Mangalore: ಮುಸ್ಲಿಂ ಮಹಿಳೆಯರ (Muslim Womens) ವಿರುದ್ಧ ಅವಹೇಳನಕಾರಿ ಭಾಷಣ ಮಾಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ (Kalladka Prabhakar Bhat) ಅವರನ್ನು ಬಂಧಿಸಬೇಕು ಎಂದು ವಿವಿಧ ಸಂಘಟನೆಗಳು ಸರ್ಕಾರವನ್ನು ಆಗ್ರಹಿಸಿದೆ..
ಈ ಪ್ರಕರಣ ಸಂಬಂಧ ಭಟ್ ವಿರುದ್ಧ ಈಗಾಗಲೇ ಎಫ್ಐಆರ್ (FIR) ದಾಖಲಾಗಿದ್ದು, ಈ ವಿಚಾರವಾಗಿ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವುಮೆನ್ ಇಂಡಿಯಾ ಮೂಮೆಂಟ್ ರಾಜ್ಯಾಧ್ಯಕ್ಷೆ ಫಾತಿಮಾ ನಸೀಮ (Fatima Naseem), ಇದು ನಮ್ಮ ಮಹಿಳೆಯರ ಸ್ವಾಭಿಮಾನಕ್ಕೆ ಧಕ್ಕೆ ತರುವಂಥ ಹೇಳಿಕೆ. ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ ಹೇಳಿಕೆಯನ್ನು ನೀಡಿದ್ದಾರೆ.
ಆರ್ಎಸ್ಎಸ್ (RSS) ನಲ್ಲಿರುವ ವಿಷ ಜಂತುಗಳು ಈ ರೀತಿಯ ಹೇಳಿಕೆ ನೀಡುವುದು ಹೊಸದಲ್ಲ. ಅವರ ಮೇಲೆ ಎಫ್.ಐ.ಆರ್ ಆದರೂ ಇನ್ನು ಕೂಡ ಬಂಧನವಾಗಿಲ್ಲ. ಹಾಗಾಗಿ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು. ಈ ವಿಚಾರದಲ್ಲಿ ಕಾಂಗ್ರೆಸ್ (Congress) ಸರ್ಕಾರ ಸಹ ನಿಷ್ಕ್ರಿಯತೆ ತೋರಿಸುತ್ತಿದೆ. ಪ್ರತಿಭಟನೆಗೂ ಯಾವುದೇ ಅವಕಾಶ ನೀಡುತ್ತಿಲ್ಲ. ಅನುಮತಿ ಕೇಳಲು ಹೋದರೆ ನೋಟಿಸ್ (Notice) ಜಾರಿ ಮಾಡಿದ್ದಾರೆ.
ಮಹಿಳೆಯರ ಮೇಲೆ 107 ಸೆಕ್ಷನ್ ಹಾಕಿ ಪ್ರಕರಣ ದಾಖಲಿಸಿದ್ದಾರೆ. ರೌಡಿಗಳನ್ನು ನಿಯಂತ್ರಿಸುವ ಕೇಸ್ ಅನ್ನು ನಮ್ಮ ಮೇಲೆ ಹಾಕಿದ್ದಾರೆ. ಹೆಚ್ಚಿನ ಸಂಖ್ಯೆಯ ಮುಸ್ಲಿಂ ಓಟು ಪಡೆದು ಬಂದ ಕಾಂಗ್ರೆಸ್ ಸರ್ಕಾರ ಮೌನವಾಗಿದೆ. ಸರ್ಕಾರ ಮಹಿಳೆಯರಿಗೆ ಬಿಟ್ಟಿ ಭಾಗ್ಯ ನೀಡಿ ಮಂಗ ಮಾಡಿದೆ. ಮಹಿಳೆಯರಿಗೆ ಯಾವುದೇ ಸುರಕ್ಷತೆ ಇಲ್ಲ. ತಕ್ಷಣ ಕಲ್ಲಡ್ಕ ಭಟ್ಟರನ್ನು ಬಂಧಿಸಬೇಕು