ದೇವಮೂಲೆಯಲ್ಲಿರುವ ಮಾಗಡಿಯಿಂದ ಹೆಚ್.ಡಿ ಕುಮಾರಸ್ವಾಮಿ ಸ್ಪರ್ಧೆ..?

JDS

ಮುಂಬರುವ 2023ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ(Vidhansabha Elections) ಜೆಡಿಎಸ್(JDS) ಶಾಸಕಾಂಗ ಪಕ್ಷದ ನಾಯಕರಾಗಿರುವ ಎಚ್.ಡಿ. ಕುಮಾರಸ್ವಾಮಿ(HD Kumarswamy) ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕೆಂಬ ಚರ್ಚೆ ಜೆಡಿಎಸ್‍ನಲ್ಲಿ ಶುರುವಾಗಿದೆ.

ಸಾಮಾನ್ಯವಾಗಿ ರಾಜಕೀಯದಲ್ಲಿ ಪ್ರಬಲ ನಾಯಕರಿಗೆ ಒಂದು ನಿರ್ಧಿಷ್ಟ ಮತ್ತು ಸುರಕ್ಷಿತ ಕ್ಷೇತ್ರವಿರುತ್ತದೆ. ಆದರೆ ಕುಮಾರಸ್ವಾಮಿ ಅವರ ವಿಷಯದಲ್ಲಿ ಮಾತ್ರ ಈ ಮಾತು ನಿಜವಲ್ಲ. ಏಕೆಂದರೆ ಕುಮಾರಸ್ವಾಮಿ ಅವರು ತಮ್ಮ ರಾಜಕೀಯ ಜೀವನದಲ್ಲಿ ಅನೇಕ ಕ್ಷೇತ್ರಗಳಿಂದ ಸ್ಪರ್ಧಿಸಿದ್ದಾರೆ. ಹೀಗಾಗಿ ಅವರು ಯಾವುದೇ ಒಂದು ಕ್ಷೇತ್ರಕ್ಕೆ ಸೀಮಿತವಾದ ರಾಜಕಾರಣಿಯಲ್ಲ. ಇನ್ನು ತಮ್ಮ ರಾಜಕೀಯ ತಂತ್ರಗಾರಿಕೆಗೆ ತಕ್ಕಂತೆ ಕ್ಷೇತ್ರಗಳನ್ನು ಬದಲಿಸುವುದು ದೇವೇಗೌಡರ ಕುಟುಂಬದ ವಾಡಿಕೆ.

1998ರಲ್ಲಿ ಕುಮಾರಸ್ವಾಮಿ ಅವರು ಕನಕಪುರ ಲೋಕಸಭಾ ಕ್ಷೇತ್ರ ಮತ್ತು ಸಾತನೂರು ವಿಧಾನಸಭಾ ಕ್ಷೇತ್ರಗಳಿಂದ ಅಭ್ಯರ್ಥಿಯಾಗಿದ್ದರು. 2004ರಲ್ಲಿ ರಾಮನಗರ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರು. ಆದರೆ 2018ರಲ್ಲಿ ರಾಮನಗರದೊಂದಿಗೆ ಚನ್ನಪಟ್ಟಣದಿಂದಲೂ ಸ್ಪರ್ಧಿಸಿ ಗೆದ್ದರು. ಹೀಗಾಗಿ ಸದಾ ಕ್ಷೇತ್ರಗಳನ್ನು ಬದಲಾಯಿಸುವ ಕುಮಾರಸ್ವಾಮಿ ಅವರು ಇದೀಗ ಮಾಗಡಿ ಕ್ಷೇತ್ರಕ್ಕೆ ಬರಲು ಸಿದ್ದತೆ ನಡೆಸಿದ್ದಾರೆ ಎನ್ನಲಾಗಿದೆ. ಕರ್ನಾಟಕದ ಭೂಪಟದ ಪ್ರಕಾರ ಮಾಗಡಿ ಕ್ಷೇತ್ರ ದೇವಮೂಲೆಯಲ್ಲಿದೆ. ಈ ಕ್ಷೇತ್ರದಿಂದ ಸ್ಪರ್ಧಿಸಿದರೆ ಮುಖ್ಯಮಂತ್ರಿಯಾಗುವ ಸಾಧ್ಯತೆ ಹೆಚ್ಚಿದೆ.

ಹೀಗಾಗಿ ಮಾಗಡಿ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಕುಮಾರಸ್ವಾಮಿ ಮುಂದಾಗಿದ್ದಾರೆ ಎನ್ನಲಾಗಿದೆ. ಇನ್ನು ಮಾಗಡಿ ಕ್ಷೇತ್ರ ಜೆಡಿಎಸ್‍ನ ಭದ್ರಕೋಟೆ ಎಂದೇ ಹೇಳಬಹುದು. ಈ ಕ್ಷೇತ್ರದಲ್ಲಿ ಸದ್ಯ ಜೆಡಿಎಸ್‍ನ ಎ. ಮಂಜು ಹಾಲಿ ಶಾಸಕರಾಗಿದ್ದಾರೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‍ನಿಂದ ಸ್ಪರ್ಧಿಸಿ ಸುಮಾರು 44 ಸಾವಿರ ಮತಗಳ ಅಂತರದಿಂದ ಕಾಂಗ್ರೆಸ್‍ನ ಎಚ್.ಸಿ. ಬಾಲಕೃಷ್ಣರನ್ನು ಸೋಲಿಸಿದ್ದರು. 2004 ರಿಂದಲೂ ಮಾಗಡಿ ಕ್ಷೇತ್ರ ಜೆಡಿಎಸ್ ಹಿಡಿತದಲ್ಲಿದೆ.

ಹೀಗಾಗಿ ಮಾಗಡಿ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ರೆ ಸುಲಭವಾಗಿ ಗೆಲ್ಲಬಹುದು. ಅದೇ ರೀತಿ ಮುಖ್ಯಮಂತ್ರಿ ಹುದ್ದೆಗೇರಲು ಅದೃಷ್ಟ ಒಲಿಯಬಹುದು ಎಂಬುದು ಕುಮಾರಸ್ವಾಮಿ ಅವರ ಲೆಕ್ಕಾಚಾರ. ಆದರೆ ಈ ಸಂಗತಿಯ ಕುರಿತು ಕುಮಾರಸ್ವಾಮಿ ಅವರೇ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

Exit mobile version