ನನ್ನ ಹೇಳಿಕೆಯನ್ನು ತಪ್ಪು ಅರ್ಥಗಳಿಗೆ ಎಡೆಮಾಡಬೇಡಿ : ಸಾಹಿತಿ ಡಾ.ದೊಡ್ಡರಂಗೇಗೌಡ

ಬೆಂಗಳೂರು, ಫೆ. 22: ನನ್ನ ಹೇಳಿಕೆ ದಲಿತರ ವಿರುದ್ಧವಾದದ್ದಲ್ಲ, ಉಳ್ಳವರ ವಿರುದ್ಧವಾದದ್ದು, ಬಡವರ ಪರವಾದದ್ದು. ಇದು ತಪ್ಪು ಅರ್ಥಗಳಿಗೆ ಎಡೆ ಮಾಡಬಾರದು. ಇದರಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಇರಲಿ ಎಂದು ಸಾಹಿತಿ ಪ್ರೊ. ದೊಡ್ಡರಂಗೇಗೌಡ ಸ್ಪಷ್ಟನೆ ನೀಡಿದ್ದಾರೆ.

ಹಾಸನದಲ್ಲಿ ತಾವು ಆಡಿದ ‘ಭಾರತದ ಸಂವಿಧಾನದಲ್ಲಿ ಮಾರ್ಪಾಡು ಮಾಡುವುದು ಸೂಕ್ತವಾದೀತು’ ಎಂಬ ಹೇಳಿಕೆಗೆ ಸ್ಪಷ್ಟನೆ ನೀಡಿರುವ ಅವರು, ನಮ್ಮ ಬಹುಮುಖಿ ರಾಷ್ಟ್ರ. ಆದರೂ ಏಕರೂಪದ ಶಿಕ್ಷಣ ಇರಲಿಲ್ಲ. ಈಗ ನಮಗೆ ನಮ್ಮ ದೇಶದಲ್ಲಿ ಏಕರೂಪ ಶಿಕ್ಷಣ ಅನಿವಾರ್ಯ ಎಂದು ಅನಿಸುತ್ತದೆ. ಬಡವರು ಬಡವರಾಗೇ ಉಳಿಯುತ್ತಿದ್ದಾರೆ. ಬಲ್ಲಿದರು ಹೆಚ್ಚಿನ ಲಾಭಗಳನ್ನು ಗಳಿಸುತ್ತಿದ್ದಾರೆ. ‘ಎಲ್ಲರಿಗೂ ಒಂದೇ ರೀತಿ ಶಿಕ್ಷಣ ದೊರೆಯುಂತಾಗಬೇಕು. ಆಗ ಮಾತ್ರ ಸಮಾನತೆ ಸಾಧ್ಯ. ಉಳ್ಳವರು ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ’ ಹೀಗಾಗಿ ‘ಸಾಮಾಜಿಕ’ ನ್ಯಾಯ ಸಿಗದಂತಾಗಿದೆ.

೧೨ನೇ ಶತಮಾನದಲ್ಲಿ- ಅದರಲ್ಲೂ ಅನುಭವ ಮಂಟಪದ ಮಾದರಿ ಎಲ್ಲರಿಗೂ (ಹಿಂದುಳಿದವರಿಗೆ) ಹೆಚ್ಚಿನ ಅವಕಾಶ ಸಿಗುವಂತಾಗಬೇಕು. ಹಿಂದುಳಿದ ವರ್ಗಗಳಿಗೆ ಅನ್ಯಾಯ ಆಗಬಾರದು; ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಮೊದಲು ನಮ್ಮಲ್ಲಿ ಏಕರೂಪದ ಶಿಕ್ಷಣ ಜಾರಿಗೆ ಬರಬೇಕು. ಈ ನಿಟ್ಟಿನಲ್ಲಿ ಭಾರತದ ಸಂವಿಧಾನದಲ್ಲಿ ಮಾರ್ಪಾಟು ಮಾಡುವುದು ಸೂಕ್ತವಾದೀತು ಎಂದಿದ್ದೆ ಎಂದು ಟಿಪ್ಪಣಿಯಲ್ಲಿ ತಿಳಿಸಿದ್ದಾರೆ.

Exit mobile version