`ಡೆನ್ವರ್‌’ಗೆ ಈಗ ಸುದೀಪ್ ರಾಯಭಾರಿ

ಕಿಚ್ಚ ಸುದೀಪ್ ನಟ ಎನ್ನುವುದರ ಜೊತೆಗೆ ಒಂದಷ್ಟು ಬ್ರ್ಯಾಂಡ್‌ಗಳಿಗೆ ಅಂಬಾಸಿಡರ್ ಆಗಿಯೂ ಗುರುತಿಸಿಕೊಂಡವರು. ಅದೇ ರೀತಿ ಡೆನ್ವರ್ ಪರ್ಫ್ಯುಮ್ ಬ್ರ್ಯಾಂಡ್‌ಗೆ ಕೂಡ ರಾಯಭಾರಿಯಾಗಿದ್ದಾರೆ. ಬೆಂಗಳೂರಿನ ಮಹಾತ್ಮಾ ಗಾಂಧಿ ರಸ್ತೆಯ ತಾಜ್ ಹೋಟೆಲ್‌ನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಸುದೀಪ್ ಅವರನ್ನು ರಾಯಭಾರಿಯಾಗಿ ಮಾಧ್ಯಮಗಳಿಗೆ ಪರಿಚಯಿಸಲಾಯಿತು.

“ಡೆನ್ವೆರ್ ಸಂಸ್ಥೆಯ ಬಗ್ಗೆ ನಾನು ತುಂಬ ಕೇಳಿದ್ದೆ. ಅವರು ಲಾಕ್ಡೌನ್ ಸಂದರ್ಭದಲ್ಲಿ ಕೂಡ ತಮ್ಮ ನೌಕರರನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ಅವರ ಸಂಸ್ಥೆಯಿಂದ ರಾಯಭಾರಿಯಾಗಲು ನನ್ನನ್ನು ಸಮೀಪಿಸಿದಾಗ ನಾನು ಒಪ್ಪಿಕೊಂಡೆ. ಇನ್ನು ಬ್ರ್ಯಾಂಡ್‌ಗಳ ಆಯ್ಕೆಯ ಬಗ್ಗೆ ವಿರೋಧ ಮಾಡುವವರು, ವಿರೋಧಿಸುವವರು ಎಲ್ಲದಕ್ಕೂ ವಿರೋಧಿಸುತ್ತಾರೆ. ಅದನ್ನೆಲ್ಲ ಎದುರಿಸಲೇಬೇಕು.

ಒಂದುವೇಳೆ ನಾನು ನಾನು ಜಾಹೀರಾತು ನೀಡುವ ಯಾವುದೇ ಸಂಸ್ಥೆ ಸಮಾಜ ವಿರೋಧಿ ಆಗಿದ್ದರೆ ಆ ಬಗ್ಗೆ ವಿರೋಧಿಸುವವರು ಅಂಥ ಸಂಸ್ಥೆಗೆ ಅವಕಾಶ ನೀಡಿದ ಪ್ರಧಾನಿಯವರನ್ನು ಪ್ರಶ್ನಿಸಬೇಕೇ ಹೊರತು ನನ್ನನ್ನಲ್ಲ” ಎಂದು ಸುದೀಪ್ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಸುದೀಪ್ ಅವರು, `ವಿಕ್ರಾಂತ್ ರೋಣ’ ಸಿನಿಮಾವನ್ನು ಜಗತ್ತು ಬುರ್ಜ್ ಖಲೀಫಾ ಮೂಲಕ ಗುರುತಿಸುವಂತೆ ಮಾಡುವಲ್ಲಿ ತಮ್ಮ ಆತ್ಮೀಯ ಸ್ನೇಹಿತ, ನಿರ್ಮಾಪಕ ಜಾಕ್ ಮಂಜು ಅವರ ಪ್ರಯತ್ನವೂ ಪ್ರಮುಖವಾಗಿದೆ ಎಂದರು.

ಡೆನ್ವೆರ್ ಪರ್ಫ್ಯುಮ್ ಬ್ರ್ಯಾಂಡ್‌ನ ಮಾರ್ಕೆಟಿಂಗ್ ಮತ್ತು ಸೇಲ್ಸ್ ವಿಭಾಗದ ನಿರ್ದೇಶಕರಾಗಿರುವ ಸೌರಭ್ ಗುಪ್ತಾ ಮಾತನಾಡಿ, “ನಮ್ಮ ಸಂಸ್ಥೆ ಕಳೆದ ಹಲವಾರು ವರ್ಷಗಳಿಂದ ಚಾಲ್ತಿಯಲ್ಲಿದೆ. ಬಾಲಿವುಡ್‌ನಿಂದ ಶಾರುಖ್, ತೆಲುಗಿನಿಂದ ಮಹೇಶ್ ಬಾಬು ಮೊದಲಾದವರು ಈಗಾಗಲೇ ರಾಯಭಾರಿಯಾಗಿದ್ದಾರೆ. ಪ್ರಸ್ತುತ ದೇಶ, ವಿದೇಶಗಳಲ್ಲೇ ಕಿಚ್ಚ ಸುದೀಪ್, ಬಾದ್‌ಷಾ ಎಂದು ಗುರುತಿಸಲ್ಪಡುವ ಇವರು ನಮ್ಮ ರಾಯಭಾರಿಯಾಗಲು ಒಪ್ಪಿಕೊಂಡಿರುವುದಕ್ಕೆ ಖುಷಿ ಇದೆ” ಎಂದರು.

Exit mobile version