ಯುವಕರ ಮೇಲೆ ರೌಡಿಯಂತೆ ಮಚ್ಚಿನಿಂದ ಹಲ್ಲೆ ನಡೆಸಿದ ಎ.ಎಸ್.ಐ: ಎಫ್.ಐ.ಆರ್ ದಾಖಲಾಗುತ್ತಿದ್ದಂತೆ ಪರಾರಿ

Bengaluru: ಸಿಲಿಕಾನ್ ಸಿಟಿಯಲ್ಲಿ ಸಾರ್ವಜನಿಕರ ರಕ್ಷಣೆಗೆ ನಿಲ್ಲಬೇಕಾಗಿರುವ ಪೊಲೀಸರೇ (Police) ರೌಡಿಗಳ ರೀತಿ ಲಾಂಗ್ ಬೀಸಿ ಅಟ್ಟಹಾಸ ಮೆರೆದಿರುವ ಘಟನೆ ನಡೆದಿದ್ದು, ಬೆಂಗಳೂರಿನ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾಗಡಿ ರಸ್ತೆ ಪೊಲೀಸ್ ಠಾಣೆಯ‌ ಎಎಸ್​ಐ ಶ್ರೀನಿವಾಸ್ (A.S.I.Srinivas) ಎಂಬುವವರು ದಯಾನಂದ್, ಶಶಿಧರ್ ಎಂಬ ಯುವಕರ ಮೇಲೆ ರೌಡಿಗಳ ರೀತಿ ಲಾಂಗ್​ನಿಂದ ಹಲ್ಲೆ ನಡೆಸಿದ್ದಾರೆ.

ಈ ಘಟನೆ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಎ.ಎಸ್.ಐ ಶ್ರೀನಿವಾಸ್ ವಿರುದ್ಧ ಎಫ್.ಐ.ಆರ್ (F.I.R) ದಾಖಲಾಗಿದ್ದು, ಲಾಂಗ್​ನಿಂದ ಹಲ್ಲೆ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅ.26ರ ರಾತ್ರಿ ವಿಜಯನಗರದ ಆರ್.ಪಿ.ಸಿ ಲೇಔಟ್​​ನಲ್ಲಿ (R.P.C.Layout) ಪೊಲೀಸ್ ಅಧಿಕಾರಿಯೊಬ್ಬರು ರೌಡಿಯಂತೆ ಲಾಂಗ್ ಬೀಸಿ ದರ್ಪ ಮೆರೆದಿದ್ದಾರೆ. ತೇಜಸ್ವಿನಿ ಬಾರ್​ನಲ್ಲಿ ಎ.ಎಸ್.ಐ ಅವರ ಅಣ್ಣನ ಮಗ ಆನಂದ್, ಮದ್ಯಪಾನ ಮಾಡಲು ಹೋಗಿದ್ದ. ಅದೇ ಬಾರಲ್ಲಿ ದಯಾನಂದ್ ಮತ್ತು ಶಶಿಧರ್ ಎಂಬ ಯುವಕರು ಬಿಯರ್ ಕುಡಿಯಲು ಹೋಗಿದ್ದರು.

ಬಾರ್​ನಲ್ಲಿ ಆನಂದ್ ಮತ್ತು ದಯಾನಂದ್(Dayanand) , ಶಶಿಧರ್ ನಡುವೆ ಚಿಕ್ಕ ಗಲಾಟೆಯಾಗಿದ್ದು, ಅದೇ ವೇಳೆ ನೀವಿಬ್ಬರು ಯಾವ ಏರಿಯಾ ಎಂದು ಆನಂದ್ ಕೇಳಿದ್ದಾನೆ. ನಮ್ದು ಇದೇ ಏರಿಯಾ, ನಿಂದು ಯಾವ ಏರಿಯಾ ಎಂದು ದಯಾನಂದ್ ಕೇಳಿದ್ದಾನೆ. ಆಗ ನಂದು ಇದೇ ಏರಿಯಾ ಬೇಕಾದ್ರೆ ಬಾ ಮನೆ ತೋರಿಸ್ತೀನಿ ಎಂದು ಆನಂದ್ (Anand) ಹೇಳಿದ್ದು ತನ್ನದೇ ಆಟೋದಲ್ಲಿ ಇಬ್ಬರನ್ನು ಕರೆದುಕೊಂಡು ನೇರವಾಗಿ‌ ಆರ್.ಪಿ.ಸಿ ಲೇಔಟ್ 8th ಕ್ರಾಸ್ ನಲ್ಲಿರುವ ತನ್ನ ಚಿಕ್ಕಪ್ಪ ಶ್ರೀನಿವಾಸ್ ಮನೆ ಬಳಿ ಬಂದಿದ್ದಾನೆ.

ಆಗ ಆಟೋದಿಂದ ಇಳಿದವನೇ ಆನಂದ್ ಜೋರಾಗಿ ಕೂಗಾಡಲು ಶುರು ಮಾಡಿದ್ದ. ಇವರಿಬ್ಬರೂ ಕಳ್ಳರು‌ ಚಿಕ್ಕಪ್ಪ ಬೇಗ ಬನ್ನಿ ಎಂದು ಕೂಗಿದ್ದಾನೆ. ತಕ್ಷಣ ಕೈಯಲ್ಲಿ ಮಚ್ಚು, ಲಾಠಿ ಹಿಡಿದು ಓಡಿ ಬಂದ ಎ.ಎಸ್.ಐ ಶ್ರೀನಿವಾಸ್, ಓಡಿ ಹೋಗಿ ದಯಾನಂದ್ ಮತ್ತು ಶಶಿಧರ್ (Shashidar) ಇಬ್ಬರನ್ನು ಹಿಡಿದು ಹಲ್ಲೆ ನಡೆಸಿದ್ದಾರೆ.

ಅವರಿಗೆ ಮಾತನಾಡಲೂ ಬಿಡದೆ ಇಬ್ಬರ ಮೇಲೆ ಹಲ್ಲೆ ಮಾಡಿದ್ದಾರೆ. ಮಚ್ಚಲ್ಲಿ ಕೈ, ಕಾಲು, ಕುತ್ತಿಗೆ ಭಾಗಕ್ಕೆ ಹಲ್ಲೆ ಮಾಡಿದ್ದು, ಯುವಕರು ಕೆಳಗೆ ಬೀಳುತ್ತಿದ್ದಂತೆ ಲಾಠಿಯಿಂದ ಥಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ್ದ ವಿಜಯನಗರ ಹೊಯ್ಸಳ ಸಿಬ್ಬಂದಿ ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಸದ್ಯ ಇಬ್ಬರು ಯುವಕರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ವಿಜಯನಗರ (Vijayanagar) ಪೊಲೀಸ್ ಠಾಣೆಯಲ್ಲಿ ಎ.ಎಸ್.ಐ ಶ್ರೀನಿವಾಸ್ ವಿರುದ್ದ ಎಫ್.ಐ.ಆರ್ ದಾಖಲಾಗಿದ್ದು ಶ್ರೀನಿವಾಸ್ ತಲೆ ಮರೆಸಿಕೊಂಡಿದ್ದಾರೆ.

ಭವ್ಯಶ್ರೀ ಆರ್.ಜೆ

Exit mobile version