ಮುಂಬೈ : ಮಹಾರಾಷ್ಟ್ರದ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ (ಎನ್ಸಿಬಿ) ಮಾಜಿ ಅಧಿಕಾರಿ ಸಮೀರ್ ವಾಂಖೆಡೆ(Sameer Wankhade) ಅವರಿಗೆ ಸಾಮಾಜಿಕ ಮಾಧ್ಯಮದಲ್ಲಿ(Social Media) ಜೀವ ಬೆದರಿಕೆ ಹಾಕಲಾಗಿದೆ. ಆಗಸ್ಟ್ 14 ರಂದು ‘ಅಮನ್’ ಹೆಸರಿನ ಟ್ವಿಟರ್(Twitter) ಖಾತೆಯಿಂದ ಸಮೀರ್ ವಾಂಖೆಡೆ ಅವರಿಗೆ ಸಂದೇಶವನ್ನು ಕಳುಹಿಸಿದ್ದು, “ತುಮ್ಕೋ ಪಾತಾ ಹೈ ತುಮ್ನೆ ಕ್ಯಾ ಕಿಯಾ ಹೈ, ಇಸ್ಕಾ ಹಿಸಾಬ್ ತುಮ್ಕೋ ದೇನಾ ಪಡೆಗಾ (ನೀವು ಏನು ಮಾಡಿದ್ದೀರಿ ಎಂದು ನಿಮಗೆ ತಿಳಿದಿದೆ. ಅದರ ಬೆಲೆಯನ್ನು ನೀವು ತೆರಬೇಕಾಗುತ್ತದೆ )” ಎಂದು ಜೀವ ಬೆದರಿಕೆ ಹಾಕಿದ್ದಾರೆ.
![sameer whankhade aryan khan](https://sp-ao.shortpixel.ai/client/to_webp,q_glossy,ret_img,w_601,h_337/https://vijayatimes.com/wp-content/uploads/2022/05/Untitled-design-2022-05-27T153840.930-1024x576.jpg)
ಮತ್ತೊಂದು ಸಂದೇಶದಲ್ಲಿ, “ತುಮ್ಕೋ ಖತಮ್ ಕರ್ ದೇಂಗೆ (ನಿಮ್ಮನ್ನು ಕೊಂದು ಹಾಕುತ್ತೇವೆ)” ಎಂದು ನೇರವಾಗಿ ಕೊಲ್ಲುವ ಬೆದರಿಕೆ ಹಾಕಿದ್ದಾರೆ. ಇದರ ಬೆನ್ನಲ್ಲೇ ಸಮೀರ್ ವಾಂಖೆಡೆ ಅವರು ಗೋರೆಗಾಂವ್ ಪೊಲೀಸರನ್ನು ಸಂಪರ್ಕಿಸಿದ್ದು, ಪೊಲೀಸರು ಎಫ್ಐಆರ್(FIR) ದಾಖಲಿಸಿಕೊಂಡಿದ್ದಾರೆ. ಈ ಸಂಬಂಧ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಗೋರೆಗಾಂವ್ ಪೊಲೀಸರು ತಿಳಿಸಿದ್ದಾರೆ. ಇನ್ನು ‘ಅಮನ್’ ಹೆಸರಿನ ಟ್ವಿಟರ್ ಖಾತೆಯು ಶೂನ್ಯ ಅನುಯಾಯಿಗಳನ್ನು ಹೊಂದಿದ್ದು, ಸಮೀರ್ವಾಂಖೆಡೆಗೆ ಬೆದರಿಕೆ ಹಾಕುವ ಉದ್ದೇಶದಿಂದ ರಚಿಸಲಾಗಿದೆ ಎಂದು ಶಂಕಿಸಲಾಗಿದೆ.
2021ರ ಅಕ್ಟೋಬರ್ನಲ್ಲಿ ಮುಂಬೈನ ಕ್ರೂಸ್ನಲ್ಲಿ ಡ್ರಗ್ಸ್ ಪಾರ್ಟಿ ಮಾಡಿದ ಆರೋಪದ ಮೇಲೆ ಬಾಲಿವುಡ್ನ ಖ್ಯಾತ ನಟ ಶಾರುಖ್ ಖಾನ್(Sharukh Khan) ಅವರ ಮಗ ಆರ್ಯನ್ ಖಾನ್(Aryan Khan) ಸೇರಿದಂತೆ ಒಟ್ಟು 19 ಜನರನ್ನು ಮಹಾರಾಷ್ಟ್ರದ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಬಂಧಿಸಿತ್ತು. ಈ ವೇಳೆ ಎನ್ಸಿಬಿ ಮುಖ್ಯಸ್ಥರಾಗಿದ್ದ ಸಮೀರ್ ವಾಂಖೆಡೆ ಹೆಚ್ಚು ಚರ್ಚೆಯಾಗಿದ್ದರು.