ಕೇಂದ್ರ ಮಾಜಿ ಸಚಿವ, ರೈತ ನಾಯಕ ಬಾಬಾಗೌಡ ಪಾಟೀಲ ನಿಧನ: ಸಿಎಂ ಯಡಿಯೂರಪ್ಪ, ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಕುಮಾರಸ್ವಾಮಿ ಸೇರಿ ಹಲವರ ಸಂತಾಪ

ಬೆಂಗಳೂರು, ಮೇ. 21: ಬೆಳಗಾವಿ-ಕರ್ನಾಟಕ ರಾಜ್ಯದಲ್ಲಿ ರೈತ ಕ್ರಾಂತಿ ಮಾಡಿದ್ದ ಕೇಂದ್ರದ ಮಾಜಿ ಸಚಿವ, ರೈತರ ನಾಯಕ ಬಾಬಾಗೌಡ ಪಾಟೀಲ ಶುಕ್ರವಾರ ಬೆಳಗ್ಗೆ ನಿಧನರಾಗಿದ್ದಾರೆ.

ಕಳೆದ ಒಂದು ವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ.

ಬೆಳಗಾವಿ ಜಿಲ್ಲೆಯ ಚಿಕ್ಕ ಬಾಗೇವಾಡಿ ಗ್ರಾಮದವರಾದ ಪಾಟೀಲ ಅವರು ರೈತಪರ ಹೋರಾಟದಲ್ಲಿ ಸಕ್ರಿಯರಾಗಿದ್ದರು. ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಕೇಂದ್ರದ ಮಾಜಿ ಸಚಿವ, ರೈತರ ನಾಯಕ ಬಾಬಾಗೌಡ ಪಾಟೀಲ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಸಿಎಂಗಳಾದ ಎಚ್.ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯ ಸೇರಿದಂತೆ ಹಲವು ರಾಜಕೀಯ ನಾಯಕರು ಪಕ್ಷಾತೀತವಾಗಿ ಸಂತಾಪ ಸೂಚಿಸಿದ್ದಾರೆ.

ಬಾಬಗೌಡ ಪಾಟೀಲರ ಅವರ ನಿಧನದಿಂದ ರೈತಪರ ಕಾಳಜಿ ಹೊಂದಿದ್ದ ನಾಯಕರನ್ನು ಕಳೆದುಕೊಂಡಂತಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ, ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಪ್ರಾರ್ಥಿಸಿದ್ದಾರೆ.

ಅಂತೆಯೇ, ರೈತ ಚಳುವಳಿಯ ಮುಂಚೂಣಿ ನಾಯಕ
ಬಾಬಾಗೌಡ ಪಾಟೀಲ್ ಶಾಸಕರಾಗಿ, ಕೇಂದ್ರ ಸಚಿವರಾಗಿ ಬದ್ಧತೆಯಿಂದ ಕಾರ್ಯ ನಿರ್ವಹಿಸಿದವರು. ಸಂಕಷ್ಟದಲ್ಲಿರುವ ರೈತ‌ ಸಮುದಾಯಕ್ಕೆ ಪಾಟೀಲ ಅವರಂತಹ ನಾಯಕರ ಅಗತ್ಯವಿರುವಾಗಲೇ ಅವರು ಅಗಲಿರುವುದು ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಶಾಂತಿ‌ ಕೋರುವೆ. ಅವರ ಕುಟುಂಬದ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ ಎ‌ಂದು ಮಾಜಿ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.

ಕೇಂದ್ರದ ಮಾಜಿ ಸಚಿವ ಹಾಗೂ ರೈತ ಸಮುದಾಯದ ಪ್ರಭಾವಿ ನಾಯಕರಾಗಿದ್ದ ಬಾಬಗೌಡ ಪಾಟೀಲ್ ಅವರ ನಿಧನ ತೀವ್ರ ನೋವುಂಟು ಮಾಡಿದೆ. ರೈತರ ಪರ ಧ್ವನಿಯಾಗಿ ನಾಡಿನ ಅನ್ನದಾತರ ಕಷ್ಟ- ನಷ್ಟಗಳಿಗೆ ಸದಾ ಸ್ಪಂದಿಸುತ್ತಿದ್ದ ಅವರ ನಿಧನ ವಿಶೇಷವಾಗಿ ರೈತ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ.

ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ಸಚಿವರಾಗಿದ್ದ ಬಾಬಗೌಡ ಪಾಟೀಲ್, ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ, ರೈತರಿಗೆ ಸದಾ ಸ್ಪಂದಿಸುತ್ತಿದ್ದ ಅಪರೂಪದ ಜನಪರ ಕಾಳಜಿಯುಳ್ಳ ನಾಯಕರಾಗಿದ್ದರು. ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಯಿಂದ ದೇಶದ ಅನ್ನದಾತರು ಕವಲುದಾರಿಯಲ್ಲಿ ಇರುವಾಗಲೇ, ರೈತ ಪರ ನಾಯಕನೊಬ್ಬ ಆಗಲಿರುವುದು ನಿಜಕ್ಕೂ ಆಘಾತ ತಂದಿದೆ.

ಭಗವಂತನು ಅವರ ಆತ್ಮಕ್ಕೆ ಶಾಂತಿಯನ್ನು ನೀಡಿ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಕಂಬನಿ ಮಿಡಿದಿದ್ದಾರೆ.

Exit mobile version