ಎಂದು ಅವರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ದಕ್ಷಿಣ ಕನ್ನಡ (Dakshina Kannada) ಜಿಲ್ಲಾ ಜಾತ್ಯಾತೀತ ಪಕ್ಷಗಳ ಸಂಘಟನೆಗಳ ಜಂಟಿ ವೇದಿಕೆ ಸುದ್ದಿಗೋಷ್ಠಿ ನಡೆಸಿ ಭಟ್ಟರ ಬಂಧನಕ್ಕೆ ಆಗ್ರಹಿಸಿದ್ದು, ಮಾಜಿ ಸಚಿವ ರಮಾನಾಥ್ ರೈ (Ramanath Rai) ಮಾತನಾಡಿ, ಪ್ರಭಾಕರ ಭಟ್ ಮುಸ್ಲಿಂ ಮಹಿಳೆಯರ ಬಗ್ಗೆ ಅಶ್ಲೀಲ ಮತ್ತು ತುಚ್ಛವಾಗಿ ಮಾತನಾಡಿದ್ದಾರೆ. ಇದನ್ನು ನಾಗರಿಕ ಸಮಾಜ ಒಪ್ಪಲು ಸಾದ್ಯವೇ ಇಲ್ಲ. ಮುಸ್ಲಿಂ ಮಾತ್ರ ಅಲ್ಲ, ಸಮಗ್ರ ಮಹಿಳೆಯರಿಗೆ ಮಾಡಿದ ಅವಮಾನ. ಜಿಲ್ಲೆಯಲ್ಲಿ ಅನೇಕ ಬಾರಿ ಇವರು ಪ್ರಚೋದನಕಾರಿ ಭಾಷಣ ಮಾಡಿದ್ದಾರೆ.
ಸದ್ಯ ಕಾಂಗ್ರೆಸ್ ಸರ್ಕಾರ ಇರುವ ಕಾರಣ ಅವರಿಗೆ ಏನು ಮಾಡಬೇಕು ಎಂದು ತೋಚುತ್ತಿಲ್ಲ, ಹೀಗಾಗಿ ಕೋಮು ಪ್ರಚೋದನೆ ಮಾಡಿ ಗಲಾಟೆ ಸೃಷ್ಟಿಸೋ ಯತ್ನ ಮಾಡುತ್ತಿದ್ದಾರೆ. ಕಲ್ಲಡ್ಕ ಪ್ರಭಾಕರ ಭಟ್ರನ್ನ ವಿಳಂಬ ಮಾಡದೇ ಬಂಧಿಸಬೇಕು ಎಂದು ಒತ್ತಾಯಿಸಿದರು. ಪ್ರಭಾಕರ ಭಟ್ ಹೇಳಿಕೆಯನ್ನ ಯಾರೂ ಸಮರ್ಥನೆ ಮಾಡಲು ಸಾಧ್ಯವಿಲ್ಲ. ಸಂಸದ ನಳಿನ್ ಕುಮಾರ್ ಕಟೀಲ್ (Nalin Kumar Kateel) ಅವರು ಪ್ರಭಾಕರ ಭಟ್ ಭಾಷಣ ತಿರುಚಿದ್ದಾರೆ ಎನ್ನುತ್ತಾರೆ.
ಆದರೆ, ಯಾವ ರೀತಿ ತಿರುಚಿದ್ದಾರೆ ಅಂತ ಅವರು ಹೇಳಲಿ. ಕೋಮುದ್ವೇಷ ಹರಡಿಸಿ ರಾಜಕೀಯ ಲಾಭಕ್ಕೆ ಹೆಣ್ಣುಮಕ್ಕಳ ಮಾನ ಮರ್ಯಾದೆಗೆ ಕುಂದು ತರಲಾಗಿದೆ. ಈಗಾಗಲೇ ಇದರ ವಿರುದ್ಧ ಕೆಲವು ದೂರುಗಳು ದಾಖಲಾಗಿದ್ದು, ಅವರ ವಿರುದ್ದ ಜಾಮೀನು ರಹಿತ ಪ್ರಕರಣ ದಾಖಲಾಗಿದೆ. ಅದನ್ನ ಗಮನಿಸಿ ಸರಕಾರ ಕೂಡಲೇ ಅವರನ್ನು ಬಂಧಿಸಬೇಕು. ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳುವ ವಿಶ್ವಾಸ ನನಗೆ ಇದೆ ಎಂದು ರಮಾನಾಥ ರೈ ಹೇಳಿದ್ದಾರೆ.
ಭವ್ಯಶ್ರೀ ಆರ್ ಜೆ