಎಸ್ (BJP, RSS) ಅಯೋಧ್ಯೆಯ ಮಂದಿರ ವಿಷಯವನ್ನು ರಾಜಕೀಯ ವಿಷಯ ಮಾಡಿದ್ದಾರೆ. ಉದ್ಘಾಟನೆಯನ್ನು ಚುನಾವಣಾ ಲಾಭಕ್ಕಾಗಿ ಮುಂಚೂಣಿಗೆ ತಂದಿದ್ದಾರೆ.
ಆರ್.ಎಸ್.ಎಸ್ ಹಾಗೂ ಬಿಜೆಪಿ ಈ ಕಾರ್ಯಕ್ರಮವನ್ನು ರಾಜಕೀಯ ಲಾಭದ ಕಾರ್ಯಕ್ರಮ ಮಾಡಿದೆ. ಹೀಗಾಗಿ ಅಯೋಧ್ಯೆ ಟ್ರಸ್ಟ್ (Ayodhya Trust) ಆಹ್ವಾನವನ್ನು ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ಅಧೀರ್ ರಂಜನ್ ಚೌಧರಿ ಅವರು ತಿರಸ್ಕರಿಸಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ನಾಯಕರ ಮೇಲೆ ಯತ್ನಾಳ್ ವಾಗ್ದಾಳಿ
ಈ ಬಗ್ಗೆ ಟ್ವೀಟ್ ಮಾಡಿದ ಯತ್ನಾಳ್ (Yatnal), ಕಾಂಗ್ರೆಸ್ ಪಕ್ಷದ ನೈಜ ಮನಃಸ್ಥಿತಿ, ಹಿಂದೂ ವಿರೋಧಿ ನಿಲುವು ಏನೆಂದು ತಿಳಿಯುವುದಕ್ಕೆ ಇದಕ್ಕಿಂತ ಉತ್ತಮವಾದ ಉದಾಹರಣೆ ಬೇಕಿಲ್ಲ. ಇಡೀ ದೇಶದಲ್ಲೇ ಹಬ್ಬದ ವಾತಾವರಣವಿರಬೇಕಾದರೆ, ಕ್ಷುಲ್ಲಕ ರಾಜಕಾರಣಕ್ಕೆ ಇವರು ಶ್ರೀ ರಾಮ ದೇವರ ಪ್ರಾಣಪ್ರತಿಷ್ಠಾಪನೆಯ ಆಮಂತ್ರಣವನ್ನು ತಿರಸ್ಕರಿಸುವುದು ಇವರ ಡೋಂಗಿ ಜಾತ್ಯತೀತವಾದಕ್ಕೆ ಹಿಡಿದ ಕೈಗನ್ನಡಿ. ಶ್ರೀ ರಾಮನು ಇವರಿಗೆ ಒಳ್ಳೆಯ ಬುದ್ದಿಯನ್ನು ನೀಡಲಿ ಎಂದಿದ್ದಾರೆ.
ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಭಗವಾನ್ ಶ್ರೀರಾಮನ ಪ್ರಾಣಪ್ರತಿಷ್ಠಾಪನಾ ಸಮಾರಂಭವನ್ನು ಬಹಿಷ್ಕರಿಸುವ ಉದ್ದೇಶಪೂರ್ವಕ ನಿರ್ಧಾರದ ಮೂಲಕ ಕಾಂಗ್ರೆಸ್ ಪಕ್ಷದ ಹುಸಿ ಜಾತ್ಯತೀತತೆಯನ್ನು ಸ್ಪಷ್ಟವಾಗಿ ಪ್ರದರ್ಶಿಸಲಾಗಿದೆ ಎಂದು ಯತ್ನಾಳ್ ಹೇಳಿದರು.
ಭವ್ಯಶ್ರೀ ಆರ್ ಜೆ