ಸಮುದ್ರದ ಮೇಲೆ ನಿರ್ಮಿಸಿರುವ ಭಾರತದ ಅತಿ ಉದ್ದದ ‘ಅಟಲ್ ಸೇತು’ (Atal Sethu) ಇಂದು (ಜ.12) ಲೋಕಾರ್ಪಣೆಗೊಳ್ಳಲಿದ್ದು, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಈ ಸಮುದ್ರ ಸೇತುವೆಯನ್ನು ಉದ್ಘಾಟಿಸಲಿದ್ದಾರೆ.
ಮುಂಬೈನ (Mumbai) ಸೆವ್ರಿ- ರಾಯಗಡದ ನ್ಹಾವಾ ಶೇವಾ ಮಧ್ಯೆ ಸಂಪರ್ಕ ಕಲ್ಪಿಸಲು ಸುಮಾರು 22ಕಿಮೀ ಉದ್ದದ ಆರು ಲೇನ್ ಸೇತುವೆಯು ಈ ಎರಡು ಪ್ರದೇಶಗಳು ನಡುವಿನ ಪ್ರಯಾಣದ ಅವಧಿಯನ್ನು ಈಗಿರುವ ಎರಡು ಗಂಟೆಗಳಿಂದ ಸುಮಾರು 15-20 ನಿಮಿಷಗಳಿಗೆ ಇಳಿಸಲಿದೆ. ಸುಮಾರು 18 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.
ಪ್ರತಿನಿತ್ಯ ಸುಮಾರು 70 ಸಾವಿರ ವಾಹನಗಳು ಸಂಚರಿಸುವ ನಿರೀಕ್ಷೆ ಇದೆ ಎಂದು ಮಹಾರಾಷ್ಟ್ರ (Maharashtra) ಸರ್ಕಾರ ತಿಳಿಸಿದೆ. ಇಂದಿನಿಂದ ಅಟಲ್ ಸೇತುವೆ ಉದ್ಘಾಟನೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು ಸೇತುವೆಯನ್ನು ಪ್ರವೇಶಿಸುವ ಭಾಗದಲ್ಲಿ ಬಿಜೆಪಿಯ ಬಾವುಟಗಳು ಮತ್ತು ಪ್ರಧಾನಿ ಮೋದಿಯ (Modi) ಬ್ಯಾನರ್ಗಳು ರಾರಾಜಿಸುತ್ತಿವೆ.
ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ (Atal Bihari Vajpayee) ಅವರ ಗೌರವಾರ್ಥವಾಗಿ ಈ ಸೇತುವೆಗೆ ಅಟಲ್ ಸೇತು ಎಂದೂ ಹೆಸರಿಡಲಾಗಿದ್ದು, ನಾಲ್ಕು ಚಕ್ರದ ವಾಹನಗಳ ವೇಗದ ಮಿತಿಯನ್ನು 100ಕೀ.ಮಿ. ನಿಗದಿ ಮಾಡಲಾಗಿದೆ. ಹಾಗಾಗಿ ದೇಶದ ಅತಿ ಉದ್ಧದ ಸೇತುವೆ ಮೇಲೆ ಬೈಕ್, ಆಟೋ, ಟ್ರ್ಯಾಕ್ಟರ್, ಭಾರೀ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.
ಸೇತುವೆಯ ಏಕಮುಖ ಸಂಚಾರಕ್ಕೆ 250 ರೂಪಾಯಿ, ದ್ವಿಮುಖ ಸಂಚಾರಕ್ಕೆ 375 ರೂಪಾಯಿ ಶುಲ್ಕ ಇರಲಿದ್ದು, ಒಂದು ವರ್ಷದ ಬಳಿಕ ರಾಜ್ಯ ಸರ್ಕಾರ, ಟೋಲ್ ದರವನ್ನು ಮರು ಪರಿಷ್ಕರಣೆ ಮಾಡುವುದಾಗಿ ಹೇಳಿಕೊಂಡಿದೆ.
ಅಟಲ್ ಸೇತುವೆಯ ಪ್ರಮುಖ ಅಂಶಗಳು:
ಇದು 16.5 ಕಿಮೀ ಉದ್ದದ ಸಮುದ್ದ ಮೇಲಿನ ಸೇತುವೆ ಹಾಗೂ 5.5 ಕಿಮೀ ಉದ್ದದ ಭೂಭಾಗದ ರಸ್ತೆಯನ್ನು ಒಳಗೊಂಡಿದ್ದು, ಎಂಟಿಎಚ್ಎಲ್ 6 ಪಥದ ಸಂಪರ್ಕ ಸೇತುವೆಯಾಗಿದೆ. ವರದಿಗಳ ಪ್ರಕಾರ ಈ ಸಮುದ್ರ ಸೇತುವೆಯನ್ನು ನಿರ್ಮಿಸಲು ಸುಮಾರು 1,77,903 ಮೆಟ್ರಿಕ್ ಟನ್ ಉಕ್ಕು ಮತ್ತು 5,04,253 ಮೆಟ್ರಿಕ್ ಟನ್ ಸಿಮೆಂಟ್ ಬಳಸಲಾಗಿದೆ.
ಮುಂಬೈ ದ್ವೀಪ ನಗರವನ್ನು ಮುಖ್ಯ ಭೂಭಾಗಕ್ಕೆ ಸಂಪರ್ಕಿಸುವ ಕನೆಕ್ಟರ್ ಪರಿಕಲ್ಪನೆಯನ್ನು ಮೊದಲು 1962ರಲ್ಲಿ ‘ಮುಂಬೈ ಮೆಟ್ರೋಪಾಲಿಟನ್ ಪ್ರದೇಶಕ್ಕಾಗಿ ರಸ್ತೆ ವ್ಯವಸ್ಥೆಯ ಯೋಜನೆ’ ಎಂಬ ಶೀರ್ಷಿಕೆಯ ಅಧ್ಯಯನದಲ್ಲಿ ಪ್ರಸ್ತಾಪಿಸಲಾಗಿತ್ತು. ಹಲವಾರು ಅಡೆತಡೆಗಳ ನಂತರ ಎಂಎಂಆರ್ಡಿಎ ಜಪಾನ್ ಇಂಟರ್ನ್ಯಾಷನಲ್ ಕೋಆಪರೇಷನ್ ಏಜೆನ್ಸಿ (MMRDA Japan International Cooperation Agency) ಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕುವುದರೊಂದಿಗೆ ಯೋಜನೆಯು ಕಾರ್ಯರೂಪಕ್ಕೆ ಬಂತು.
ಭವ್ಯಶ್ರೀ ಆರ್ ಜೆ