ಬೆಂಗಳೂರು, ಡಿ. 26: ಕೊರೋನಾ ಬಂದ ನಂತರ ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಯಾರು ಸರಿಯಾಗಿ ಮಾಸ್ಕ್ ಧರಿಸುವುದಿಲ್ಲವೋ ಅಂತಹ ಜನರ ವಿರುದ್ಧ ಬಿಬಿಎಂಪಿ ಮಾರ್ಷಲ್ಗಳು ದಂಡ ಸಂಗ್ರಹಿಸುತ್ತಿದ್ದಾರೆ. ಆದರೆ ಜಯನಗರ ಒಂದನೇ ಬ್ಲಾಕ್ನಲ್ಲಿ ಯುವಕ ತಾನೇ ಮಾರ್ಷಲ್ ಎಂದು ಹೇಳಿಕೊಂಡು ಜನರಿಂದ ದಂಡ ಸಂಗ್ರಹಿಸುತ್ತಿದ್ದ ಎಂಬ ಪ್ರಕರಣ ಬೆಳಕಿಗೆ ಬಂದಿದೆ. ಕಿರಣ್(19), ಜಯನಗರ ಒಂದನೇ ಬ್ಲಾಕ್ನಲ್ಲಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದ ವ್ಯಕ್ತಿ.
ಸರಿಯಾಗಿ ಮಾಸ್ಕ್ ಧರಿಸದೆ ಇದ್ದವರಿಂದ ಹಣ ಸಂಗ್ರಹಿಸಿ ಜೇಬು ತುಂಬಿಸಿಕೊಂಡು ಹೋಗುತ್ತಿದ್ದ ಈ ವ್ಯಕ್ತಿಯನ್ನು ಗಮನಿಸಿದ ರಿಯಲ್ ಮಾರ್ಷಲ್ಗಳು ಆತನನ್ನು ಹಿಡಿದು ತಿಲಕ್ ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಚೀಫ್ ಮಾರ್ಷಲ್ ರಾಜ್ಬೀರ್ ಸಿಂಗ್ ಕಿರಣ್ ಎಂಬುವನು ವೈರ್ಲೆಸ್ ವಾಕಿಟಾಕಿ ಹಾಗೂ ಬಿಬಿಎಂಪಿ ಹೆಸರು ಇರುವ ಫೈಲ್ ಇಟ್ಟಿಕೊಂಡು ಸಾರ್ವಜನಿಕರಿಂದ ದಂಡ ವಸೂಲಿ ಮಾಡುತ್ತಿದ್ದನು ಎಂದು ತಿಳಿದು ಬಂದಿದೆ. ಯಾರಾದರೂ ಮಾರ್ಷಲ್ ಸಮವಸ್ತ್ರ ಧರಿಸದೆ ಹಾಗೂ ಐಡಿ ಕಾರ್ಡ್ ಇಲ್ಲದೆ ದಂಡ ಸಂಗ್ರಹಿಸುತ್ತಿದ್ದರೆ ನೇರವಾಗಿ ಪೊಲೀಸರಿಗೆ ದೂರು ನೀಡಬೇಕೆಂದು ಹೇಳಿದ್ದಾರೆ.